ಸುದ್ದಿಗಳು

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ 80 ಸಾವಿರ ಜನರ ಸಮಾವೇಶ: ಕಾಂಗ್ರೆಸ್ ಮುಖಂಡ ವಿಜಯಾನಂದ ಕಾಶಪ್ಪನವರ್ ವಿರುದ್ಧ ಎಫ್ಐಆರ್

Bar & Bench

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಫೆಬ್ರವರಿ 21 ರಂದು 80 ಸಾವಿರ ಮಂದಿಯನ್ನು ಸೇರಿಸಿ ಸಮಾವೇಶ ನಡೆಸಿದ್ದ ಕಾಂಗ್ರೆಸ್‌ ಶಾಸಕ ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದಲ್ಲಿ ಕೋವಿಡ್‌ -19 ಮಾರ್ಗಸೂಚಿಗಳನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸಬೇಕೆಂದು ಕೋರಿ ಸರ್ಕಾರೇತರ ಸಂಸ್ಥೆ ಲೆಟ್ಜ್‌ಕಿಟ್‌ ಪ್ರತಿಷ್ಠಾನ ಸಲ್ಲಿಸಿದ್ದ ಪ್ರಕರಣದ ವಿಚಾರಣೆ ವೇಳೆ ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್‌ಗೆ ಮಾಹಿತಿ ನೀಡಿತು. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಇದನ್ನು ದಾಖಲಿಸಿಕೊಂಡಿದೆ.

“ಮಾರ್ಚ್ 24 ರಂದು ರಾಜ್ಯ ಸರ್ಕಾರ ಸಲ್ಲಿಸಿದ ಎರಡನೇ ವಿವರಣಾ ಪತ್ರದಲ್ಲಿ, ವಿಪತ್ತು ನಿರ್ವಹಣಾ ಕಾಯಿದೆಯ (ಡಿಎಂ ಕಾಯಿದೆ) ಸೆಕ್ಷನ್ 51 (ಬಿ)ಯನ್ನ ಉಲ್ಲಂಘಿಸಿದ್ದಾಗಿ ಆರೋಪಿಸಿ ಫೆಬ್ರವರಿ 21 ರ ಘಟನೆಗೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ 200 ರ ಅಡಿಯಲ್ಲಿ ಸಲ್ಲಿಸಲಾದ ದೂರಿನ ಪ್ರತಿಯನ್ನು ಲಗತ್ತಿಸಲಾಗಿದೆ. ವಿಜಯಾನಂದ ಕಾಶಪ್ಪನವರ್‌ ಅವರು ಸಾಮಾಜಿಕ ಅಂತರ, ಮುಖಗವಸು ಧರಿಸುವಿಕೆ ಮತ್ತು ಕೈಗಳ ಸ್ವಚ್ಛತೆ ಇತ್ಯಾದಿ ನಿಯಮಗಳನ್ನುಉಲ್ಲಂಘಿಸಿ ಸುಮಾರು 80,000 ಬೆಂಬಲಿಗರನ್ನು ಒಟ್ಟಿಗೆ ಸೇರಿಸಿದ್ದಾರೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಅದೇ ದಿನ ಅವರು ಬೆಂಬಲಿಗರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದೆಡೆಗೆ 4,000 ಬೆಂಬಲಿಗರ ಮೆರವಣಿಗೆ ನಡೆಸಿದರು. ಅಲ್ಲಿಯೂ ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಅಲ್ಲದೆ ಮಧ್ಯಪ್ರವೇಶ ಅರ್ಜಿದಾರರಾದ ವಕೀಲ ಜಿ ಆರ ಮೋಹನ್ ಅವರು ಫೆಬ್ರವರಿ 21 ರಂದು ಬೆಂಗಳೂರಿನಲ್ಲಿ ಪಂಚಮಸಾಲಿ ಸಮಾವೇಶ ನಡೆದಾಗ ಏರ್ಪಟ್ಟಿದ್ದ ಮತ್ತೊಂದು ಸಮಾವೇಶದ ಛಾಯಾಚಿತ್ರಗಳನ್ನು ಪ್ರಸ್ತುತಪಡಿಸಿದರು. ಮೋಹನ್‌ ಅವರ ಛಾಯಾಚಿತ್ರಗಳ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಬಿಜೆಪಿಗೆ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದ್ದು ಏಪ್ರಿಲ್‌ 7ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿದೆ.