Former Chief Justice MN Venkatachaliah
Former Chief Justice MN Venkatachaliah 
ಸುದ್ದಿಗಳು

ಸಾಂವಿಧಾನಿಕತೆ ಇಲ್ಲದ ಪ್ರಜಾಪ್ರಭುತ್ವ ಕೇವಲ ತೊಗಟೆಯಾಗಿ ಉಳಿಯುತ್ತದೆ: ನ್ಯಾ. ಎಂ ಎನ್ ವೆಂಕಟಾಚಲಯ್ಯ

Bar & Bench

ಸಾಂವಿಧಾನಿಕತೆ ಇಲ್ಲದೆ ಹೋದರೆ ಪ್ರಜಾಪ್ರಭುತ್ವ ಕೇವಲ ತೊಗಟೆಯಾಗಿ ಉಳಿಯುತ್ತದೆ. ಜೊತೆಗೆ ಆ ಪ್ರಜಾಪ್ರಭುತ್ವ ಕೇವಲ ಅಂಕಿ ಸಂಖ್ಯೆಗಳ ವ್ಯಾಖ್ಯಾನವಾಗುತ್ತದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಂ ಎನ್‌ ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.

ಆರ್‌ಟಿಐ ಕೇಂದ್ರ ಮತ್ತು ಮನಿಲೈಫ್‌ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ತೃತೀಯ ವಾರ್ಷಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ʼಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ನ್ಯಾಯಾಂಗ ಕಾವಲುಗಾರನ ಜಾಗೃತ ಪಾತ್ರ ವಹಿಸುತ್ತಿದೆಯೇ?” ಎಂಬ ವಿಚಾರವಾಗಿ ಉಪನ್ಯಾಸ ನೀಡಿದರು.

“ಬಹುಸಂಖ್ಯಾತ ವಾದ ಮತ್ತು ಸರ್ಕಾರದ ಯಾವುದೇ ಒಂದು ಶಾಖೆಗೆ ಅಧಿಕಾರದ ಒತ್ತು ನೀಡುವುದರ ವಿರುದ್ಧವಾಗಿ ಸಂವಿಧಾನ ಮತ್ತು ಸಾಂವಿಧಾನಿಕ ತತ್ವಗಳು ಭದ್ರಕೋಟೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ” ಎಂದ ಅವರು “ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಬಹುಮತದ ಆಶಯ ಮತ್ತು ಆಳ್ವಿಕೆ ಸಾಂವಿಧಾನಿಕ ತತ್ವಗಳಿಂದ ನಿಯಂತ್ರಿತ ಮತ್ತು ನಿರ್ದೇಶಿತವಾಗಿರುತ್ತದೆ. ಇಲ್ಲದೇ ಹೋದರೆ ಅದು ಶೀಘ್ರದಲ್ಲೇ ಅಥವಾ ಕ್ರಮೇಣ ಚುನಾಯಿತ ನಿರಂಕುಶಾಧಿಕಾರವಾಗಿ ಮತ್ತು ಗಲಭೆಯಾಳ್ವಿಕೆಗೆ (mobocracy) ಕಾರಣವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ಸರ್ಕಾರದ ರಚನೆ ಹೇಗೆ ವಿನ್ಯಾಸಗೊಂಡಿರಬೇಕು ಎಂದರೆ ಪ್ರತಿಯೊಂದು ಅಂಗವೂ ತನ್ನ ಇತರ ಎರಡು ಅಂಗಗಳ ವಿರುದ್ಧ ಜಾಗೃತ ಕಾವಲುಗಾರನ ರೀತಿಯಲ್ಲಿ ವರ್ತಿಸಬೇಕು. ಇಲ್ಲದೇ ಹೋದರೆ ಅವು ತುಂಬಾ ಪ್ರಬಲ ಅಥವಾ ನಿರಂಕುಶಾಧಿಕಾರಕ್ಕೆ ಕಾರಣವಾಗುತ್ತವೆ” ಎಂದು ತಿಳಿಸಿದರು.

“ಬಲಿಷ್ಠ ನಾಯಕರತ್ತ ಒಲವು ಹೆಚ್ಚಿರುವ ಬಗ್ಗೆ ಜಗತ್ತಿನ ವಿವಿಧ ಸಮೀಕ್ಷೆಗಳು ಹೇಳುತ್ತವೆ. ಅಂತಹವರು ಸಂಸತ್ತು, ಚುನಾವಣೆ, ಸರ್ಕಾರ ರಾಜಕೀಯ ಪಕ್ಷಗಳಲ್ಲಿ ಇರಿಸಿದ ನಂಬಿಕೆ ಚಾರಿತ್ರಿಕವಾಗಿ ಕೆಳಮಟ್ಟದಲ್ಲಿರುತ್ತದೆ. ಇದು ಲೋಲಕ ಪರಿಣಾಮವಾಗಿದ್ದು ಸಾರ್ವಜನಿಕ ಮನಸ್ಸು ಒಂದು ತುದಿಯಲ್ಲಿ ನಿಂತು ಮತ್ತೊಂದು ತುದಿ ಸ್ವರ್ಗ ಎಂದು ಭಾವಿಸುತ್ತದೆ. ಸರ್ಕಾರ ಮತ್ತು ರಾಜಕೀಯ ಪಕ್ಷಗಳ ಮೇಲಿರಿಸಿರುವ ನಂಬಿಕೆ ಚಾರಿತ್ರಿಕವಾಗಿ ಕೆಳಮಟ್ಟದಲ್ಲಿದೆ” ಎಂದರು.