Justices AM Khanwilkar, BR Gavai and Krishna Murari
Justices AM Khanwilkar, BR Gavai and Krishna Murari  
ಸುದ್ದಿಗಳು

ಕಡ್ಡಾಯ ಕಾರ್ಯವಿಧಾನದ ಅವಶ್ಯಕತೆ ತೊಡೆದುಹಾಕಲು ಕೌಟುಂಬಿಕ ನ್ಯಾಯಾಲಯಕ್ಕೆ ಪೂರ್ಣ ಅಧಿಕಾರವಿಲ್ಲ: ಸುಪ್ರೀಂ ಕೋರ್ಟ್

Bar & Bench

ಹಕ್ಕುಗಳ ತೀರ್ಪಿನ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಖಾತರಿಪಡಿಸುವ ಕಡ್ಡಾಯ ಕಾರ್ಯವಿಧಾನದ ಅವಶ್ಯಕತೆಗಳನ್ನು ತೊಡೆದುಹಾಕಲು ಕೌಟುಂಬಿಕ ನ್ಯಾಯಾಲಯಕ್ಕೆ ಸಂಪೂರ್ಣ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ (ಅಮನ್ ಲೋಹಿಯಾ ಮತ್ತು ಕಿರಣ್ ಲೋಹಿಯಾ ನಡುವಣ ಪ್ರಕರಣ).

ಪಕ್ಷಕಾರರ ಪರಸ್ಪರ ವಿರುದ್ಧವಾದ ಹಕ್ಕು ಮಂಡನೆಗಳನ್ನು ಪರಿಹರಿಸುವ ಅಗತ್ಯ ಕೌಟುಂಬಿಕ ನ್ಯಾಯಾಲಯಕ್ಕಿದೆ, ಆದರೆ ಹಾಗೆ ಮಾಡುವಾಗ ಅದು ಕಾನೂನಿನ ಪ್ರಕಾರ ನಿಗದಿಪಡಿಸಿದ ಮಾನದಂಡಗಳಿಗೆ ಬದ್ಧವಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.

"ಕೌಟುಂಬಿಕ ನ್ಯಾಯಾಲಯವು ಕಾನೂನಿನ್ವಯ ಇರುವ ಕಾರ್ಯವಿಧಾನವನ್ನು ಅನುಸರಿಸುತ್ತದೆ ಎಂಬ ನಿರೀಕ್ಷೆಯಿದೆ, ಇದರರ್ಥ ಎರಡೂ ಕಡೆಯವರು ಔಪಚಾರಿಕವಾಗಿ ಮನವಿ ಸಲ್ಲಿಸುವಂತೆ ಸೂಚಿಸುವುದು, ನಂತರ ನಿರ್ಣಯಕ್ಕಾಗಿ ಸಮಸ್ಯೆಗಳನ್ನು ಗುರುತಿಸುವುದು, ಸಂಬಂಧಪಟ್ಟ ಪಕ್ಷವು ಪ್ರತಿಪಾದಿಸಿದ ಸಂಗತಿಗಳನ್ನು ಸಾಬೀತುಪಡಿಸಲು ಪಕ್ಷಗಳ ಸಾಕ್ಷ್ಯಗಳನ್ನು ದಾಖಲಿಸುವುದು ಮತ್ತು ನಂತರ ಮಾತ್ರವೇ ಅಂತಹ ನಿರ್ಧಾರಕ್ಕೆ ಕಾರಣಗಳನ್ನು ದಾಖಲಿಸುವ ಮೂಲಕ ನಿರ್ಣಯವನ್ನು ಪ್ರವೇಶಿಸಲು ಮತ್ತು ಅದರ ಮೇಲೆ ನಿರ್ಧಾರವನ್ನು ನೀಡಲು ಮುಂದಾಗಬೇಕು" ಎಂದು ತೀರ್ಪು ಹೇಳಿದೆ.

ಇದನ್ನು ಮಾಡಲು, ಕೌಟುಂಬಿಕ ನ್ಯಾಯಾಲಯವು ಆಯಾ ಪಕ್ಷಗಳಿಗೆ ನೋಟಿಸ್ ನೀಡುತ್ತದೆ ಮತ್ತು ವಿವಾದವನ್ನು ನಿರ್ಧರಿಸುವ ಮೊದಲು ತಮ್ಮ ಹಕ್ಕನ್ನು ಮನವಿ ಮತ್ತು ಸಾಕ್ಷ್ಯಗಳ ರೂಪದಲ್ಲಿ ಸಲ್ಲಿಸಲು ಸಾಕಷ್ಟು ಸಮಯ ಮತ್ತು ಅವಕಾಶವನ್ನು ಒದಗಿಸುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ʼವಿಚಾರಣೆಯನ್ನು ತ್ಯಜಿಸಲಾಗಿತ್ತುʼ ಎಂಬ ಕಾರಣಕ್ಕೆ ಮಗುವನ್ನು ತನ್ನ ಹೆಂಡತಿಯ ಸುಪರ್ದಿಗೆ ಒಪ್ಪಿಸಿದ್ದ ಕೌಟುಂಬಿಕ ನ್ಯಾಯಾಲಯವೊಂದರ ಆದೇಶ ಪ್ರಶ್ನಿಸಿ ಮಗುವಿನ ತಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ಬಿ ಆರ್ ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠ ಸಲ್ಲಿಸಿದ್ದ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

1890ರ ಗಾರ್ಡಿಯನ್ಸ್‌ ಮತ್ತು ವಾರ್ಡ್ಸ್‌ ಕಾಯಿದೆ ಮತ್ತು 1984ರ ಕೌಟುಂಬಿಕ ನ್ಯಾಯಾಲಯ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಮಗುವನ್ನು ಪಾಲನೆಗಾಗಿ ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ತಂದೆ ಕೋರಿದ್ದರು. ತನ್ನನ್ನೇ ಮಗುವಿನ ಪಾಲಕ ಎಂದು ಘೋಷಿಸುವಂತೆಯೂ ಅವರು ವಿನಂತಿಸಿದ್ದರು. ಪ್ರತಿವಾದಿ ಪತ್ನಿ ಸಿಪಿಸಿಯ ಸೆಕ್ಷನ್ 151 ರ ಅಡಿಯಲ್ಲಿ ಅಪ್ರಾಪ್ತ ಮಗುವಿನ ಏಕೈಕ ಮತ್ತು ಸಂಪೂರ್ಣ ಪಾಲಕಿ ತಾನೇ ಎಂದು ಘೋಷಿಸುವಂತೆ ಕೋರಿ ಅರ್ಜಿ ಸಲ್ಲಿಸಿದರು. 2019ರಲ್ಲಿ ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ವಿವಿಧ ತೊಡಕುಗಳಿವೆ ಎಂದು ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.

ಸುಪ್ರೀಂಕೋರ್ಟ್‌ ತೀರ್ಪು "ಕೌಟುಂಬಿಕ ನ್ಯಾಯಾಲಯವು ನಿರ್ದಿಷ್ಟವಾಗಿ ಅನುಸರಿಸಬೇಕಾದ ಕಡ್ಡಾಯ ಕಾರ್ಯವಿಧಾನದ ಅವಶ್ಯಕತೆಗಳನ್ನು ತೊಡೆದುಹಾಕುವ ಸಂಪೂರ್ಣ ಅಧಿಕಾರವನ್ನು ಹೊಂದಿಲ್ಲ. ಈ ಕಾರ್ಯವಿಧಾನ ಪ್ರಕ್ರಿಯೆಗಳು ಎರಡೂ ಕಡೆಯ ಹಕ್ಕುಮಂಡನೆಯನ್ನು ಆಲಿಸಿ ನ್ಯಾಯಸಮ್ಮತ ಮತ್ತು ಪಾರದರ್ಶಕ ತೀರ್ಪನ್ನು ನೀಡಲು ಅಗತ್ಯವಾಗಿದೆ" ಎಂದು ತಿಳಿಸಿದೆ.

ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯ ಪ್ರತಿವಾದಿಯ ಮತ್ತು ಆಕೆಯ ವಕೀಲರ ಒತ್ತಾಯದ ಕಾರಣಕ್ಕೆ ಅವಸರದಿಂದ ವರ್ತಿಸಿರಬಹುದು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಬದಿಗಿರಿಸಿತು. ಅಲ್ಲದೆ ಪಾಲಕತ್ವದ ಅರ್ಜಿಯ ವಿಚಾರಣೆ ಪುನರಾರಂಭಿಸಿ ಹೊಸ ತೀರ್ಪು ನೀಡುವಂತೆ ಸೂಚಿಸಿತು.