Justice KV Viswanathan 
ಸುದ್ದಿಗಳು

ಪರಿಸರ ಕಾನೂನು ಅಧ್ಯಯನಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು: ನ್ಯಾ. ಕೆ ವಿ ವಿಶ್ವನಾಥನ್‌

Bar & Bench

ಹವಾಮಾನ ಬದಲಾವಣೆಯಿಂದಾಗುವ ಹಾನಿಗೆ ಕಡಿವಾಣ ಹಾಕಲು ಈಗಲೇ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಸರಿಪಡಿಸಲಾಗದ ಸ್ಥಿತಿ ಒದಗುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್‌ ತಿಳಿಸಿದರು.

ಸಿಎಎನ್‌ ಪ್ರತಿಷ್ಠಾನ, ಹೈದರಾಬಾದ್‌ನ ನಲ್ಸಾರ್‌ ಹಾಗೂ ಜಬಲ್‌ಪುರದ ಡಿಎನ್‌ಎಲ್‌ಯು ಶನಿವಾರ ವರ್ಚುವಲ್‌ ವಿಧಾನದಲ್ಲಿ ಆಯೋಜಿಸಿದ್ದ ನ್ಯಾ. ಎಚ್‌ ಆರ್ ಖನ್ನಾ ನೆನಪಿನ 4ನೇ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಅವರು"21 ನೇ ಶತಮಾನದಲ್ಲಿ ಹವಾಮಾನ ಬದಲಾವಣೆಯ ಕಾನೂನು ಆಯಾಮದ ದೃಷ್ಟಿಕೋನಗಳು" ಎಂಬ ವಿಚಾರವಾಗಿ  ಮಾತನಾಡಿದರು.

ಹೀಗಾಗಿ ಪರಿಸರ ಕಾನೂನು ಕ್ಷೇತ್ರಕ್ಕೆ ಬೇಕಾದಾಗ ತಜ್ಞರು ಲಭ್ಯ ಇರುವಂತೆ, ದೇಶಕ್ಕೆ ಅಂತಹವರ ಕೊರತೆ ಎದುರಾಗದಂತೆ ಕಾನೂನು ವಿದ್ಯಾರ್ಥಿಗಳು ಪರಿಸರ ಕಾನೂನು ಅಧ್ಯಯನಕ್ಕೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.  

 ಎಂಕೆ ರಂಜಿತ್‌ ಸಿನ್ಹಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಪ್ರಸ್ತಾಪಿಸಿದ ಅವರು ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ಸರ್ವೋಚ್ಚ ನ್ಯಾಯಾಲಯದ ಪಾತ್ರ ಮಹತ್ವದ್ದು ಎಂದರು.

ಹವಾಮಾನ ಬದಲಾವಣೆ ಕುರಿತಾದ ವರದಿಯೊಂದರ ಪ್ರಕಾರ 1986 ಮತ್ತು 2014ರ ನಡುವೆ ಸುಮಾರು  800 ರಷ್ಟು ಪ್ರಕರಣಗಳು ದಾಖಲಾಗಿದ್ದರೆ 2015 ರಲ್ಲಿ 1,000 ಕ್ಕೂ ಹೆಚ್ಚು ಹವಾಮಾನ ಸಂಬಂಧಿತ ಪ್ರಕರಣಗಳನ್ನು ದಾಖಲಿಸಲಾಗಿದೆ. ಹವಾಮಾನ ಬದಲಾವಣೆ ಮೊಕದ್ದಮೆಗಳನ್ನು ಹಿಂದೆಲ್ಲಾ ಯಶಸ್ಸು ಕಾಣದವು ಎಂದು ಭಾವಿಸಲಾಗುತ್ತಿದ್ದರೆ ಇದೀಗ ಪರಿಸ್ಥಿತಿ ಬದಲಾಗಿದೆ  ಎಂದು ಅವರು ನುಡಿದರು.

ವಿಚಾರ ಸಂಕಿರಣದ ವಿಶೇಷ ಅತಿಥಿಯಾಗಿ ಹಿರಿಯ ನ್ಯಾಯವಾದಿ ಮಾಧವಿ ದಿವಾನ್ ಭಾಗವಹಿಸಿದ್ದರು.