Supreme Court
Supreme Court 
ಸುದ್ದಿಗಳು

ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಯ ಸೆಕ್ಷನ್ 34ರ ಅಡಿ ನ್ಯಾಯಾಲಯಗಳು ಮಧ್ಯಸ್ಥಿಕೆ ತೀರ್ಪು ಬದಲಿಸಲಾಗದು: ಸುಪ್ರೀಂ

Bar & Bench

ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆ 1996ರ ಸೆಕ್ಷನ್ 34ರ ಅಡಿಯಲ್ಲಿ ನೀಡಿದ ತೀರ್ಪನ್ನು ನ್ಯಾಯಾಲಯಗಳು ಮಾರ್ಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ಹಾಗೆ ತೀರ್ಪು ನೀಡುತ್ತಲೇ ನ್ಯಾಯಮೂರ್ತಿಗಳಾದ ರೋಹಿಂಟನ್ ಫಾಲಿ ನಾರಿಮನ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮೇಲ್ಮನವಿಗಳನ್ನು ವಜಾಗೊಳಿಸಿತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆ 1996 ರ ಸೆಕ್ಷನ್ 34 ರ ಅಡಿಯಲ್ಲಿ ವಿಚಾರಣೆಯ ವ್ಯಾಪ್ತಿಯು ಸ್ವಭಾವತಃ ಅತ್ಯಂತ ಸೀಮಿತವಾಗಿದೆ ಮತ್ತು ಇದರ ಪರಿಣಾಮವಾಗಿ ದಾಖಲೆಗಳ ಆಧಾರದಲ್ಲಿ ತೀರ್ಪನ್ನು ಪ್ರತಿಬಂಧಿಸುತ್ತದೆ ಎಂದು ಹೇಳಿದರು.

ಕೇವಲ ಸೆಕ್ಷನ್ 34ರ ಬರಿಯ ಪರಿಶೀಲನೆ ಮಾಡಿದಾಗಲೇ 1996ರ ಕಾಯಿದೆಯ ಪ್ರಕಾರ ಮಧ್ಯಸ್ಥಗಾರರು ನೀಡಿದ ತೀರ್ಪಿನ ವಿರುದ್ಧ ಯಾವುದೇ ರೀತಿಯ ಸವಾಲನ್ನು ಬದಲಿಸಲು, ವ್ಯತ್ಯಯಗೊಳಿಸಲು, ಹಸ್ತಕ್ಷೇಪ ಮಾಡಲು ಅಥವಾ ಪುರಸ್ಕರಿಸಲು ಮೇಲ್ವಿಚಾರಣಾ ನ್ಯಾಯಾಲಯಕ್ಕೆ ಯಾವುದೇ ಅಧಿಕಾರವಿಲ್ಲ ಎಂಬುದು ಅನುಮಾನಕ್ಕೆ ಆಸ್ಪದವಿಲ್ಲದಂತೆ ತಿಳಿದುಬರುತ್ತದೆ ಎಂದು ಮೆಹ್ತಾ ವಾದಿಸಿದರು.

ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ಟಿ ಎಸ್ ಶಿವಜ್ಞಾನಂ, ಆರ್‌ ಥರಣಿ ಅವರು 2020ರ ಫೆಬ್ರುವರಿ 13ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಈ ವರ್ಷದ ಜನವರಿ 18ರಂದು ನ್ಯಾಯಮೂರ್ತಿಗಳಾದ ನಾರಿಮನ್, ಕೆ ಎಂ ಜೋಸೆಫ್ ಮತ್ತು ಅಜಯ್ ರಾಸ್ತೋಗಿ ಅವರಿದ್ದ ಪೀಠ ನೋಟಿಸ್‌ ನೀಡಿತ್ತು.

ವಕೀಲರಾದ ಪಿ.ವಿ. ಯೋಗೇಶ್ವರನ್, ರಜತ್ ನಾಯರ್ ಮತ್ತು ಕನು ಅಗರ್‌ವಾಲ್‌ ಅವರ ಸಹಾಯದೊಂದಿಗೆ ಸಾಲಿಸಿಟರ್‌ ಜನರಲ್‌ ಮೆಹ್ತಾ, ಎನ್‌ಎಚ್‌ಎಐ ಪರವಾಗಿ ಹಾಜರಾದರು. ಪ್ರತಿವಾದಿಗಳ ಪರವಾಗಿ ಹಿರಿಯ ವಕೀಲ ಆರ್ ಬಾಲಸುಬ್ರಮಣಿಯನ್ ಉಪಸ್ಥಿತರಿದ್ದರು.