A1
A1
ಸುದ್ದಿಗಳು

ಎಎಪಿ ಸಚಿವ ಸತ್ಯೇಂದ್ರ ಜೈನ್ ಜಾಮೀನಿಗೆ ದೆಹಲಿ ನ್ಯಾಯಾಲಯ ನಕಾರ

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯನ್ನು ದೆಹಲಿಯ ವಿಶೇಷ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ [ಸತ್ಯೇಂದ್ರ ಜೈನ್ ವರ್ಸಸ್‌ ಜಾರಿ ನಿರ್ದೇಶನಾಲಯ].

ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.

14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಜೈನ್‌ ತಮಗೆ ಆರೋಗ್ಯ ತೊಂದರೆ ಇದ್ದು ಅದರಲ್ಲಿಯೂ ನಿದ್ರೆಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಮ್ಮ ವಕೀಲರಾದ ಎನ್ ಹರಿಹರನ್ ಮತ್ತು ಭಾವೂಕ್ ಚೌಹಾಣ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ತಿಳಿಸಿದ್ದರು. ತಾವು ಏಳು ಬಾರಿ ಜಾರಿ ನಿರ್ದೇಶನಾಲಯದ ಎದುರು ಹಾಜರಾಗಿದ್ದು ತನಿಖೆ ಮಾಡಲು ಏನೂ ಉಳಿದಿಲ್ಲ ಎಂದು ಅವರು ನ್ಯಾಯಾಲಯವನ್ನು ಕೋರಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣವಲ್ಲದೇ ನಿಗದಿತ ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಅವರ ಬಳಿ ಇರುವುದು ತನಿಖೆಯಿಂದ ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ವಾದಿಸಿತು. ನಗದನ್ನು ಕಾನೂನುಬದ್ಧವಾಗಿ ಪರಿವರ್ತಿಸುವಂತೆ ಈ ಪ್ರಕರಣ ತೋರುತ್ತದೆ ಆದರೆ ಅದು ಅಕ್ರಮ ಹಣ ವರ್ಗಾವಣೆಯನ್ನು ಒಳಗೊಂಡಿದೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಆರೋಪಿಸಿದರು.