Gautam Navlakha and Bombay High Court
Gautam Navlakha and Bombay High Court  sabrangindia.in
ಸುದ್ದಿಗಳು

ನವಲಖಾಗೆ ಜಾಮೀನು ತಿರಸ್ಕರಿಸಿದ್ದ ಆದೇಶ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್: ಮತ್ತೆ ಪ್ರಕರಣ ಆಲಿಸಲು ಸೂಚನೆ

Bar & Bench

ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ, ಸಾಮಾಜಿಕ ಹೋರಾಟಗಾರ ಗೌತಮ್‌ ನವಲಖಾ ಅವರಿಗೆ ಜಾಮೀನು ತಿರಸ್ಕರಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ ಗುರುವಾರ ರದ್ದುಗೊಳಿಸಿದ್ದು ಜಾಮೀನು ಅರ್ಜಿ ಮತ್ತೆ ಆಲಿಸುವಂತೆ ವಿಶೇಷ ನ್ಯಾಯಾಧೀಶರಿಗೆ ನಿರ್ದೇಶಿಸಿದೆ [ಗೌತಮ್ ನವಲಾಖಾ ಮತ್ತು ಎನ್‌ಐಎ ಮತ್ತಿತರರ ನಡುವಣ ಪ್ರಕರಣ].

ಕೆಳ ನ್ಯಾಯಾಲಯದ ಆದೇಶದಲ್ಲಿನ ತಾರ್ಕಿಕತೆ ಅತ್ಯಂತ ನಿಗೂಢವಾಗಿದ್ದು ಪ್ರಾಸಿಕ್ಯೂಷನ್ ಅವಲಂಬಿಸಿರುವ ಸಾಕ್ಷ್ಯಗಳ ವಿಶ್ಲೇಷಣೆ ಅದರಲ್ಲಿ ಇಲ್ಲ ಎಂದು ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಪಿ ಡಿ ನಾಯಕ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.  

ನ್ಯಾಯಾಲಯವು ತನ್ನ ಆದೇಶದಲ್ಲಿ, “ಯಾವುದೇ ಸ್ವರೂಪದ ಕಾರಣಗಳನ್ನಾಗಲಿ ನೀಡಿಲ್ಲ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಸೆಕ್ಷನ್ 43 ಡಿ (5) ಅಡಿ ಜಾಮೀನು ನಿರಾಕರಣೆ ಸಂದರ್ಭದಲ್ಲಿ ಅಗತ್ಯವಾಗಿ ನೀಡಬೇಕಾದ ಕಾರಣಗಳನ್ನು ವಿಚಾರಣಾ ನ್ಯಾಯಾಲಯವು ನೀಡಿಲ್ಲ. ಜಾಹೂರ್ ಅಹ್ಮದ್ ಶಾ ವತಾಲಿ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ತಿರಸ್ಕರಿಸುವಾಗ ಸುಪ್ರೀಂ ಕೋರ್ಟ್‌ ಆದೇಶವನ್ನು ಪರಿಗಣಿಸಿಲ್ಲ ಎಂದು ತೋರುತ್ತದೆ” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ಹೊಸದಾಗಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ತೀರ್ಪು ನೀಡಿದ ಪೀಠ ಪ್ರಕರಣವನ್ನು ನ್ಯಾಯಾಲಯಕ್ಕೆ ಹಿಂತಿರುಗಿಸಿತು. ಅಲ್ಲದೆ 4 ವಾರಗಳಲ್ಲಿ ವಿಚಾರಣೆ ಮುಗಿಸುವಂತೆ ವಿಶೇಷ ನ್ಯಾಯಾಧೀಶರಿಗೆ ಅದು ಸೂಚಿಸಿತು.

ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯ ತನ್ನ ಸಾಮಾನ್ಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ 2022ರ ಸೆಪ್ಟೆಂಬರ್ 5ರಂದು ನೀಡಿದ್ದ ಆದೇಶ ಪ್ರಶ್ನಿಸಿ ನವಲಾಖಾ ಅವರು ಸಲ್ಲಿಸಿದ ಮೇಲ್ಮನವಿಯನ್ನು ಪೀಠ ವಿಚಾರಣೆ ನಡೆಸಿತು. ಆದೇಶ ತರ್ಕಬದ್ಧವಾಗಿಲ್ಲ ಎಂದು ನಿನ್ನೆಯ ವಿಚಾರಣೆ ವೇಳೆ ಹೈಕೋರ್ಟ್‌ ಅಭಿಪ್ರಾಯಪಟ್ಟಿತ್ತು.