ಸುದ್ದಿಗಳು

ಎನ್‌ಸಿಪಿ ಇಬ್ಭಾಗ: ಅಜಿತ್ ಬಣದ ವಿರುದ್ಧ ವಾದಿಸುವ ಬಗ್ಗೆ ಸರ್ಕಾರಿ ವಕೀಲರ ಗೊಂದಲ, ಹೈಕೋರ್ಟ್‌ನಲ್ಲೊಂದು ತಮಾಷೆ ಪ್ರಸಂಗ

Bar & Bench

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷಕ್ಕೆ (ಎನ್‌ಸಿಪಿ) ಸೇರಿದ ಶಾಸಕರ ಒಂದು ಬಣದಿಂದ ಉಂಟಾದ ರಾಜಕೀಯ ಪಲ್ಲಟವು ನ್ಯಾಯಾಲಯಗಳಲ್ಲಿರುವ ಪಕ್ಷದ ಶಾಸಕರನ್ನು ಒಳಗೊಂಡ ಪ್ರಕರಣಗಳ ಮೇಲೆ ಪರಿಣಾಮ ಬೀರುತ್ತಿರುವಂತೆ ಕಾಣುತ್ತಿದೆ. ಇಷ್ಟು ದಿನ ಯಾರ ವಿರುದ್ಧವಾಗಿ ವಾದವನ್ನು ಮಾಡಲಾಗುತ್ತಿತ್ತೋ ಅದನ್ನು ಈಗ ಮುಂದುವರಿಸಬೇಕೇ, ಬೇಡವೇ ಎನ್ನುವ ಗೊಂದಲ ಸರ್ಕಾರಿ ವಕೀಲರನ್ನು ಕಾಡುತ್ತಿರುವಂತೆ ಕಾಣುತ್ತಿದೆ.

ಇಂತಹ ಒಂದು ಪ್ರಸಂಗ ಬುಧವಾರ ಬಾಂಬೆ ಹೈಕೋರ್ಟ್‌ನಲ್ಲಿ ನಡೆಯಿತು. ಎನ್‌ಸಿಪಿ ಶಾಸಕ ಹಸನ್ ಮುಶ್ರಿಫ್ ವಿರುದ್ಧದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರ ಪರವಾಗಿ ಹಾಜರಿದ್ದ ವಕೀಲರು ಶಾಸಕರ ವಿರುದ್ಧದ ವಾದವನ್ನು ಮುಂದುವರಿಸಬೇಕೇ ಎಂಬ ಬಗ್ಗೆ ತಮಗೆ ಅನಿಶ್ಚಿತತೆ ಇದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಶಾಸಕ ಮುಶ್ರಿಫ್ ಎನ್‌ಸಿಪಿಯ ಅಜಿತ್ ಪವಾರ್ ಬಣಕ್ಕೆ ಸೇರಿದವರು, ಇದೀಗ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ನೇಮಕವಾಗುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಭಾಗವಾಗಿದ್ದಾರೆ. ಪರಿಣಾಮ ಮುಶ್ರಿಫ್‌ ಕೂಡ ಸರ್ಕಾರದ ಭಾಗವೇ ಆಗಿದ್ದಾರೆ.

ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಕೊಲ್ಲಾಪುರದಲ್ಲಿ ಮುಶ್ರಿಫ್‌ ವಿರುದ್ಧ ದೂರು ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅವರು ʼಅವಿಭಜಿತ ಎನ್‌ಸಿಪಿʼ ಯ ಸದಸ್ಯರಾಗಿದ್ದಾಗ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಕೊಲ್ಲಾಪುರದ ಮ್ಯಾಜಿಸ್ಟ್ರೇಟ್ ಅವರು ಮುಶ್ರಿಫ್‌ ವಿರುದ್ಧ ವಿಚಾರಣೆಗೂ ಆದೇಶಿಸಿದ್ದರು.

ತಮ್ಮ ವಿರುದ್ಧ ಕೊಲ್ಲಾಪುರದಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಮುಶ್ರಿಫ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಮನವಿಯ ವಿಚಾರಣೆ  ನ್ಯಾಯಮೂರ್ತಿಗಳಾದ ನಿತಿನ್ ಸಾಂಬ್ರೆ ಮತ್ತು ಆರ್‌ಎನ್ ಲಡ್ಡಾ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು.

ಪ್ರಕರಣದ ರದ್ದತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಜುಲೈ 6 ರಂದು ನಡೆದಿತ್ತು. ಆಗ ಪಬ್ಲಿಕ್ ಪ್ರಾಸಿಕ್ಯೂಟರ್ ಜೆ ಪಿ ಯಾಗ್ನಿಕ್ ಅವರು ʼಬದಲಾದ ಸನ್ನಿವೇಶʼವನ್ನು ಉಲ್ಲೇಖಿಸಿ ಸೂಚನೆಗಳನ್ನು ಪಡೆಯುವುದಕ್ಕಾಗಿ ಸಮಯಾವಕಾಶ ಕೋರಿದರು.

ಈ ಹಂತದಲ್ಲಿ ನ್ಯಾಯಾಲಯ ತಮಾಷೆಯ ಧಾಟಿಯಲ್ಲಿ ʼಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರು ಸರ್ಕಾರದ ಪರವಾಗಿ ವಾದಿಸುತ್ತಿದ್ದಾರೆಯೇ ಅಥವಾ ಆರೋಪಿ ಪರವಾಗಿ ವಾದಿಸುತ್ತಿದ್ದಾರೆಯೇ?ʼ ಎಂದು ಪ್ರಶ್ನಿಸಿತು. ತನಿಖಾಧಿಕಾರಿ ನ್ಯಾಯಾಲಯದಲ್ಲಿ ಹಾಜರಿದ್ದಾರಾ ಎಂದು ಕೂಡ ನ್ಯಾಯಾಲಯ ಪ್ರಶ್ನಿಸಿತು ಇದಕ್ಕೆ ಪ್ರಾಸಿಕ್ಯೂಟರ್‌ ನಕಾರಾತ್ಮಕ ಪ್ರತಿಕ್ರಿಯೆ ನೀಡಿದರು.

ಮುಶ್ರಿಫ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಬಾದ್ ಪೊಂಡಾ, ಪೊಲೀಸರು ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಅಡ್ಡ ದೂರುಗಳಿವೆ. ಮುಶ್ರಿಫ್‌ ಅವರಿಗೆ ಬಂಧನದಿಂದ ರಕ್ಷಣೆ ನೀಡಲಾಗಿದೆ ಎಂದು ತಿಳಿಸಿರು.

ಪ್ರಾಸಿಕ್ಯೂಟರ್ ಕೋರಿಕೆಯ ಮೇರೆಗೆ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 22ಕ್ಕೆ ಮುಂದೂಡಿದ ನ್ಯಾಯಾಲಯ ಮುಶ್ರಿಫ್‌ ಅವರಿಗೆ ನೀಡಲಾಗಿರುವ ಮಧ್ಯಂತರ ರಕ್ಷಣೆಯ ಆದೇಶವನ್ನು ವಿಸ್ತರಿಸಿತು.