ಸುದ್ದಿಗಳು

ಕರ್ನಾಟಕ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಅವಸ್ಥಿ: ಅವರ ವೃತ್ತಿ ಬದುಕಿನ ಸಂಕ್ಷಿಪ್ತ ಚಿತ್ರಣ ಇಲ್ಲಿದೆ…

Bar & Bench

ಅಲಹಾಬಾದ್‌ ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರನ್ನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಕೇಂದ್ರ ಸರ್ಕಾರ ನೇಮಿಸಿ ಶನಿವಾರ ಅಧಿಸೂಚನೆ ಹೊರಡಿಸಿದೆ. ಹಿರಿಯ ನ್ಯಾಯಮೂರ್ತಿಗಳಾಗಿದ್ದ ಎಂಟು ಮಂದಿಗೆ ಮುಖ್ಯ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲಾಗಿದ್ದು ಅವರಲ್ಲಿ ಅವಸ್ಥಿ ಕೂಡ ಒಬ್ಬರು.

ನ್ಯಾ. ಅವಸ್ಥಿ ಅವರು ಹುಟ್ಟಿದ್ದು 1960ರಲ್ಲಿ. ಲಖನೌ ವಿಶ್ವವಿದ್ಯಾಲಯದಲ್ಲಿ ಕಾನೂನು ಪಡೆದ ಬಳಿಕ 1987ರಲ್ಲಿ ವಕೀಲರಾಗಿ ಸೇವೆ ಆರಂಭಿಸಿದರು. ಅಲಾಹಾಬಾದ್‌ ಹೈಕೋರ್ಟ್‌ ಲಖನೌ ಪೀಠದ ನ್ಯಾಯಮೂರ್ತಿಯಾಗಿ ಹಲವು ವರ್ಷ ಕರ್ತವ್ಯ ನಿರ್ವಹಿಸಿದ ನ್ಯಾ. ಅವಸ್ಥಿ ಅವರು ಶಿಕ್ಷಣ, ಸಿವಿಲ್‌ ವಿಚಾರಗಳಲ್ಲಿ ಹಲವು ಮಹತ್ವದ ಪ್ರಕರಣಗಳನ್ನು ನಿರ್ವಹಿಸಿದ್ದಾರೆ.

ರಿತುರಾಜ್‌ ಅವಸ್ಥಿ ಲಖನೌದಲ್ಲಿ ಈ ಮೊದಲು ಭಾರತದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. 2009ರಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದರು. ಖಾಯಂ ನ್ಯಾಯಮೂರ್ತಿಯಾಗಿ ಸೇವೆ ಆರಂಭಿಸಿದ್ದು 2010ರಲ್ಲಿ.

ಈ ಹಿಂದೆ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾ., ಎ ಎಸ್‌ ಓಕಾ ಅವರು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. ಆ ಬಳಿಕ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿ ಸತೀಶ್‌ ಚಂದ್ರ ಶರ್ಮಾ ನೇಮಕವಾಗಿದ್ದರು. ಸತೀಶ್‌ ಚಂದ್ರ ಶರ್ಮಾ ಅವರನ್ನು ತೆಲಂಗಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ.