ಭವಿಷ್ಯದಲ್ಲಿ ನಡೆಯುವ ಎಲ್ಲಾ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಸಿಎಲ್ಎಟಿ) ಪರೀಕ್ಷೆಗಳಿಗೂ ಅನ್ವಯವಾಗುವಂತೆ ದೃಷ್ಟಿದೋಷವುಳ್ಳ ಸಿಎಲ್ಎಟಿ ಅಭ್ಯರ್ಥಿಗಳಿಗೆ ಸಹಾಯಕವಾಗುವಂತೆ ಸ್ಕ್ರೀನ್ ರೀಡರ್ಗಳು, ಕಸ್ಟಮೈಸ್ ಮಾಡಿದ ಸಾಧನಗಳು ಮತ್ತು ಲಿಪಿಕಾರರ ಆಯ್ಕೆಯಂತಹ ಸೌಲಭ್ಯ ಒದಗಿಸಬೇಕು ಎಂದು ಸಿಎಲ್ಎಟಿ ಆಯೋಜಕರಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ [ಯಶ್ ದೋಡಾಣಿ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಇದೇ ವಿಚಾರವಾಗಿ ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಆಯೋಜಕರಿಗೆ ಡಿಸೆಂಬರ್ 2024ರಲ್ಲಿ ಹೊರಡಿಸಲಾದ ಮಧ್ಯಂತರ ನಿರ್ದೇಶನಗಳೇ ಸಿಎಲ್ಎಟಿ ಪರೀಕ್ಷೆ ಆಯೋಜಕರಿಗೂ ಅನ್ವಯವಾಗುತ್ತವೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಆದೇಶಿಸಿತು. ಬಿಸಿಐ ಮತ್ತು ಎಐಬಿಇಗಳು ದೃಷ್ಟಿದೋಷವುಳ್ಳ ಅಭ್ಯರ್ಥಿಗಳಿಗೆ ಹಲವು ಸೌಲಭ್ಯಗಳನ್ನು ಒದಗಿಸುವಂತೆ ಡಿಸೆಂಬರ್ 5, 2024ರಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು.
ದೃಷ್ಟಿಹೀನ ಅಭ್ಯರ್ಥಿಗಳು ವೃತ್ತಿಪರ ಪ್ರವೇಶ ಮತ್ತು ಅರ್ಹತಾ ಪರೀಕ್ಷೆಗಳಲ್ಲಿ ಅರ್ಥಪೂರ್ಣವಾಗಿ ಭಾಗವಹಿಸುವಂತೆ ಮಾಡುವುದು ಈ ನಿರ್ದೇಶನಗಳ ಉದ್ದೇಶ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಹಿಂದಿನ ಆದೇಶಗಳ ಹಿನ್ನೆಲೆಯಲ್ಲಿ ಆಗಸ್ಟ್ 1ರಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅರ್ಚನಾ ಪಾಠಕ್ ದವೆ ನ್ಯಾಯಪೀಠಕ್ಕೆ ತಿಳಿಸಿದರು. ಈ ಮಾರ್ಗಸೂಚಿಗಳನ್ನು ಭಾರತೀಯ ಬಾರ್ ಕೌನ್ಸಿಲ್ ಮತ್ತು ಸಿಎಲ್ಎಟಿ ಒಕ್ಕೂಟ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು. ನವೆಂಬರ್ 13ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಜೆಎಡಬ್ಲ್ಯೂಎಸ್, ಎನ್ವಿಡಿಎ ತರಹದ ಸ್ಕ್ರೀನ್ ರೀಡರ್ಗಳು, ದೃಷ್ಟಿದೋಷವುಳ್ಳವರಿಗೇ ವಿಶೇಷವಾದ ವೈಯಕ್ತಿಕ ಕೀಬೋರ್ಡ್ ಮತ್ತು ಮೌಸ್ ಬಳಕೆ, ಅಭ್ಯರ್ಥಿಗಳು ಇಚ್ಛೆಯಂತೆ – ಕಂಪ್ಯೂಟರ್ನಲ್ಲಿ ಉತ್ತರ ಟೈಪ್ ಮಾಡುವುದು ಅಥವಾ ಲಿಪಿಕಾರರ ಬಳಕೆಗೆ ಅವಕಾಶ, ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಿ ಪರೀಕ್ಷಿಸುವ ಅವಕಾಶದಂತಹ ನಿರ್ದೇಶನಗಳನ್ನು ಎಐಬಿಇ ಪರೀಕ್ಷೆ ಬರೆಯುವ ದೃಷ್ಟಿದೋಷವುಳ್ಳ ಅಭ್ಯರ್ಥಿಗಳ ಅನುಕೂಲಕ್ಕಾಗಿ ಸುಪ್ರೀಂ ಕೋರ್ಟ್ ನೀಡಿತ್ತು.