Mahatma Gandhi
Mahatma Gandhi 
ಸುದ್ದಿಗಳು

ಸಾಬರಮತಿ ಪುನರಾಭಿವೃದ್ಧಿ ಪ್ರಶ್ನಿಸಿ ಅರ್ಜಿ: ಹೊಸದಾಗಿ ಪ್ರಕರಣ ಆಲಿಸಲು ಗುಜರಾತ್‌ ಹೈಕೋರ್ಟ್‌ಗೆ ಸೂಚಿಸಿದ ಸುಪ್ರೀಂ

Bar & Bench

ಪ್ರಸ್ತಾವಿತ ಸಾಬರಮತಿ ಆಶ್ರಮದ ಪುನರಾಭಿವೃದ್ಧಿ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಶುಕ್ತವಾರ ಬದಿಗೆ ಸರಿಸಿದ್ದು , ಕೂಲಂಕಷ ವಿಚಾರಣೆಯ ಬಳಿಕ ಹೊಸದಾಗಿ ಪ್ರಕರಣವನ್ನು ನಿರ್ಣಯಿಸುವಂತೆ ಸೂಚಿಸಿ ಪ್ರಕರಣವನ್ನು ಗುಜರಾತ್‌ ಹೈಕೋರ್ಟ್‌ಗೆ ಮರಳಿಸಿದೆ [ತುಷಾರ್ ಅರುಣ್‌ ಗಾಂಧಿ ವರ್ಸಸ್‌ ಗುಜರಾತ್‌ ಸರ್ಕಾರ].

ಸಾಬರಮತಿ ಆಶ್ರಮದ ಪುನರಾಭಿವೃದ್ಧಿ ಯೋಜನೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್‌ ಗಾಂಧಿಯವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾ. ಡಿ ವೈ ಚಂದ್ರಚೂಡ್ ಹಾಗೂ ನ್ಯಾ. ಸೂರ್ಯ ಕಾಂತ್‌ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಪ್ರಕರಣದ ವಿಚಾರಣೆ ವೇಳೆ ಗುಜರಾತ್‌ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರು, ಪ್ರಕರಣವನ್ನು ನಿಯಮಿತವಾಗಿ ಅಲಿಸಲು ತಾವು ಹೈಕೋರ್ಟ್‌ಗೆ ಮನವಿ ಮಾಡುವುದಾಗಿ ಹೇಳಿದರು. ಇದೇ ವೇಳೆ, ಪ್ರಕರಣದ ಅರ್ಹತೆಯ ಕುರಿತಾಗಿ ಯಾವುದೇ ಅಭಿಪ್ರಾಯವನ್ನು ಸೂಚಿಸದಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಿದರು.

ಅರ್ಜಿದಾರರ ಪರವಾಗಿ ವಾದಿಸಿದ ಇಂದಿರಾ ಜೈಸಿಂಗ್ ಅವರು, ಹೈಕೋರ್ಟ್‌ ಯಾವುದೇ ಆದೇಶವನ್ನು ಮಾಡುವ ಮೊದಲು ಸಾಬರಮತಿ ಆಶ್ರಮದ ನಿರ್ವಹಣೆಯನ್ನು ಪಸ್ತುತ ನಡೆಸುತ್ತಿರುವ ಟ್ರಸ್ಟ್‌ನ ವಾದವನ್ನು ವಿಷದವಾಗಿ ಅಲಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರದಿಂದ ಯಾವುದೇ ಅಫಿಡವಿಟ್‌ ಸಲ್ಲಿಕೆಗೆ ಹೈಕೋರ್ಟ್‌ ಕೇಳದೆ ತಮ್ಮ ಮನವಿಯನ್ನು ವಿಲೇವಾರಿ ಮಾಡಿರುವ ಬಗ್ಗೆ ಅರ್ಜಿದಾರರು ಗಮನಸೆಳೆದಿರುವುದನ್ನು ಸುಪ್ರೀಂ ಕೋರ್ಟ್‌ ಪರಿಗಣಿಸಿತು. ಹಾಗಾಗಿ, ಪ್ರಕರಣವನ್ನು ಮತ್ತೊಮ್ಮೆ ಹೊಸತಾಗಿ ವಿಚಾರಣೆ ಕೈಗೆತ್ತಿಕೊಳ್ಳಲು ಹೈಕೋರ್ಟ್‌ಗೆ ಸೂಚಿಸಿದ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಮರಳಿಸಿತು. ಇದೇ ವೇಳೆ ನ್ಯಾಯಾಲಯವು ಪ್ರಕರಣದ ಅರ್ಹತೆಯ ಕುರಿತಾಗಿ ತಾನು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿತು.