<div class="paragraphs"><p>PM Narendra Modi and Supreme Court</p><p></p></div>

PM Narendra Modi and Supreme Court

 
ಸುದ್ದಿಗಳು

ಪ್ರಧಾನಿ ಮೋದಿ ಭದ್ರತಾ ಲೋಪ: ತನಿಖೆ ಕೋರಿ ಸುಪ್ರೀಂನಲ್ಲಿ ಅರ್ಜಿ; ಅಧಿಕಾರಿಗಳ ಅಮಾನತಿಗೆ ಮನವಿ

Bar & Bench

ಪಂಜಾಬ್‌ನ ಹುಸೇನ್‌ವಾಲಾದಲ್ಲಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ವಾಹನ ಫ್ಲೈಓವರ್‌ನಲ್ಲಿ ಸಿಲುಕಿಕೊಂಡ ಭದ್ರತಾ ಲೋಪದ ಪ್ರಕರಣದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಲಾಯರ್ಸ್‌ ವಾಯ್ಸ್‌ ಎಂಬ ಸಂಘಟನೆ ಸಲ್ಲಿಸಿದ ಅರ್ಜಿಯ ವಿಚಾರವನ್ನು ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ಇಂದು ಸಿಜೆಐ ರಮಣ ಅವರ ಮುಂದೆ ಪ್ರಸ್ತಾಪಿಸಿದಾಗ ನಾಳೆ ಅದನ್ನು ಆಲಿಸಲು ಸಿಜೆಐ ಸಮ್ಮತಿಸಿದರು.

ಭದ್ರತಾಲೋಪದ ಬಗ್ಗೆ ನ್ಯಾಯಾಲಯದ ಗಮನ ಸೆಳೆದ ಸಿಂಗ್ ಅವರು, "ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ಈ ರಿಟ್ ಅರ್ಜಿಯನ್ನು ಪರಿಗಣಿಸಬೇಕು" ಎಂದು ಸಿಜೆಐ ಅವರಿಗೆ ಮನವಿ ಮಾಡಿದರು. "ನಾವು ಏನು ಮಾಡಬೇಕು?" ಎಂದು ಸಿಜೆಐ ಅವರು ಕೇಳಿದಾಗ "ಇದು ಪುನರಾವರ್ತನೆಯಾಗಬಾರದು ಮೈ ಲಾರ್ಡ್. ಈ ರೀತಿ ಮತ್ತೆ ನಡೆಯುವುದನ್ನು ನಾವು ಬಯಸುವುದಿಲ್ಲ. ಭದ್ರತೆ ಕುರಿತಂತೆ ನ್ಯಾಯಾಲಯದ ನೇತೃತ್ವದಲ್ಲಿ ತನಿಖೆಯ ಅಗತ್ಯವಿದೆ" ಎಂದು ಸಿಂಗ್ ಹೇಳಿದರು. ಆಗ ಪ್ರಕರಣವನ್ನು ನಾಳೆ ಆಲಿಸುವುದಾಗಿ ಸಿಜೆಐ ಪ್ರತಿಕ್ರಿಯಿಸಿದರು.

ಇದಲ್ಲದೆ ಮನವಿಯಲ್ಲಿ ಪಂಜಾಬ್‌ ಮುಖ್ಯ ಕಾರ್ಯದರ್ಶಿ ಅನಿರುದ್ಧ್ ತಿವಾರಿ ಮತ್ತು ಪೊಲೀಸ್ ಮಹಾನಿರ್ದೇಶಕ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಅವರನ್ನು ಅಮಾನತುಗೊಳಿಸುವಂತೆಯೂ ಕೋರಲಾಗಿದೆ. ಅಮಿತ್ ಸಾಹ್ನಿ ಮತ್ತು ಕಮಿಷನರ್ ಆಫ್ ಪೋಲೀಸ್ ಮತ್ತಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿಗೆ ಈ ಘಟನೆಗೆ ವಿರುದ್ಧವಾಗಿದೆ. ಭದ್ರತಾ ಉಲ್ಲಂಘನೆಯ ಬಗ್ಗೆ ಎಲ್ಲಾ ಅಧಿಕೃತ ದಾಖಲೆಗಳು ಮತ್ತು ವಸ್ತುಗಳನ್ನು ಸಂಗ್ರಹಿಸಲು ಭಟಿಂಡಾ ಜಿಲ್ಲಾ ನ್ಯಾಯಾಧೀಶರಿಗೆ ನಿರ್ದೇಶನ ನೀಡುವಂತೆ ವಿನಂತಿಸಿದೆ.

ಪಂಜಾಬ್‌ನ ಪ್ರತಿಭಟನಾಕಾರರು ತಡೆ ಒಡ್ಡಿದ್ದರಿಂದ ಪ್ರಧಾನಿ ಮತ್ತವರ ಬೆಂಗಾವಲು ಪಡೆ ಇಪ್ಪತ್ತು ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡಿತು. ಭದ್ರತಾ ಲೋಪಕ್ಕೆ ಪಂಜಾಬ್‌ನ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಕೇಂದ್ರ ಸರ್ಕಾರ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪಿಸಿದೆ. ಆದರೆ, ಕೊನೆಯ ಕ್ಷಣದಲ್ಲಿ ಪ್ರಧಾನಿ ತಮ್ಮ ಮಾರ್ಗ ಬದಲಾಯಿಸಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರ ಸಮರ್ಥಿಸಿಕೊಂಡಿದೆ.