ಸುದ್ದಿಗಳು

ಆರು ನೂರು ಕೆಜಿಗೂ ಹೆಚ್ಚು ಪಟಾಕಿ ಸಂಗ್ರಹ, ಮಾರಾಟಕ್ಕೆ ಜಿಲ್ಲಾಧಿಕಾರಿ ಅವಕಾಶ ನೀಡುವಂತಿಲ್ಲ: ಹೈಕೋರ್ಟ್

Bar & Bench

ಪಟಾಕಿ ಮಾರಾಟಗಾರರು 600 ಕೆಜಿಗೂ ಹೆಚ್ಚು ತೂಕದ ಪಟಾಕಿ ಸಂಗ್ರಹ ಹಾಗೂ ಮಾರಾಟಕ್ಕೆ ಜಿಲ್ಲಾಧಿಕಾರಿಗಳು ಪರವಾನಗಿ ನೀಡಬಾರದು ಎಂದು ಹೈಕೋರ್ಟ್ ಆದೇಶಿಸಿದೆ.

ಪಟಾಕಿ ಸಂಗ್ರಹ ಮಾಡುವಲ್ಲಿ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಬೆಂಕಿಯ ಕಿಡಿ ಕಟ್ಟಡವನ್ನೇ ದಹಿಸಬಹುದಾಗಿದೆ. ಹೀಗಾಗಿ ಪರವಾನಿಗೆ ನೀಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಲು ಇದು ಸಕಾಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಹೇಳಿದೆ.

ಅಲ್ಲದೆ, ಪಟಾಕಿ ಮಾರಾಟಕ್ಕೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಸ್ಪೋಟಕಗಳ ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ಪಟಾಕಿ ಸಂಗ್ರಹಾಗಾರಗಳು ವಸತಿ ಪ್ರದೇಶದಿಂದ ದೂರದಲ್ಲಿರಬೇಕು. ಅಗ್ನಿ ಶಾಮಕಗಳು ಲಭ್ಯ ಇರಬೇಕು. ಪಟಾಕಿ ಸಂಗ್ರಹಾಗಾರಗಳಲ್ಲಿ ನೀರಿನ ಬಕೆಟ್‌ಗಳ ಸಂಗ್ರಹವೂ ಇರಬೇಕಿದ್ದು ಪರವಾನಿ ಪಡೆದ ಅಂಗಡಿಗಳಲ್ಲಿ ನಿಯಮ ಹಾಗೂ ಸುರಕ್ಷತಾ ಕ್ರಮ ಉಲ್ಲಂಘನೆಯಾಗಿದ್ದಲ್ಲಿ ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಅಂತಹ ಪರವಾನಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಇತ್ತೀಚೆಗೆ ಅತ್ತಿಬೆಲೆಯಲ್ಲಿ ಅಗ್ನಿ ದುರಂತ ನಡೆದು ಹಲವು ಮಂದಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ತಮ್ಮ ಪರವಾನಿಗೆ ರದ್ದುಪಡಿಸಿದ್ದ ಕ್ರಮ ಪ್ರಶ್ನಿಸಿ ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ವೀರನಹಳ್ಳಿ ಗ್ರಾಮದ ನಿವಾಸಿ ಕಲಾವತಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

ಜೊತೆಗೆ, 600 ಕಿಲೋಗ್ರಾಂ ಪಟಾಕಿ ಸಂಗ್ರಹಿಸುವ ಸ್ಥಳದಲ್ಲಿ 1000 ಕೆಜಿ ತೂಕದ ಪಟಾಕಿ ಸಂಗ್ರಹಿಸಿ ಮಾರಾಟ ಮಾಡುವುದಕ್ಕೆ ಅರ್ಜಿದಾರರಿಗೆ ಜಿಲ್ಲಾಧಿಕಾರಿಗಳು ಪರವಾನಿಗೆ ನೀಡಿರುವುದಕ್ಕೆ ಪೀಠ ಅಚ್ಚರಿ ವ್ಯಕ್ತಪಡಿಸಿದೆ. ಅರ್ಜಿದಾರರಿಗೆ 1000 ಕೆಜಿಗೂ ಹೆಚ್ಚು ಪಟಾಕಿ ಸಂಗ್ರಹ ಮತ್ತು ಮಾರಾಟಕ್ಕೆ ಅವಕಾಶ ನೀಡಿರುವುದು ಕಾನೂನಿನ ವಿರುದ್ಧವಾಗಿದೆ ಎಂದು ಅದು ಹೇಳಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, “ಪರವಾನಿಗೆ ನೀಡುವುದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಿ ಪರವಾನಿಗೆ ನೀಡಿದ್ದಾರೆ. ಪರವಾನಿಗೆ ರದ್ದುಗೊಳಿಸುವುದಕ್ಕೂ ಮುನ್ನ ನಮ್ಮ ವಾದ ಆಲಿಸಿಲ್ಲ. ಒಂದು ಅಹಿತಕರ ಘಟನೆಯಿಂದಾಗಿ ಉಳಿದ ಪರವಾನಗಿದಾರರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಆದ್ದರಿಂದ ಪರವಾನಿಗೆ ಮತ್ತೆ ನೀಡುವಂತೆ ಸೂಚನೆ ನೀಡಬೇಕು ಎಂದು ಕೋರಿದ್ದರು.