<div class="paragraphs"><p>Halasuru Gate Police station and Advocate Jagadish K N Mahadev</p></div>

Halasuru Gate Police station and Advocate Jagadish K N Mahadev

 
ಸುದ್ದಿಗಳು

ನ್ಯಾಯಾಲಯ ಆವರಣದಲ್ಲಿ ಗಲಾಟೆ ಪ್ರಕರಣ: ವಕೀಲ ಜಗದೀಶ್ ಪೊಲೀಸ್ ವಶಕ್ಕೆ

Bar & Bench

ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದ ಆವರಣದಲ್ಲಿ ನಡೆದಿದ್ದ ವಕೀಲರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಕೆ ಎನ್‌ ಜಗದೀಶ್‌ ಮಹಾದೇವ್‌ ಅವರನ್ನು ಹಲಸೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

“ವಕೀಲರ ಬಗ್ಗೆ ಹಗುರವಾಗಿ ಮಾತನಾಡುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯವಾದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ” ಎಂದು ಆರೋಪಿಸಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರು ನಿನ್ನೆ ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂತ್‌ ಅವರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಗದೀಶ್‌ ಅವರನ್ನು ವಶಕ್ಕೆ ಪಡೆಯಲಾಗಿದೆ.

ಐಪಿಎಸ್‌ ಅಧಿಕಾರಿ ರವಿ ಡಿ ಚೆನ್ನಣ್ಣನವರ್‌ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದ ಜಗದೀಶ್‌ ಶುಕ್ರವಾರ ಪ್ರಕರಣ ಸಂಬಂಧ ದಾಖಲೆಗಳನ್ನು ಸಲ್ಲಿಸಲು ಸಿಟಿ ಸಿವಿಲ್‌ ಕೋರ್ಟ್‌ಗೆ ತೆರಳಿದ್ದರು ಎನ್ನಲಾಗಿದೆ. ಆ ವೇಳೆ ತಮ್ಮ ಹಾಗೂ ತಮ್ಮ ಮಗನ ಮೇಲೆ ಹಲ್ಲೆ ನಡೆದಿತ್ತು ಎಂದು ಜಗದೀಶ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದರು. ಅಲ್ಲದೆ ಇದಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ಹಂಚಿಕೊಳ್ಳಲಾಗಿತ್ತು. ವಕೀಲ ನಾರಾಯಣಸ್ವಾಮಿ, ಪೊಲೀಸ್‌ ಆಯುಕ್ತ ಕಮಲ್ ಪಂತ್‌, ಐಜಿಪಿ ಪ್ರವೀಣ್‌ ಸೂದ್‌ ಅವರ ವಿರುದ್ಧ ಜಗದೀಶ್‌ ವಾಗ್ದಾಳಿ ನಡೆಸಿದ್ದರು. ಹಲ್ಲೆಗೊಳಗಾಗಿರುವ ತಮ್ಮ ಮಗನಿಗೆ ಏನಾದರೂ ಆದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಜಗದೀಶ್‌ಗೆ ಚೆನ್ನಣ್ಣನವರ್‌ ಲೀಗಲ್‌ ನೋಟಿಸ್‌

ಈ ಮಧ್ಯೆ ಐಪಿಎಸ್‌ ಅಧಿಕಾರಿ ರವಿ ಡಿ ಚೆನ್ನಣ್ಣನವರ್‌ ಅವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾನಹಾನಿಕರ, ಸುಳ್ಳು, ದುರುದ್ದೇಶಪೂರ್ವಕ, ಪ್ರಚೋದನಕಾರಿ ಹೇಳಿಕೆ ನೀಡಿರುವ ಸಂಬಂಧ ಜಗದೀಶ್‌ ಅವರಿಗೆ ಚೆನ್ನಣ್ಣನವರ್‌ ಪರ ವಕೀಲ ಸುಧನ್ವ ಡಿ ಎಸ್‌ ಅವರು ಲೀಗಲ್‌ ನೋಟಿಸ್‌ ನೀಡಿದ್ದಾರೆ. ತಮ್ಮ ಕಕ್ಷೀದಾರರಿಗೆ ಉಂಟಾಗಿರುವ ಮಾನನಷ್ಟಕ್ಕೆ ಪರಹಾರ ರೂಪದಲ್ಲಿ ರೂ 1 ಕೋಟಿ ಪರಿಹಾರ ನೀಡುವಂತೆಯೂ ಅವರು ಆಗ್ರಹಿಸಿದ್ದಾರೆ.