ಸುದ್ದಿಗಳು

ಮುಸ್ಲಿಂ ವಿರೋಧಿ ಘೋಷಣೆ: ಅಶ್ವಿನಿ ಉಪಾಧ್ಯಾಯಗೆ ಎರಡು ದಿನಗಳ ನ್ಯಾಯಾಂಗ ಬಂಧನ, ಉಳಿದ ಇಬ್ಬರು ಪೊಲೀಸ್ ವಶಕ್ಕೆ

Bar & Bench

ಜಂತರ್ ಮಂತರ್ ನಲ್ಲಿ ನಡೆದ ಮುಸ್ಲಿಂ ವಿರೋಧಿ ಘೋಷಣೆ ಘಟನೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಮಂಗಳವಾರ ವಕೀಲ ಅಶ್ವಿನಿ ಉಪಾಧ್ಯಾಯ ಸೇರಿದಂತೆ ನಾಲ್ವರಿಗೆ ಎರಡು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇತರ ಇಬ್ಬರು ಆರೋಪಿಗಳನ್ನು ಒಂದು ದಿನದ ಮಟ್ಟಿಗೆ ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ದೆಹಲಿ ಪೊಲೀಸರು ಅವರನ್ನು ಬಂಧಿಸಿದ ನಂತರ, ಉಪಾಧ್ಯಾಯ, ಪ್ರೀತ್ ಸಿಂಗ್, ದೀಪಕ್ ಸಿಂಗ್ ಹಿಂದು, ವಿನೋದ್ ಶರ್ಮಾ, ವಿನೀತ್ ಬಾಜ್ಪೈ ಮತ್ತು ದೀಪಕ್ ಕುಮಾರ್ ಅವರನ್ನು ಡ್ಯೂಟಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ತನ್ವಿ ಖುರಾನಾ ಅವರ ಮುಂದೆ ಹಾಜರುಪಡಿಸಲಾಯಿತು.

ಆರೋಪಿಗಳಾದ ದೀಪಕ್ ಸಿಂಗ್ ಹಿಂದು ಮತ್ತು ವಿನೀತ್ ಬಾಜಪೇಯಿ ಅವರಿಗೆ ಪೊಲೀಸ್ ಕಸ್ಟಡಿ ನೀಡುವಂತೆ ಪೊಲೀಸರು ಕೋರಿದರೆ, ಉಳಿದ ಆರೋಪಿಗಳಾದ ಅಶ್ವಿನಿ ಉಪಾಧ್ಯಾಯ, ಪ್ರೀತ್ ಸಿಂಗ್, ವಿನೋದ್ ಶರ್ಮಾ ಮತ್ತು ದೀಪಕ್ ಕುಮಾರ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸುವಂತೆ ಮನವಿ ಸಲ್ಲಿಸಿದರು.

ಇದು ಐಪಿಸಿ ಸೆಕ್ಷನ್‌ 153 ಎ ಅಡಿ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಪ್ರಚೋದನೆ ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವುದು) ಎಸಗುವ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣ ಎಂದು ಪ್ರಾಸಿಕ್ಯೂಟರ್‌ ಈ ಹಿಂದೆ ವಾದಿಸಿದ್ದರು.

ದ್ವೇಷ ಭಾಷಣಗಳನ್ನು ಸಂಗ್ರಹಿಸಲು ಮತ್ತು ಅಪರಾಧ ಸಂಚಿನಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಬಂಧಿಸಲು ನೆರವಾಗುವ ನಿಟ್ಟಿನಲ್ಲಿ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳುವ ಸಂಬಂಧ ಪೊಲೀಸ್‌ ಕಸ್ಟಡಿ ಕೋರಲಾಗಿತ್ತು. ಆದರೆ ಈ ಪ್ರಾರ್ಥನೆ ನ್ಯಾಯಸಮ್ಮತವಲ್ಲ ಮತ್ತು ತನಿಖೆ ನಡೆಸಲು ತನಿಖಾ ಸಂಸ್ಥೆಗೆ ಯಾವುದೇ ಅರ್ಹತೆ ಇಲ್ಲ ಎಂದು ಆರೋಪಿ ದೀಪಕ್‌ ಸಿಂಗ್‌ ಹಿಂದು ಪರ ವಕೀಲರು ವಾದಿಸಿದರು.

ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ತನಿಖೆಯು ಆರಂಭಿಕ ಹಂತದಲ್ಲಿದೆ ಮತ್ತು ಸಾಕ್ಷ್ಯಾಧಾರಗಳನ್ನು ತಿರುಚುವ ಸಾಧ್ಯತೆಯನ್ನು ಈ ಹಂತದಲ್ಲಿ ತಳ್ಳಿಹಾಕಲಾಗುವುದಿಲ್ಲ. ಆದರೂ ಪ್ರಕರಣದ ಅರ್ಹತೆಗೆ ಸಂಬಂಧಿಸಿದಂತೆ ಮುಂದುವರೆಯುವ ಮೊದಲು ಜಾಮೀನು ಅರ್ಜಿಗೆ ವಿವರವಾದ ಪ್ರತಿಕ್ರಿಯೆ ನೀಡಲು ತನಿಖಾಧಿಕಾರಿ ಬಯಸಿದ್ದಾರೆ. ನ್ಯಾಯಾಲಯಕ್ಕೆ ಕೂಡ ಘಟನೆಯ ವಿವರ ಮತ್ತಿತ್ತರ ಸಂಗತಿಗಳನ್ನು ತಿಳಿಸುವ ಅಗತ್ಯವಿದೆ ಎಂದಿತು. ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯ ಪ್ರತಿಯನ್ನು ತನಿಖಾಧಿಕಾರಿಗೆ ಒದಗಿಸುವಂತೆ ಸೂಚಿಸಿತು.

ಮತ್ತೊಂದೆಡೆ ಆಗಸ್ಟ್‌ 11ರಂದು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯ ಇಬ್ಬರು ಆರೋಪಿಗಳನ್ನು ಎರಡು ದಿನದ ಮಟ್ಟಿಗೆ ನ್ಯಾಯಾಂಗ ಬಂಧನ ವಿಧಿಸುವಂತೆ ಆದೇಶಿಸಿತು. ಆಗಸ್ಟ್‌ 12ರಂದು ಆರೋಪಿಗಳನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿತು.