Durga puja
Durga puja 
ಸುದ್ದಿಗಳು

ದುರ್ಗಾಪೂಜೆ: ಪೆಂಡಾಲ್‌ ಪ್ರವೇಶ ನಿಯಮಾವಳಿಗಳನ್ನು ಸಡಿಲಿಸಿದ ಕಲ್ಕತ್ತಾ ಹೈಕೋರ್ಟ್‌

Bar & Bench

ಕೋವಿಡ್‌- 19 ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ದುರ್ಗಾಪೂಜೆ ಪೆಂಡಾಲ್‌ಗಳನ್ನು ಸಾರ್ವಜನಿಕ ನಿಷಿದ್ಧ ವಲಯ ಎಂದು ಘೋಷಿಸಿದ್ದ ಕಲ್ಕತ್ತಾ ಹೈಕೋರ್ಟ್‌ ವಿಭಾಗೀಯ ಪೀಠ ತನ್ನ ಹಿಂದಿನ ಆದೇಶವನ್ನು ಭಾಗಶಃ ಸಡಿಲಿಸಿದೆ.

ನ್ಯಾಯಮೂರ್ತಿಗಳಾದ ಅರಿಜಿತ್ ಬ್ಯಾನರ್ಜಿ ಮತ್ತು ಸಂಜೀವ್ ಬ್ಯಾನರ್ಜಿ ಅವರಿದ್ದ ನ್ಯಾಯಪೀಠ ಜಾರಿ ಮಾಡಿರುವ ಪರಿಷ್ಕೃತ ಆದೇಶದ ವಿವರ ಹೀಗಿದೆ:

  • ಗೊತ್ತುಪಡಿಸಿದ 'ನಿಷೇಧಿತ ಪ್ರದೇಶದೊಳಗೆ 'ಢಾಕಿ'ಗಳಿಗೆ (ಸಾಂಪ್ರದಾಯಿಕ ಡೋಲುವಾದಕರು) ಪ್ರವೇಶದ ಅನುಮತಿ ಇದೆ. ಆದರೆ ಪೆಂಡಾಲ್‌ನೊಳಗೆ ಅಲ್ಲ. ಢಾಕಿಗಳು ಮುಖಗವಸು ಧರಿಸಿರಬೇಕು, ಜೊತೆಗೆ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳತಕ್ಕದ್ದು.

  • ಉಳಿದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರವೇಶ ನಿಷಿದ್ಧ ವಲಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

  • ಪೂಜಾ ಪ್ರದೇಶ ಪ್ರವೇಶಿಸುವ ಜನರ ಖಾಯಂ ಪಟ್ಟಿ ಸಿದ್ಧಪಡಿಸುವ ಬದಲು ನಿತ್ಯ ಆ ಪಟ್ಟಿಯಲ್ಲಿರುವ ಹೆಸರುಗಳನ್ನು ಬದಲಿಸಬಹುದು.

  • ಬೆಳಿಗ್ಗೆ 8 ಗಂಟೆಯೊಳಗೆ ನಾಮಫಲಕಗಳನ್ನು ಅಂತಿಮಗೊಳಿಸಬೇಕು.

  • ಸಣ್ಣ ಪೆಂಡಾಲ್‌ನ ಚಾರ್ಟ್‌ಗಳಲ್ಲಿ 30 ಹೆಸರುಗಳಿದ್ದರೂ ಕೂಡ ಏಕಕಾಲಕ್ಕೆ ಕೇವಲ 15 ವ್ಯಕ್ತಿಗಳನ್ನು ಮಾತ್ರ ಒಳಗೆ ಅನುಮತಿಸಬೇಕು. ದೊಡ್ಡ ಪೆಂಡಾಲ್‌ಗಳ ಸಂಘಟಕರು 60 ವ್ಯಕ್ತಿಗಳನ್ನು ಹೆಸರಿಸಬಹುದು. ಆದರೆ ಏಕಕಾಲಕ್ಕೆ ಗರಿಷ್ಠ 45 ಜನರಿಗೆ ಮಾತ್ರ ಪೆಂಡಾಲ್ ಒಳಗೆ ಪ್ರವೇಶ ಪಡೆಯಬೇಕು. ಉಳಿದವರು ಪೆಂಡಾಲ್‌ ಹೊರಗೆಯೇ ನಿಲ್ಲತಕ್ಕದ್ದು.

ದುರ್ಗಾಪೂಜೆಗೆ ಸಂಬಂಧಿಸಿದಂತೆ ಸೂಕ್ತ ನಿಯಮಾವಳಿ ಪಾಲಿಸುತ್ತಿಲ್ಲ ಎಂದು ಅಜಯ್‌ ಕುಮಾರ್‌ ಡೇ ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲ ನಿಯಮಗಳನ್ನು ಕಲ್ಕತ್ತಾ ಹೈಕೋರ್ಟ್‌ ಇತ್ತೀಚೆಗೆ ಜಾರಿಗೊಳಿಸಿತ್ತು. ಆದರೆ ಈ ಆದೇಶ ಪ್ರಶ್ನಿಸಿ ಎಂಟು ಅರ್ಜಿಗಳು ಸಲ್ಲಿಕೆಯಾಗಿದ್ದವು. ತಮ್ಮನ್ನು ಪ್ರಕರಣದ ಪಕ್ಷಕಾರರನ್ನಾಗಿ ಮಾಡದೇ ಇರುವುದರ ಹಿಂದೆ ಅರ್ಜಿದಾರರ ದುರುದ್ದೇಶ ಇದೆ ಎಂದು ವಿವಿಧ ಪೂಜಾ ಸಮಿತಿಗಳು ನ್ಯಾಯಾಲಯದ ಕದ ತಟ್ಟಿದ್ದವು.