Shashi Tharoor, Rajdeep Sardesai, Zafar Agha, Vinod K Jose, Mrinal Pande, Paresh Nath and Anand Nath
Shashi Tharoor, Rajdeep Sardesai, Zafar Agha, Vinod K Jose, Mrinal Pande, Paresh Nath and Anand Nath 
ಸುದ್ದಿಗಳು

ರೈತರ ಪ್ರತಿಭಟನೆ ಕುರಿತು ವರದಿ, ಟ್ವೀಟ್: ತರೂರ್, ರಾಜದೀಪ್ ಮತ್ತಿತರರ ಬಂಧನಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್

Bar & Bench

ಜನವರಿ 26 ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ತಪ್ಪು ವರದಿ ಮತ್ತು ಸುಳ್ಳು ಟ್ವೀಟ್‌ ಮಾಡಲಾದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌, ಪತ್ರಕರ್ತ ರಾಜದೀಪ್‌ ಸರ್ದೇಸಾಯಿ ಸೇರಿದಂತೆ ವಿವಿಧ ಪತ್ರಕರ್ತರನ್ನು ಬಂಧಿಸದಂತೆ ಸುಪ್ರೀಂಕೋರ್ಟ್‌ ತಡೆ ಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ‌ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ತರೂರ್ ಮತ್ತಿತರರು ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ನೋಟಿಸ್‌ ಕೂಡ ಜಾರಿ ಮಾಡಿದೆ. ಮಂಗಳವಾರ ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಎಫ್‌ಐಆರ್‌ ಆಧರಿಸಿ ಬಲವಂತದ ಕ್ರಮ ತೆಗೆದುಕೊಳ್ಳದಂತೆ ರಕ್ಷಣೆ ಒದಗಿಸಬೇಕೆಂದು ಮನವಿ ಮಾಡಿದರು. “ಎರಡು ವಾರಗಳ ನಂತರ ಪ್ರಕರಣದ ವಿಚಾರಣೆ ನಡೆಯಲಿದ್ದು ಅಲ್ಲಿಯವರೆಗೆ ಬಂಧನ ತಡೆ ಹಿಡಿಯಲಾಗಿದೆ,” ಎಂದು ನ್ಯಾ. ಬೊಬ್ಡೆ ಪ್ರಕಟಿಸಿದರು.

ಇಂಡಿಯಾ ಟುಡೆಯ ರಾಜದೀಪ್‌ ಸರ್ದೇಸಾಯಿ. ಕಾರವಾನ್‌ ನಿಯತಕಾಲಿಕದ ವಿನೋದ್‌ ಕೆ ಜೋಸ್‌, ಪತ್ರಕರ್ತರಾದ ಮ್ರಿಣಾಲ್‌ ಪಾಂಡೆ, ಜಫರ್‌ ಆಘಾ, ಪರೇಶ್‌ ನಾಥ್‌ ಹಾಗೂ ಆನಂದ್‌ ನಾಥ್‌ ಅವರ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗಿತ್ತು. ಹಿಂಸಾಚಾರದ ವೇಳೆ ಪೊಲೀಸರ ಗುಂಡಿನ ದಾಳಿಗೆ ರೈತನೊಬ್ಬ ಬಲಿಯಾಗಿದ್ದಾನೆ ಎಂದು ರಾಜದೀಪ್‌ ಸರ್ದೇಸಾಯಿ ಟ್ವೀಟ್‌ ಮಾಡಿದ್ದರು. ಹಲವು ವರದಿಗಳು, ಟ್ವೀಟ್‌ಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿರುವ ಆರೋಪದ ಮೇರೆಗೆ ಪಂಕಜ್‌ ಸಿಂಗ್‌ ಎಂಬುವವರು ಗುರುಗ್ರಾಮದ ಪೊಲೀಸ್‌ ಠಾಣೆಯೊಂದರಲ್ಲಿ ಸಲ್ಲಿಸಿದ್ದ ದೂರನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿತ್ತು ಎಂದು ತಿಳಿದುಬಂದಿದೆ.

ಕರಂಜವಾಲಾ ವಕೀಲಿಕೆ ಸಂಸ್ಥೆ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಅರ್ಜಿದಾರರ ಜೀವಿಸುವ ಹಕ್ಕು (ಸಂವಿಧಾನದ 21ನೇ ವಿಧಿ) ಹಾಗೂ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು (19 (1) (ಎ) ವಿಧಿ) ಉಲ್ಲಂಘನೆಯಾಗುತ್ತದೆ ಎಂದು ತಿಳಿಸಲಾಗಿತ್ತು. ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ದಿ ಕಾರವಾನ್ ಪತ್ರಿಕೆ ಸಂಪಾದಕರ ಪರವಾಗಿ ಹಿರಿಯ ನ್ಯಾಯವಾದಿ ಮುಕುಲ್‌ ರೋಹಟ್ಗಿ ವಾದ ಮಂಡಿಸಿದರು.