Ashok Kheny and Karnataka HC
Ashok Kheny and Karnataka HC FB
ಸುದ್ದಿಗಳು

ನಕಲಿ ಸಹಿ ಪ್ರಕರಣ: ಖೇಣಿ ಸಹೋದರರ ವಿರುದ್ಧದ ವಿಚಾರಣಾಧೀನ ನ್ಯಾಯಾಲಯದ ಆದೇಶ ಬದಿಗೆ ಸರಿಸಿದ ಹೈಕೋರ್ಟ್‌

Bar & Bench

‌ಮತದಾರರ ಚೀಟಿಯಲ್ಲಿನ ಸಹಿ ನಕಲು ಪ್ರಕರಣದಲ್ಲಿ ಮಾಜಿ ಶಾಸಕ ಹಾಗೂ ಉದ್ಯಮಿ ಅಶೋಕ್‌ ಖೇಣಿ ಹಾಗೂ ಅವರ ಸಹೋದರ ಸಂಜಯ್‌ ಖೇಣಿ ಅವರನ್ನು ಖುಲಾಸೆಗೊಳಿಸಲು ನಿರಾಕರಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಬದಿಗೆ ಸರಿಸಿದೆ.

ಅಶೋಕ್‌ ಖೇಣಿ ಹಾಗೂ ಅವರ ಸಹೋದರ ಸಂಜಯ್‌ ಖೇಣಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.

“ಬೆಂಗಳೂರು 62ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರು ಏಪ್ರಿಲ್‌ 16ರಂದು ಮಾಡಿರುವ ಆಕ್ಷೇಪಿತ ಆದೇಶವನ್ನು ಬದಿಗೆ ಸರಿಸಲಾಗಿದೆ. ಉಭಯ ಪಕ್ಷಕಾರರು ಎತ್ತಿರುವ ಎಲ್ಲಾ ರೀತಿಯ ಆಕ್ಷೇಪಗಳನ್ನು ಮುಕ್ತವಾಗಿರಿಸಲಾಗಿದ್ದು, ಅರ್ಜಿ ವಿಲೇವಾರಿ ಮಾಡಲಾಗಿದೆ. ಹೊಸದಾಗಿ ಪ್ರಕರಣವನ್ನು ಪರಿಗಣಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಪ್ರಕರಣವನ್ನು ಹೊಸದಾಗಿ ಪರಿಗಣಿಸಲು ಆದೇಶ ಮಾಡಿರುವುದರಿಂದ ಪ್ರಕರಣದ ಅರ್ಹತೆ ವಿಚಾರದಲ್ಲಿ ಮಧ್ಯಪ್ರವೇಶಿಸುವುದು ಸರಿಯಲ್ಲ. ಸಿಆರ್‌ಪಿಸಿ ಸೆಕ್ಷನ್‌ 245ರ ಅಡಿ ಅರ್ಜಿ ವಜಾ ಮಾಡಿದ ಬಳಿಕ ಆರೋಪ ನಿಗದಿ ಮಾಡಲು ನ್ಯಾಯಾಲಯ ಮುಂದಾದರೆ ಸಿಆರ್‌ಪಿಸಿ ಸೆಕ್ಷನ್‌ 246ರ ಹಂತಕ್ಕೂ ಪೀಠವು ತನ್ನ ವಿವೇಚನೆ ಅನ್ವಯಿಸಿ, ಈ ವಿಚಾರದಲ್ಲೂ ಆದೇಶ ಮಾಡಬೇಕು” ಎಂದು ಪೀಠ ಹೇಳಿದೆ.

2022ರ ಏಪ್ರಿಲ್‌ 16ರ ವಿಶೇಷ ನ್ಯಾಯಾಲಯದ ಆದೇಶವು ವಿವೇಚನಾರಹಿತವಾಗಿದ್ದು, ಅದನ್ನು ಬದಿಗೆ ಸರಿಸಬೇಕು. ಅಲ್ಲದೇ, ತಮ್ಮ ವಿರುದ್ಧದ ಆರೋಪವನ್ನು ವಜಾ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಫಾರ್ಮ್‌ 6ರಲ್ಲಿನ ಸಹಿ ನಕಲಿಗೆ ಸಂಬಂಧಿಸಿದಂತೆ ತಾನೇ ಆಕ್ಷೇಪ ಎತ್ತದಿರುವಾಗ ಇದರಿಂದ ದೂರುದಾರರಾದ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಹೇಗೆ ಬಾಧಿತರಾಗುತ್ತಾರೆ ಎಂದು ಖೇಣಿ ಆಕ್ಷೇಪಿಸಿದ್ದರು.

ಪ್ರಕರಣದ ಹಿನ್ನೆಲೆ: 2013ರ ಏಪ್ರಿಲ್‌ 1ರಂದು ಬೀದರ್‌ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸುವಂತೆ ಕೋರಿ ಅಶೋಕ್‌ ಖೇಣಿ ಸಲ್ಲಿಸಿದ್ದ ಫಾರ್ಮ್‌ 6ರಲ್ಲಿ ಅವರು ಸಹಿ ಮಾಡಿರಲಿಲ್ಲ. ಬದಲಿಗೆ ಅಶೋಕ್‌ ಖೇಣಿ ಅವರ ಸಹಿಯನ್ನು ಅವರ ಸಹೋದರ ಸಂಜಯ್‌ ಖೇಣಿ ನಕಲು ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಶೋಕ್‌ ಖೇಣಿ ಅವರು ವಿದೇಶ ಪ್ರವಾಸದಲ್ಲಿದ್ದರು ಎಂದು ಆರೋಪಿಸಿ ಅಬ್ರಹಾಂ ಖಾಸಗಿ ದೂರು ದಾಖಲಿಸಿದ್ದರು.

ಇದರ ಅನ್ವಯ ಖೇಣಿ ಸಹೋದರರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 120-ಬಿ, 167, 177, 192, 193, 196, 197, 198, 199, 200, 217, 218, 409, 415, 420, 464, 468, 471 ಜೊತೆಗೆ ಪ್ರಜಾ ಪ್ರತಿನಿಧಿ ಕಾಯಿದೆ ಸೆಕ್ಷನ್‌ 31(ಎ) ಮತ್ತು (ಬಿ) ಜೊತೆಗೆ ಚುನಾವಣಾ ನಿಯಮಗಳ ನೋಂದಣಿ ನಿಯಮ 26ರ ಅಡಿ ಪ್ರಕರಣ ದಾಖಲಾಗಿತ್ತು. ತಮ್ಮ ವಿರುದ್ಧ ಆರೋಪ ನಿಗದಿಪಡಿಸಲು ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಖುಲಾಸೆಗೊಳಿಸುವಂತೆ ಖೇಣಿ ಸಹೋದರರು ಕೋರಿದ್ದರು. ಇದನ್ನು ಒಪ್ಪದ ವಿಶೇಷ ನ್ಯಾಯಾಲಯವು ಖೇಣಿ ಸಹೋದರರ ಮನವಿಯನ್ನು ವಜಾ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಖೇಣಿ ಸಹೋದರರು ಮನವಿ ಸಲ್ಲಿಸಿದ್ದರು.