Anil Ambani and Bombay High Court  Twitter
ಸುದ್ದಿಗಳು

ವಂಚನೆ ಪ್ರಕರಣ: ಅನಿಲ್‌ ಅಂಬಾನಿ ವಿರುದ್ಧ ಮತ್ತೆ ಕ್ರಮ ಕೈಗೊಳ್ಳಲು ಬಾಂಬೆ ಹೈಕೋರ್ಟ್‌ ಹಸಿರು ನಿಶಾನೆ

ಅಂಬಾನಿಗೆ ಏಕಸದಸ್ಯ ಪೀಠ ನೀಡಿದ್ದ ಪರಿಹಾರ ಅಕ್ರಮ ಮತ್ತು ಕಾನೂನುಬಾರಹಿರ ಎಂದಿದೆ ವಿಭಾಗೀಯ ಪೀಠ.

Bar & Bench

ವಂಚನೆ ವರ್ಗೀಕರಣ ಕುರಿತಂತೆ ಆರ್‌ಬಿಐ 2024ರಲ್ಲಿ ನೀಡಿದ್ದ ಮಹಾ ನಿರ್ದೇಶನಗಳ ಅಡಿಯಲ್ಲಿ ಉದ್ಯಮಿ ಅನಿಲ್‌ ಅಂಬಾನಿ ವಿರುದ್ಧ ಮ ಕೈಗೊಳ್ಳದಂತೆ ಮೂರು ಬ್ಯಾಂಕುಗಳು ಮತ್ತು ಆಡಿಟರ್ ಬಿಡಿಒ ಇಂಡಿಯಾ ಎಲ್‌ಎಲ್‌ಪಿಗೆ ಏಕಸದಸ್ಯ ಪೀಠ ನೀಡಿದ್ದ ತಾತ್ಮಕಾಲಿಕ ಆದೇಶವನ್ನು ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠ ಇಂದು ರದ್ದುಗೊಳಿಸಿದೆ.

ಅಂಬಾನಿಗೆ ಏಕಸದಸ್ಯ ಪೀಠ ನೀಡಿದ್ದ ಪರಿಹಾರ ಅಕ್ರಮ ಮತ್ತು ಕಾನೂನುಬಾರಹಿರ ಎಂದು ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಖಡ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಇಂದಿನ ತೀರ್ಪಿಗೆ ಕನಿಷ್ಠ ನಾಲ್ಕು ವಾರಗಳ ಕಾಲ ಸ್ಥಗಿತ ನೀಡುವಂತೆ ಅನಿಲ್‌ ಅಂಬಾನಿ ಪರ ವಕೀಲರು ಮನವಿ ಮಾಡಿದರು. ಸ್ಥಗಿತ ತೆರವುಗೊಳ್ಳುವುದರಿಂದ ವರದಿಯನ್ನು ಅವಲಂಬಿಸಿರುವ ಇತರ ಬಾಕಿ ಇರುವ ದಾವೆಗಳಿಗೆ ಪರಿಣಾಮ ಬೀರುತ್ತದೆ ಎಂದು ಅವರು ವಾದಿಸಿದರು.

ಆದರೆ ಆದೇಶ ಸ್ಥಗಿತಗೊಳಿಸಲು ನಿರಾಕರಿಸಿದ ವಿಭಾಗೀಯ ಪೀಠ ಹಾಗೆ ಮಾಡಿದರೆ ಕಾನೂನುಬಾಹಿರ ಆದೇಶವನ್ನು ಮುಂದುವರಿಸುವಂತಾಗುತ್ತದೆ ಎಂದು ಹೇಳಿತು. ವಿಚಾರಣೆ ವೇಳೆ ಲೆಕ್ಕಪರಿಶೋಧನಾ ಸಂಸ್ಥೆ ತಾನು ಸೆಬಿಯಿಂದ ಮಾನ್ಯತೆ ಪಡೆದ ವಿಶೇಷ ಲೆಕ್ಕಪರಿಶೋಧಕ ಎಂದಿತು.

ಪ್ರಶ್ನೆಯಲ್ಲಿರುವ ಆದೇಶ ಈಗಾಗಲೇ ಕಾನೂನುಬಾಹಿರವಾಗಿದ್ದು ಆದೇಶದ ಕಾರ್ಯಾಚರಣೆಯನ್ನು ಮುಂದಿನ ನಾಲ್ಕು ವಾರಗಳ ಕಾಲ ಮುಂದುವರೆಸಲು ಅನುಮತಿಸಿದರೆ ಕಾನೂನುಬಾಹಿರ ಆದೇಶವನ್ನು ಮುಂದುವರಿಸುವುದಕ್ಕೂ, ಅಕ್ರಮವನ್ನು ಶಾಶ್ವತಗೊಳಿಸುವುದಕ್ಕೂ ಸಮನಾಗುತ್ತದೆ. ಆದ್ದರಿಂದ, ಈ ತೀರ್ಪಿನ ಕಾರ್ಯಾಚರಣೆಗೆ ಸ್ಥಗಿತ ನೀಡುವಂತೆ ಮಾಡಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಾಲಯ ನುಡಿದಿದೆ.

ಡಿಸೆಂಬರ್ 2025ರಲ್ಲಿ ನ್ಯಾಯಮೂರ್ತಿ ಮಿಲಿಂದ್‌ ಜಾಧವ್‌ ಅವರಿದ್ದ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಬ್ಯಾಂಕ್‌ ಆಫ್‌ ಬರೋಡ, ಐಡಿಬಿಐ ಬ್ಯಾಂಕ್‌ ಹಾಗೂ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ಗಳು ಬಾಂಬೆ ಹೈಕೋರ್ಟ್‌ ವಿಭಾಗೀಯ ಪೀಠದ ಮೊರೆ ಹೋಗಿದ್ದವು.

ವಂಚನೆ ಕುರಿತು 2016ರಲ್ಲಿದ್ದ ವ್ಯವಸ್ಥೆಯ ಬದಲಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2024ರಲ್ಲಿ ನೀಡಿದ್ದ ಮಹಾ ನಿರ್ದೇಶನಗಳಡಿ ಅಗತ್ಯವಿರುವಂತೆ ಆ ವರದಿಗೆ ಅರ್ಹ ಚಾರ್ಟರ್ಡ್ ಅಕೌಂಟೆಂಟ್ ಅವರ ಸಹಿ ಇರಲಿಲ್ಲವಾದ್ದರಿಂದ ಬಿಡಿಒ ಸಂಸ್ಥೆ ನೀಡಿದ ಲೆಕ್ಕಪರಿಶೋಧನಾ ವರದಿ ನಂಬಲರ್ಹವಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ಏಕಸದಸ್ಯ ಪೀಠ ತಿಳಿಸಿತ್ತು.

ಅಂಬಾನಿಯ ದಾವೆ ಕಾಲಾವಧಿ ಮೀರಿದ್ದು ಹಾಗೂ ಮೂರನೇ ವ್ಯಕ್ತಿಯ ಆರ್‌ಟಿಐ ಅರ್ಜಿಯ ಮೇಲೆ ಮಾತ್ರ ಆಧಾರಿತವಾಗಿದೆ ಎಂದು ವಿಭಾಗೀಯ ಪೀಠಕ್ಕೆ ಸಲ್ಲಿಸಿದ್ದ ಮೇಲ್ಮವನಿಯಲ್ಲಿ ಬ್ಯಾಂಕ್‌ಗಳು ತಿಳಿಸಿದ್ದವು. ವರದಿಯಲ್ಲಿನ ಹಣದ ದುರ್ಬಳಕೆ, ಕೃತಕ ಸಾಲಗಾರರರ ಸೃಷ್ಟಿ ಮತ್ತು ಸಾಲದ ದುರುಪಯೋಗ ಕುರಿತ ಆರೋಪಗಳನ್ನು ಪ್ರಶ್ನಿಸದೆ, ಸಹಿ ಹಾಕಿದ ವ್ಯಕ್ತಿ ಐಸಿಎಐ ಸದಸ್ಯನಲ್ಲ ಎಂಬ ತಾಂತ್ರಿಕ ಆಧಾರವನ್ನಷ್ಟೇ ಅಂಬಾನಿ ಪ್ರಶ್ನಿಸಿದ್ದಾರೆ ಎಂದು ಬ್ಯಾಂಕ್‌ಗಳು ತಿಳಿಸಿದ್ದವು.