Karti Chidambaram, ED, Rouse Avenue Courts
Karti Chidambaram, ED, Rouse Avenue Courts  Facebook
ಸುದ್ದಿಗಳು

ಚೀನಾ ವೀಸಾ ಪ್ರಕರಣ: ಕಾರ್ತಿ ಚಿದಂಬರಂ ನಿರೀಕ್ಷಣಾ ಜಾಮೀನು ಮನವಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

Bar & Bench

ಚೀನಾ ವೀಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕುರಿತು ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿರುವ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಮನವಿಯನ್ನು ಶುಕ್ರವಾರ ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ (ಕಾರ್ತಿ ಚಿದಂಬರಂ ವರ್ಸಸ್‌ ಇ ಡಿ).

ನ್ಯಾಯಮೂರ್ತಿ ಎಂ ಕೆ ನಾಗ್ಪಾಲ್‌ ಅವರು ನಿರೀಕ್ಷಣಾ ಜಾಮೀನು ಮನವಿ ತಿರಸ್ಕರಿಸಿದ್ದು, ವಿಸ್ತೃತ ಆದೇಶವು ತಡವಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಚೀನಾದ 250 ಮಂದಿ ನಾಗರಿಕರಿಗೆ ವೀಸಾ ಕೊಡಿಸಲು ₹50 ಲಕ್ಷ ಲಂಚ ಪಡೆದ ಆರೋಪವನ್ನು ಕಾರ್ತಿ ಎದುರಿಸುತ್ತಿದ್ದಾರೆ. ಈ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿದ್ದನ್ನು ಆಧರಿಸಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.

ಕಾರ್ತಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು “ಅಕ್ರಮ ಹಣ ವರ್ಗಾವಣೆ ಆರೋಪಕ್ಕೂ ಮುನ್ನ ಮರೆಮಾಚುವಿಕೆ, ಸ್ವಾಧೀನಕ್ಕೆ ಸಂಬಂಧಿಸಿದ ಆರೋಪವನ್ನು ಸಾಬೀತುಪಡಿಸಬೇಕಾಗುತ್ತದೆ. ಸಿಬಿಐ ವಿಚಾರಣೆಗೆ ಕಾರ್ತಿ ಅವರು ಮೂರು ದಿನಗಳ ಕಾಲ ಸಹಕರಿಸಿದ್ದು, ಹೀಗಾಗಿ ಅವರಿಗೆ ರಕ್ಷಣೆ ದೊರೆತಿದೆ ಎಂದರು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು ನಿರೀಕ್ಷಣಾ ಜಾಮೀನು ಮನವಿಯು ಅಕಾಲಿಕವಾಗಿದೆ. ಹಾಲಿ ಪ್ರಕರಣದಲ್ಲಿ ತನಿಖೆಯೇ ಆರಂಭವಾಗಿಲ್ಲ ಎಂದರು.

ತಲ್ವಾಂಡಿ ಸಾಬೊ ಪವರ್‌ ಲಿಮಿಟೆಡ್‌ ₹50 ಲಕ್ಷ ರೂಪಾಯಿಗಳನ್ನು ಬೆಲ್‌ ಟೂಲ್ಸ್‌ ಲಿಮಿಟೆಡ್‌ಗೆ ಪಾವತಿಸಿದ್ದು, ಅದು ಚೀನಾ ವೀಸಕ್ಕಾಗಿ ಲಂಚವನ್ನು ಎಸ್‌ ಭಾಸ್ಕರರಾಮನ್‌ ಅವರಿಗೆ ಪಾವತಿಸಿದೆ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.