Uddhav Thackeray, Aaditya Thackeray and Sanjay Raut 
ಸುದ್ದಿಗಳು

ಶಿಂಧೆ ಬಣದ ಮಾನನಷ್ಟ ಮೊಕದ್ದಮೆ: ಠಾಕ್ರೆ, ರಾವುತ್‌ಗೆ ಸಮನ್ಸ್; ಪ್ರತಿಬಂಧಕಾದೇಶ ನೀಡಲು ದೆಹಲಿ ಹೈಕೋರ್ಟ್ ನಕಾರ

Bar & Bench

ಶಿವಸೇನೆ ಚಿಹ್ನೆಗೆ ಸಂಬಂಧಿಸಿದಂತೆ ತಮ್ಮ ಬಣದ ವಿರುದ್ಧ ನೀಡಿರುವ ಹೇಳಿಕೆ ಸಂಬಂಧ ಏಕನಾಥ್ ಶಿಂಧೆ ಬಣದ ನಾಯಕ ರಾಹುಲ್ ಶೆವಾಲೆ ಅವರು ಹೂಡಿರುವ ಸಿವಿಲ್‌ ಮಾನನಷ್ಟ ಮೊಕದ್ದಮೆ ಕುರಿತಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅವರ ಪುತ್ರ ಆದಿತ್ಯ ಠಾಕ್ರೆ ಹಾಗೂ ಸಂಸದ ಸಂಜಯ್‌ ರಾವುತ್ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.

ಆದಾಗ್ಯೂ ಠಾಕ್ರೆ , ಅವರ ಪುತ್ರ ಹಾಗೂ ರಾವುತ್‌ ಅವರ ವಿಚಾರಣೆ ನಡೆಸದೆ ಮಧ್ಯಂತರ ಆದೇಶ ನೀಡಲಾಗದು. ರಾಜಕೀಯ ಹೋರಾಟದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆಯ ಮೊದಲ ದಿನವೇ ಆದೇಶ ನೀಡಲು ಬಯಸುವುದಿಲ್ಲ ಎಂದು ನ್ಯಾ. ಪ್ರತೀಕ್‌ ಜಲನ್‌ ಅವರಿದ್ದ ಪೀಠ ಹೇಳಿತು.

ಏಕನಾಥ್‌ ಶಿಂಧೆ ಬಣಕ್ಕೆ ಶಿವಸೇನೆಯ ಹೆಸರು ಹಾಗೂ ಬಿಲ್ಲು ಬಾಣದ ಗುರುತು ನೀಡುವಲ್ಲಿ ಚುನಾವಣಾ ಆಯೋಗದೊಂದಿಗೆ ರೂ. 2,000 ಕೋಟಿಗೆ ಒಪ್ಪಂದವಾಗಿದೆ ಎಂದು ರಾವುತ್‌ ಅವರು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಶಿವಸೇನೆ ಶಾಸಕಾಂಗ ಪಕ್ಷದ ನಾಯಕರಾಗಿರುವ ಶೆವಾಲೆ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಠಾಕ್ರೆ, ಅವರ ಪುತ್ರ ಹಾಗೂ ರಾವುತ್ ಅವರು ಯಾವುದೇ ಮಾನಹಾನಿಕರ ಆರೋಪ ಮಾಡದಂತೆ ತಡೆಯಾಜ್ಞೆ ನೀಡಬೇಕೆಂದು ಶವಾಲೆ ಪರವಾಗಿ ಹಿರಿಯ ವಕೀಲ ರಾಜೀವ್ ನಾಯರ್ ಕೋರಿದ್ದರು. ಆದರೆ, ಇವು ರಾಜಕೀಯ ವಲಯದ ವಿಚಾರಗಳಾಗಿದ್ದು, ಪ್ರತಿವಾದಿಗಳ ವಿಚಾರಣೆಯ ನಂತರವೇ ಆದೇಶಗಳನ್ನು ನೀಡುವುದಾಗಿ ಹೇಳಿದ ನ್ಯಾಯಾಲಯ ಪ್ರಕರಣವನ್ನು ಏ. 17ಕ್ಕೆ ವಿಚಾರಣೆ ಮುಂದೂಡಿತು