<div class="paragraphs"><p>Congress MLA Parameshwara Naik</p></div>

Congress MLA Parameshwara Naik

 

E sanje

ಸುದ್ದಿಗಳು

ಕೋವಿಡ್‌ ನಿಯಮಾವಳಿ ಉಲ್ಲಂಘಿಸಿ ಪುತ್ರನ ವಿವಾಹ: ಶಾಸಕ ಪರಮೇಶ್ವರ್‌ ನಾಯ್ಕಗೆ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಸಮನ್ಸ್‌

Bar & Bench

ಕೋವಿಡ್‌ ನಿಯಮ ಉಲ್ಲಂಘಿಸಿ 2020ರ ಜೂನ್‌ನಲ್ಲಿ ಪುತ್ರನ ವಿವಾಹ ಮಾಡಿದ್ದ ಕಾಂಗ್ರೆಸ್‌ನ ಹೂವಿನಹಡಗಲಿ ಶಾಸಕ ಪಿ ಟಿ ಪರಮೇಶ್ವರ್‌ ನಾಯ್ಕ ಮತ್ತು ಅವರ ಪುತ್ರ ಭರತ್‌ ಪಿ ಟಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಈಚೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿದ್ದು, ಸಮನ್ಸ್‌ ಜಾರಿ ಮಾಡಿದೆ.

ಅಧಿಕಾರಿ ಶ್ರೀಧರ್‌ ಕೆ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ್ದ 62ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಹಾಗೂ ಹಾಲಿ ಮತ್ತು ಮಾಜಿ ಶಾಸಕರು/ಸಂಸದರ ವಿರುದ್ಧದ ಮ್ಯಾಜಿಸ್ಟ್ರೇಟ್‌ ವಿಚಾರಣೆ ನಡೆಸಬಹುದಾದ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶೆಯಾದ ಪ್ರೀತ್‌ ಜೆ ಅವರು ಆದೇಶ ಮಾಡಿದ್ದಾರೆ.

ಪ್ರಕರಣದಲ್ಲಿ ಭರತ್‌ ಮೊದಲ ಆರೋಪಿಯಾಗಿದ್ದು, ಪರಮೇಶ್ವರ್‌ ನಾಯ್ಕ ಅವರು ಎರಡನೇ ಆರೋಪಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 188 ಮತ್ತು 269 ಹಾಗೂ ವಿಪತ್ತು ನಿರ್ವಹಣಾ ಕಾಯಿದೆಯ ಸೆಕ್ಷನ್‌ 51(ಬಿ) ಅಡಿ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶಿಸಿದ್ದು, ಮಾರ್ಚ್‌ 21ರಂದು ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ.

ಹರಪನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರದಲ್ಲಿ ನಡೆದಿದ್ದ ಪರಮೇಶ್ವರ್‌ ನಾಯ್ಕ ಅವರ ಪುತ್ರನ ವಿವಾಹದಲ್ಲಿ ಸಚಿವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕೋವಿಡ್‌ ಮಾರ್ಗಸೂಚಿಯ ಪ್ರಕಾರ 50ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿರಲಿಲ್ಲ.