ಸುದ್ದಿಗಳು

ಆತ್ಮಹತ್ಯೆ ಯತ್ನದ ನಿರಪರಾಧೀಕರಣವು ಸಮಸ್ಯೆಯನ್ನು ಎದುರಿಸುವ ಮಾನವೀಯ ಮಾರ್ಗ: ಕೇರಳ ಹೈಕೋರ್ಟ್

Bar & Bench

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 309ರ ಅಡಿ ಶಿಕ್ಷಾರ್ಹವಾದ ಆತ್ಯಹತ್ಯೆ ಯತ್ನವನ್ನು ನಿರಪರಾಧೀಕರಿಸುವುದು ಆ ಸಮಸ್ಯೆಯನ್ನು ಎದುರಿಸುವ ಪರಿಣಾಮಕಾರಿ ಮಾನವೀಯ ಮಾರ್ಗ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ಸಿಮಿ ಸಿಎನ್‌ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಕೃತ್ಯವನ್ನು ಅಪರಾಧೀಕರಿಸುವ ಬದಲು ಆತ್ಯಹತ್ಯೆಗೆ ಮುಂದಾಗುವ ವ್ಯಕ್ತಿಗಳಿಗೆ ಸಾಮಾಜಿಕ ಮತ್ತು ಮಾನಸಿಕ ಬೆಂಬಲವನ್ನು ನೀಡುವುದು ಉಪಯುಕ್ತ ಎಂದು ನ್ಯಾಯಮೂರ್ತಿ ಕೆ ಹರಿಪಾಲ್ ತಿಳಿಸಿದರು.

"ಸಾಮಾಜಿಕ ದೃಷ್ಟಿಕೋನದಿಂದ ನೋಡುವುದಾದರೆ, ಆತ್ಯಹತ್ಯೆ ಯತ್ನದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವ ಬದಲು ಅದನ್ನು ನಿರಪರಾಧೀಕರಣಗೊಳಿಸುವುದು ಹೆಚ್ಚು ಸಂವೇದನೆಯ ಮತ್ತು ಮಾನವೀಯ ಮಾರ್ಗವಾಗಿದೆ. ಅಲ್ಲದೆ ಆತ್ಮಹತ್ಯೆಗೆ ಸಂಬಂಧಿಸಿದ ವರ್ತನೆ ಕುರಿತಂತೆ ಉತ್ತಮ ಸಾಂಕ್ರಾಮಿಕ ರೋಗಶಾಸ್ತ್ರದ ಮಾಹಿತಿ ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಶಿಕ್ಷಿಸಲು ಯತ್ನಿಸುವುದಕ್ಕಿಂತ ಹೆಚ್ಚಾಗಿ ಆತ್ಮಹತ್ಯೆಗೆ ಯತ್ನಿಸುವವರಿಗೆ ಮಾನಸಿಕ ಬೆಂಬಲ ನೀಡುವುದು ಮುಖ್ಯ” ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ವಿವರಿಸಿದೆ.

ಆತ್ಮಹತ್ಯೆ ಯತ್ನವನ್ನು ನಿರಪರಾಧೀಕರಿಸ ಬೇಕೆನ್ನುವುದು ನ್ಯಾಯಾಲಯಗಳು, ಕಾನೂನುವೇತ್ತರು ಮತ್ತು ವೈದ್ಯಕೀಯ ವೃತ್ತಿಪರರ ಸಾಮಾನ್ಯ ದೃಷ್ಟಿಕೋನವಾಗಿದೆ ಎಂದು ಕೂಡ ನ್ಯಾಯಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರ ಸಿಮಿ ಸಿ ಎನ್‌ ಅವರ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿತು.