ಸುದ್ದಿಗಳು

ಜಮ್ಮು ಕಾಶ್ಮೀರ ಕ್ಷೇತ್ರ ಮರುವಿಂಗಡಣೆ: 370ನೇ ವಿಧಿ ಕುರಿತಾದ ಪ್ರಕರಣ ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿದ ಸಿಜೆಐ

Bar & Bench

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಪ್ರಕರಣವನ್ನು ಸೋಮವಾರ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ವಿ ರಮಣ ಅವರ ಮುಂದೆ ಪ್ರಸ್ತಾಪಿಸಲಾಯಿತು.

ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಕ್ಷೇತ್ರ ಪುನರ್‌ವಿಂಗಡಣೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಪಟ್ಟಿ ಮಾಡುವಂತೆ ಹಿರಿಯ ವಕೀಲ ಶೇಖರ್ ನಫಡೆ ಕೋರಿದರು.

ಪ್ರಕರಣವನ್ನು ಪಟ್ಟಿ ಮಾಡಲು ಯತ್ನಿಸುವುದಾಗಿ ತಿಳಿಸಿದ ಸಿಜೆಐ ಪೀಠ ರಚನೆಯಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಕೂಡ ಹೇಳಿದರು. "ಇದು 5 ನ್ಯಾಯಮೂರ್ತಿಗಳ ಪೀಠದ ಮುಂದೆ ಇದೆ. ವಿವರಗಳನ್ನು ನೀಡಿ ನಾವು ಅದನ್ನು ಪಟ್ಟಿ ಮಾಡುತ್ತೇವೆ. ನ್ಯಾಯಮೂರ್ತಿಗಳು ಮತ್ತು ಪೀಠದ ಸಂಯೋಜನೆಯಲ್ಲಿ ಕೆಲವು ಸಮಸ್ಯೆಗಳಿವೆ" ಎಂದು ಅವರು ವಿವರಿಸಿದರು. ರಾಧಾ ಕುಮಾರ್, ಕಪಿಲ್ ಕಾಕ್ ಮತ್ತಿತರರ ಪರ ಹಿರಿಯ ವಕೀಲ ನಫಡೆ ವಾದ ಮಂಡಿಸಿದರು.

ಸಂವಿಧಾನದ 370 ನೇ ವಿಧಿ ರದ್ದುಗೊಳಿಸಿ ಕೇಂದ್ರ ಸರ್ಕಾರ ಆಗಸ್ಟ್ 2019ರಲ್ಲಿ ಕೈಗೊಂಡಿದ್ದ ನಿರ್ಧಾರ ಪ್ರಶ್ನಿಸಿ 20 ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಈ ನಡುವೆ ಪ್ರಕರಣದ ವಿಚಾರಣೆಯನ್ನು 7 ಸದಸ್ಯರ ಸಾಂವಿಧಾನಿಕ ಪೀಠದ ಮುಂದೆ ಇರಿಸಬೇಕೆಂದು ಕೆಲ ಪಕ್ಷಕಾರರು ಕೋರಿದ್ದರು. ಆದರೆ, ಪಂಚ ಸದಸ್ಯರ ಪೀಠವು ಇದಕ್ಕೆ ಸಮ್ಮತಿಸಿರಲಿಲ್ಲ.