Justice DY Chandrachud
Justice DY Chandrachud 
ಸುದ್ದಿಗಳು

ರಾಜಕೀಯ-ಆರ್ಥಿಕ ಪ್ರಭಾವ ಇರದ ಪತ್ರಿಕೆಗಳು ನಮ್ಮವು ಎಂದು ಖಾತ್ರಿಪಡಿಸಿಕೊಳ್ಳಲು ಶ್ರಮವಹಿಸಬೇಕಿದೆ: ನ್ಯಾ. ಚಂದ್ರಚೂಡ್

Bar & Bench

ಪ್ರಜಾಪ್ರಭುತ್ವ ಎಂಬುದು ದಬ್ಬಾಳಿಕೆಯನ್ನು ತಡೆಯುವ ಸರ್ಕಾರದ ರೂಪ ಎಂದು ವಿವರಿಸಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ಪ್ರಸ್ತುತ ಪ್ರಜಾಪ್ರಭುತ್ವದಲ್ಲಿ ಸತ್ಯದ ಅಗತ್ಯ ಎಷ್ಟಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.

"ಪ್ರಜಾಪ್ರಭುತ್ವಕ್ಕೆ ಸತ್ಯ ಏಕೆ ಮಹತ್ವದ್ದು ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದು ಮುಖ್ಯವಾಗಿದೆ, ಅದು ಕಾನೂನಿನ ಮತ್ತು ಕೆಲವೇ ಮಂದಿಯ ದಬ್ಬಾಳಿಕೆಯನ್ನು ತಪ್ಪಿಸುವ ಆಡಳಿತದ ಒಂದು ರೂಪವಾಗಿದೆ. ಆಧುನಿಕ ಪ್ರಜಾಪ್ರಭುತ್ವಗಳಲ್ಲಿ ಸತ್ಯ ಮುಖ್ಯವಾಗಿದೆ. ಪ್ರಜಾಪ್ರಭುತ್ವಗಳನ್ನು ವಿಚಾರಶೀಲ ನೆಲೆಗಳು ಎಂದು ವ್ಯಾಖ್ಯಾನಿಸಲಾಗುತ್ತದೆ. ಏಕೆಂದರೆ, ಯಾವುದೇ ನಿರ್ಣಯವನ್ನು ಇಲ್ಲಿ ಸೂಕ್ತ ವಿವೇಚನೆಯಿಂದ ಮಾತ್ರವೆ ಕೈಗೊಳ್ಳಬೇಕಾಗುತ್ತದೆ. ಸುಳ್ಳಿನ ಮೇಲೆ ವಿವೇಚನೆ ರೂಪುತಳೆಯಲಾಗದು" ಎಂದು ಅವರು ವಿವರಿಸಿದರು.

ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಸಚಿವ ಎಂ ಸಿ ಚಾಗ್ಲಾ ಅವರ ಸ್ಮರಣಾರ್ಥ ಚೆಂಬೂರ್ ಕರ್ನಾಟಕ ಕಾನೂನು ಕಾಲೇಜು ಏರ್ಪಡಿಸಿದ್ದ ಉಪನ್ಮಾಸ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

Justice MC Chagla

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಗಳ ಕುರಿತು ಮಾತನಾಡಿದ ಅವರು “ನಕಲಿ ಸುದ್ದಿಗಳ ವಿದ್ಯಮಾನ ಹೆಚ್ಚುತ್ತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಯಾವುದೇ ತೆರನಾದ ರಾಜಕೀಯ ಅಥವಾ ಆರ್ಥಿಕ ಪ್ರಭಾವದಿಂದ ಸಂಪೂರ್ಣ ಮುಕ್ತವಾಗಿ, ಪಕ್ಷಪಾತರಹಿತವಾಗಿ ಸುದ್ದಿಯನ್ನು ನೀಡುವ ಮುಕ್ತವಾದ ಪತ್ರಿಕೆಗಳು ನಮ್ಮಲ್ಲಿವೆ ಎಂದು ಖಾತ್ರಿಪಡಿಸಿಕೊಳ್ಳಲು ನಾವು ಶ್ರಮಿಸಬೇಕಿದೆ” ಎಂದು ತಿಳಿಸಿದರು.

ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಯಾಗಿರುವ ಅವರು ಭಾರತದ ತಳ ಸಮುದಾಯಗಳು ನಡೆಸುತ್ತಿರುವ ಹೋರಾಟಗಳ ಬಗ್ಗೆ ಗಮನ ಸೆಳೆದರು. ಅಲ್ಲದೆ ಈ ಧ್ವನಿಗಳಿಗೆ ಎಷ್ಟು ಬೇಗ ಮನ್ನಣೆ ದೊರೆಯುತ್ತದೆಯೂ ಅಷ್ಟರ ಮಟ್ಟಿಗೆ ನಮಗೆಲ್ಲಾ ಒಳಿತಾಗುತ್ತದೆ ಎಂದರು.

"ಭಾರತದಲ್ಲಿ ಮಹಿಳೆಯರು, ದಲಿತರು ಹಾಗೂ ಇತರ ಸಮುದಾಯಗಳಿಗೆ ಸೇರಿದವರು ಸಾಂಪ್ರದಾಯಿಕವಾಗಿ ಅಧಿಕಾರ ಅನುಭವಿಸದ ಕಾರಣ, ಅವರ ಅಭಿಪ್ರಾಯಗಳಿಗೆ ಸತ್ಯದ ನೆಲೆ ದೊರೆತಿಲ್ಲ. ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಅನುಭವಿಸದ ಕಾರಣ, ಅವರ ಆಲೋಚನೆಗಳು ಸೀಮಿತ ಹಾಗೂ ದುರ್ಬಲವಾಗಿದ್ದು ಅಂಕುಶಕ್ಕೊಳಪಟ್ಟಿವೆ” ಎಂದು ವಿವರಿಸಿದರು.

ಭಾರತದಲ್ಲಿ ಮಹಿಳೆಯರು, ದಲಿತರು ಹಾಗೂ ಇತರ ಸಮುದಾಯಗಳಿಗೆ ಸೇರಿದವರು ಸಾಂಪ್ರದಾಯಿಕವಾಗಿ ಅಧಿಕಾರ ಅನುಭವಿಸದ ಕಾರಣ, ಅವರ ಅಭಿಪ್ರಾಯಗಳಿಗೆ ಸತ್ಯದ ನೆಲೆ ದೊರೆತಿಲ್ಲ.
ನ್ಯಾಯಮೂರ್ತಿ ಡಿವೈ ಚಂದ್ರಚೂಡ್

"ವೈವಿಧ್ಯಮಯ ಜನರ ಭಿನ್ನ ಅನುಭವಗಳಿಂದ ಕೂಡಿರುವ ಬಹುತ್ವದ ಸಮಾಜದಲ್ಲಿ ಸತ್ಯ ಎಂಬುದು ಅಭಿಪ್ರಾಯಗಳಿಗಿಂತ ಭಿನ್ನವಾಗಿರಲು ಸಾಧ್ಯವೇ ಎಂದು ನಾನು ಅನೇಕ ಬಾರಿ ಆಶ್ಚರ್ಯ ಪಡುತ್ತೇನೆ. ಉದಾಹರಣೆಗೆ, ನವತೇಜ್ ಸಿಂಗ್ ಜೋಹರ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡುವುದಕ್ಕೂ ಬಹಳ ಮೊದಲೇ ಸಲಿಂಗಕಾಮವನ್ನು ನಮ್ಮ ದೇಶದ ಪುಟ್ಟ ವರ್ಗ ಸಾಮಾನ್ಯೀಕರಿಸಿತ್ತು. ಡೆನ್ಮಾರ್ಕ್‌ ಸಲಿಂಗ ವಿವಾಹವನ್ನು ಕಾನೂನಬದ್ಧಗೊಳಿಸಿದೆ” ಎಂದು ಅವರು ಹೇಳಿದರು.

ವೈವಿಧ್ಯಮಯ ಜನರ ಭಿನ್ನ ಅನುಭವಗಳಿಂದ ಕೂಡಿರುವ ಬಹುತ್ವದ ಸಮಾಜದಲ್ಲಿ ಕೂಡ ಸತ್ಯ ಎಂಬುದು ಅಭಿಪ್ರಾಯಗಳಿಗಿಂತ ಭಿನ್ನವಾಗಿರಲು ಸಾಧ್ಯವೇ ಎಂದು ನಾನು ಅನೇಕ ಬಾರಿ ಆಶ್ಚರ್ಯ ಪಡುತ್ತೇನೆ.
ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್

ದೇಶದ ಕಾನೂನಿನ ಮೇಲೆ ಪ್ರಭಾವ ಬೀರುವ ಸಂಗತಿಗಳು ಮತ್ತು ಅಭಿಪ್ರಾಯಗಳ ಕುರಿತು ಮಾತನಾಡುವಾಗ, ನ್ಯಾ. ಚಂದ್ರಚೂಡ್ ಸಹಭಾಗಿತ್ವದ ಕಾನೂನಿನ ಮಹತ್ವ ಮತ್ತು ಅದು ತರಬಹುದಾದ ಧನಾತ್ಮಕ ಬದಲಾವಣೆಯ ಕುರಿತು ಮಾತನಾಡಿದರು.

ಕೇವಲ ವೈಜ್ಞಾನಿಕ ಸತ್ಯಗಳನ್ನಷ್ಟೇ ವಿಶ್ಲೇಷಿಸದೆ ನೈತಿಕ ಸತ್ಯಗಳನ್ನೂ ಗಮನಿಸುವ ಹೊಣೆ ಸರ್ಕಾರದ್ದು ಎಂದು ಅವರು ಇದೇ ವೇಳೆ ತಿಳಿಸಿದರು. ಇದನ್ನು ಸಾಬೀತುಪಡಿಸಲು ಜನರ ಶೋಷಣೆ ನಡೆಸುವ ಜೀತ ವಿಮುಕ್ತಿಗೆ ಮುಂದಾಗಬೇಕು ಎಂಬುದಾಗಿ ಕರೆ ನೀಡಿದರು. ಇದೇ ವೇಳೆ ನ್ಯಾ. ಚಾಗ್ಲಾ ಅವರ ಗುಣಗಾನ ಮಾಡಿದ ನ್ಯಾಯಮೂರ್ತಿಗಳು ದೇಶದ ಕಾನೂನು ಬೆಳವಣಿಗೆ ಮತ್ತು ಪ್ರಜಾ ಸ್ವಾತಂತ್ರ್ಯ ರಕ್ಷಣೆಗೆ ತಮ್ಮನ್ನು ಚಾಗ್ಲಾ ಸಮರ್ಪಿಸಿಕೊಂಡಿದ್ದನ್ನು ಸ್ಮರಿಸಿದರು.