ಸುದ್ದಿಗಳು

ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆ: ಸ್ಪೀಕರ್ ಪುತ್ರಿಯ ಅವಹೇಳನ ಮಾಡಿದ್ದ ಹೇಳಿಕೆ ತೆಗೆಯಲು ದೆಹಲಿ ಹೈಕೋರ್ಟ್ ಆದೇಶ

Bar & Bench

ಪ್ರಭಾವಿಯಾಗಿರುವ ತನ್ನ ತಂದೆಯ ಕಾರಣದಿಂದಾಗಿ ಮೊದಲ ಪ್ರಯತ್ನದಲ್ಲಿಯೇ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಭಾರತೀಯ ರೈಲ್ವೆ ಕಾರ್ಮಿಕರ ಸೇವೆ (ಐಆರ್‌ಪಿಎಸ್‌) ಅಧಿಕಾರಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ತೇರ್ಗಡೆಯಾಗಿದ್ದಾರೆ ಎಂದು ಆರೋಪಿಸಿದ್ದ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್‌ ಆದೇಶಿಸಿದೆ.

ಮಧ್ಯಂತರ ಆದೇಶ ನೀಡಿದ ನ್ಯಾಯಮೂರ್ತಿ ನವೀನ್ ಚಾವ್ಲಾ 24 ಗಂಟೆಗಳ ಒಳಗೆ ಹೇಳಿಕೆಗಳನ್ನು ತೆಗೆದುಹಾಕುವಂತೆ ಎಕ್ಸ್ (ಟ್ವಿಟರ್) ಮತ್ತು ಗೂಗಲ್‌ಗೆ ಸೂಚಿಸಿದರು.

ಈ ವಿಚಾರವಾಗಿ ಮಾನಹಾನಿಕರ ಆರೋಪ ಮಾಡದಂತೆ ಅನಾಮಿಕ ಪ್ರತಿವಾದಿಗಳಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ. ಹೇಳಿಕೆಗಳು ಮಾನಹಾನಿಕರವೆಂದು ಬಿರ್ಲಾ ಅವರು ಮೇಲ್ನೋಟಕ್ಕೆ ಸಾಬೀತುಪಡಿಸಿದ್ದಾರೆ ಎಂದು ಅದು ಹೇಳಿದೆ.

ಅಂಜಲಿ ಬಿರ್ಲಾ ಅವರು ವೃತ್ತಿಯಿಂದ ರೂಪದರ್ಶಿಯಾಗಿದ್ದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗದೇ ಭಾರತೀಯ ನಾಗರಿಕ ಸೇವೆಯ ಅಧಿಕಾರಿ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಆರೋಪಿಸಿದ್ದರು.  

ಅಂಜಲಿ ಅವರು ಎಕ್ಸ್‌ ಹಾಗೂ ಗೂಗಲ್‌ನ  16 ಅಪರಿಚಿತ ವ್ಯಕ್ತಿಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಿದ್ದರು. ಖ್ಯಾತ ಯೂಟ್ಯೂಬರ್‌ ಧ್ರುವ್‌ ರಾಠಿ ಅವರ ಅಣಕು ಖಾತೆಯೂ ಇದರಲ್ಲಿ ಸೇರಿದೆ.

ಸಾಮಾಜಿಕ ಜಾಲತಾಣಗಳಲ್ಲಿನ ಹೇಳಿಕೆಗಳು ಮಾನಹಾನಿಕರವಾದ ಸುಳ್ಳು ಆಪಾದನೆಗಳಾಗಿವೆ. ತನ್ನ ಮತ್ತು ತನ್ನ ತಂದೆಯನ್ನು ಅವಹೇಳನ ಮಾಡುವ ಸಲುವಾಗಿ ಪೂರ್ವಯೋಜಿತ ಸಂಚು ನಡೆದಿದೆ. ತನ್ನ ತಂದೆಯ ಮಾನಹಾನಿ ಮಡುವ ಉದ್ದೇಶದಿಂದ ಕೆಲವರು ಇದಕ್ಕೆಲ್ಲಾ ಇಂಬು ನೀಡುತಿದ್ದಾರೆ ಎಂಬುದಾಗಿ

ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿರುವಂತೆ ಅಂಜಲಿ ಅವರು ಐಎಎಸ್‌ ಅಧಿಕಾರಿಯಾಗಿರದೆ ಐಆರ್‌ಪಿಎಸ್‌ ಅಧಿಕಾರಿಯಾಗಿದ್ದಾರೆ. 2019 ರಲ್ಲಿ ಪರೀಕ್ಷೆ ಬರೆದ ಅವರು ಏಪ್ರಿಲ್ 2021 ರಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದರು. ಕಳೆದ ವರ್ಷ ಅವರ ಕಡ್ಡಾಯ ತರಬೇತಿ ಪೂರ್ಣಗೊಂಡಿತ್ತು.