Navneet Rana and Ravi Rana
Navneet Rana and Ravi Rana  Facebook
ಸುದ್ದಿಗಳು

ಹನುಮಾನ್ ಚಾಲೀಸಾ ಪ್ರಕರಣ: ಎಫ್ಐಆರ್ ರದ್ದತಿ ಕೋರಿದ್ದ ರಾಣಾ ದಂಪತಿ ಮನವಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್

Bar & Bench

ಹನುಮಾನ್ ಚಾಲೀಸಾ ಪಠಣ ವಿವಾದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸೇವೆಯಲ್ಲಿರುವವರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸಂಸದೆ ನವನೀತ್‌ ರಾಣಾ ಮತ್ತು ಅವರ ಪತಿ ಮಹಾರಾಷ್ಟ್ರ ವಿಧಾನಸಭೆಯ ಪಕ್ಷೇತರ ಸದಸ್ಯ ರವಿ ರಾಣಾ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದತಿಗೆ ಬಾಂಬೆ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.

ಸಾರ್ವಜನಿಕ ನೌಕರನ ಮೇಲಿನ ಹಲ್ಲೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಎರಡನೇ ಎಫ್‌ಐಆರ್‌ ದಾಖಲಿಸಿ ಅರ್ಜಿದಾರರಿಗೆ ಕಿರುಕುಳ ನೀಡಲು ಮತ್ತು ಜಾಮೀನು ದೊರೆಯದಂತೆ ಮಾಡಲು ಉದ್ದೇಶಿಸಲಾಗಿದೆ ಎಂದು ದಂಪತಿಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಇದಕ್ಕೂ ಮುನ್ನ ಅವರ ವಿರುದ್ಧ ದೇಶದ್ರೋಹದ ಎಫ್‌ಐಆರ್ ದಾಖಲಾಗಿತ್ತು.

“ಎರಡೂ ಘಟನೆಗಳು (ಒಂದು ದೇಶದ್ರೋಹಕ್ಕೆ ಮತ್ತು ದಾಳಿಗೆ) ಪ್ರತ್ಯೇಕವಾಗಿದ್ದು ಅರ್ಜಿ ತಿರಸ್ಕರಿಸಲು ಅರ್ಹವಾಗಿದೆ” ಎಂದು ನ್ಯಾಯಮೂರ್ತಿಗಳಾದ ಪಿ ಬಿ ವರಾಲೆ ಮತ್ತು ಎಸ್‌ ಎಂ ಮೋದಕ್ ಅವರಿದ್ದ ಪೀಠ ಹೇಳಿತು.

ಆದರೆ ಆದೇಶದಲ್ಲಿ ಮಾಡಲಾದ ಅವಲೋಕನಗಳಿಂದ ಮ್ಯಾಜಿಸ್ಟ್ರೇಟ್‌ ಪ್ರಭಾವಿತರಾಗುವಂತಿಲ್ಲ ಮತ್ತು ಅರ್ಜಿದಾರರ ಜಾಮೀನು ಅರ್ಜಿಯನ್ನು ಅದರ ಸ್ವಂತ ಅರ್ಹತೆ ಮೇಲೆ ಆಲಿಸಬೇಕು” ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

“ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದ ಮುಂದೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಬೆದರಿಕೆ ಹಾಕಿರುವ ಅರ್ಜಿದಾರರ ವರ್ತನೆಗೆ ಸಂಬಂಧಿಸಿದಂತೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. "ರಾಜಕೀಯವಾಗಿ ಸಕ್ರಿಯವಾಗಿರುವ ಅರ್ಜಿದಾರರು ಜವಾಬ್ದಾರಿಯುತವಾಗಿ ವರ್ತಿಸಬೇಕು. ದೊಡ್ಡ ಜವಾಬ್ದಾರಿಯೊಂದಿಗೆ ದೊಡ್ಡ ಅಧಿಕಾರ ಲಭಿಸುತ್ತದೆ. (ರಾಜಕೀಯವಾಗಿ) ಸಕ್ರಿಯ ಜೀವನ ನಡೆಸುತ್ತಿರುವ ವ್ಯಕ್ತಿಗಳ ಜವಾಬ್ದಾರಿಯುತ ನಡೆಯನ್ನು ನಿರೀಕ್ಷಿಸುವುದು ಸೂಕ್ತ ನಿರೀಕ್ಷೆಯಾಗಿದೆ” ಎಂದು ಆದೇಶ ತಿಳಿಸಿತು.

ರಾಜಕೀಯ ವಿರೋಧಿಗಳ ನಡುವಿನ ಸೌಹಾರ್ದ ಸಂಬಂಧಕ್ಕೆ ಸಿದ್ಧಾಂತಗಳು ಮತ್ತು ರಾಜಕೀಯ ನಂಬಿಕೆಗಳಲ್ಲಿನ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು ಎಂದು ಮತ್ತೊಂದು ಪ್ರಕರಣದಲ್ಲಿ ಎರಡು ದಿನಗಳ ಹಿಂದೆ ಹೇಳಿದ್ದು ಕಿವಿಗೆ ಬಿದ್ದಂತಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.