Justice Ravindra Bhat
Justice Ravindra Bhat  
ಸುದ್ದಿಗಳು

ಸ್ವಾತಂತ್ರ್ಯ ಪುಕ್ಕಟ್ಟೆ ದೊರೆಯದು, ಅದಕ್ಕಾಗಿ ಶ್ರಮಿಸಬೇಕು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್‌ ರವೀಂದ್ರ ಭಟ್

Bar & Bench

ಜನರಿಗೆ ಕಿರುಕುಳ ನೀಡಲು ಕಾನೂನಿನ ಹಲವು ಶಾಖೆಗಳನ್ನು ರೂಪಿಸಲಾಗಿದ್ದು ಈ ಪ್ರವೃತ್ತಿಗೆ ಸಮಾಜ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಹೇಳಿದರು.

ಈಸ್ಟರ್ನ್ ಬುಕ್ ಕಂಪನಿ ಪ್ರಕಟಿಸಿರುವ, ಹಿರಿಯ ನ್ಯಾಯವಾದಿ ಸಂಜೋಯ್ ಘೋಷ್ ವಿರಚಿತ ʼಹೌ ಗೌರಂಗೊ ಲಾಸ್ಟ್ ಹಿಸ್ ಒʼ ಕೃತಿಯನ್ನು ಭಾನುವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಇದೇ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವುದರಿಂದ ದೇಶದ್ರೋಹ ದುರುಪಯೋಗ ಕುರಿತಂತೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಮಾನನಷ್ಟ ಪ್ರಕರಣಗಳ ಕುರಿತು ಮಾತನಾಡುತ್ತಾ ನ್ಯಾಯಮೂರ್ತಿಗಳು “ಇಂತಹ ಪ್ರಕರಣಗಳು ನಿಜವಾಗಿಯೂ ನಿಲ್ಲುತ್ತವೆಯೇ?” ಎಂದು ಪ್ರಶ್ನಿಸಿದರು. ಜೊತೆಗೆ ಜನರಿಗೆ ಕಿರುಕುಳ ನೀಡಲು ಕಾನೂನಿನ ಹಲವು ಶಾಖೆಗಳನ್ನು ರೂಪಿಸಲಾಗಿದ್ದುಈ ಪ್ರವೃತ್ತಿಗೆ ಸಮಾಜ ಪರಿಹಾರ ಕಂಡುಕೊಳ್ಳಬೇಕಿದೆ. ಸ್ವಾತಂತ್ರ್ಯ ಪುಕ್ಕಟ್ಟೆ ದೊರೆಯುವುದಿಲ್ಲ, ಅದಕ್ಕಾಗಿ ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು.

ನ್ಯಾಯಾಲಯ ಕಲಾಪಗಳ ನೇರ ವರದಿಗಾರಿಕೆ ಬಗ್ಗೆ ಅವರ ಅಭಿಪ್ರಾಯ ಹೀಗಿತ್ತು: ನೇರ ಟ್ವೀಟ್‌ಗಳು ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದನ್ನು ಸಂಪೂರ್ಣ ಬಿಂಬಿಸುವುದಿಲ್ಲ.

ಇದೇ ವೇಳೆ ಅವರು “ಕಲಾಪ ನೇರ ಪ್ರಸಾರಕ್ಕೆ ತನ್ನದೇ ಆದ ಗುಣಾವಗುಣಗಳಿವೆ. ನೇರ ಪ್ರಸಾರ ಬೇಕೆ ಎಂಬ ಕುರಿತು ನ್ಯಾಯಾಲಯ ಪರಿಶೀಲಿಸುತ್ತಿದೆ” ಎಂದರು.

Launch of 'How Gourango lost his O'

ತಾಜ್‌ ಮಹಲ್‌ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ವಜಾಗೊಳಿಸಿದ್ದನ್ನು ಪ್ರಸ್ತಾಪಿಸಿ ಕ್ಷುಲ್ಲಕ ಪಿಐಎಲ್‌ಗಳ ಬಗ್ಗೆ ಕಾರ್ಯಕ್ರಮ ನಿರ್ವಾಹಕರು ಪ್ರಶ್ನಿಸಿದಾಗ “ನಾವು ಕೆಲವು ವಿಚಾರಗಳ ಜೊತೆಗೆ ಬದುಕಬೇಕಿದೆ ಏಕೆಂದರೆ ರೋಗಕ್ಕಿಂತ ಅದಕ್ಕೆ ನೀಡುವ ಮದ್ದು ಕೆಟ್ಟದಾಗಿರಬಹುದು. ಪಿಐಎಲ್‌ ಎಂಬುದು ಅತ್ಯಂತ ತುಳಿತಕ್ಕೊಳಗಾದವರ ವಾಹಿನಿಯಾಗಬೇಕಿತ್ತು. ಸುಪ್ರೀಂ ಕೋರ್ಟ್‌ ತೀರ್ಪುಗಳಿಂದ ಈ ಕುರಿತು ಕೆಲವು ಯತ್ನಗಳು ನಡೆದಿವೆ. ಆದರೆ ತೀವ್ರ ಎಚ್ಚರಿಕೆಯಿಂದ ಇರಬೇಕು. ಇದನ್ನು ನೀವು ನಿಯಮಾವಳಿಗಳಿಂದ ಹಿಡಿದಿಟ್ಟುಕೊಳ್ಳಲಾಗದು, ಇದಕ್ಕೆ ವಿಶಾಲ ಮಾರ್ಗಸೂಚಿಗಳೇ ಆಗಬೇಕಿದೆ” ಎಂದು ನ್ಯಾ. ಭಟ್‌ ಅಭಿಪ್ರಾಯಪಟ್ಟರು.

“ನ್ಯಾಯಾಂಗದ ಬಗ್ಗೆ ಸಾರ್ವಜನಿಕರಿಗೆ ಇರುವ ಗ್ರಹಿಕೆ ಕುರಿತು ನ್ಯಾಯಾಧೀಶರುಗಳಿಗೆ ತಿಳಿದಿರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ “… ನ್ಯಾಯಾಂಗದ ವರ್ಚಸ್ಸಿನ ಬಗ್ಗೆ ತಿಳಿದಿಲ್ಲ ಎಂದು ನೀವು ಹೇಳುವುದಾದರೆ ಅದು ಸರಿ ಎಂದು ಅನ್ನಿಸುವುದಿಲ್ಲ. ನ್ಯಾಯಾಧೀಶರಿಂದ ಸ್ಪಷ್ಟೀಕರಣ ನಿರೀಕ್ಷಿಸಲು ಸಾಧ್ಯವಿಲ್ಲ. ನ್ಯಾಯಾಧೀಶರು ತಮ್ಮ ತೀರ್ಪಿನ ಮೂಲಕ ಮಾತನಾಡುತ್ತಾರೆ. ಅಂತಿಮವಾಗಿ, ಆ ತೀರ್ಪು ಮಾಡುವ ಕೆಲಸವನ್ನು ನೀವು ನೋಡಬೇಕು. ಅದೊಂದೇ ಮುಖ್ಯವಾದುದು. ಉಳಿದೆಲ್ಲವೂ ಗ್ರಹಿಕೆ” ಎಂದು ಅವರು ಹೇಳಿದರು.

ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ “ನ್ಯಾಯಾಧೀಶರು ಆರಾಮದಾಯಕ ಜೀವನ ನಡೆಸುತ್ತಾರೆ ಎಂಬ ಗ್ರಹಿಕೆ ಇದೆ. ಆದರೆ ನಿಮ್ಮನ್ನೇ ನೀವು ಕೇಳಿಕೊಳ್ಳಿ, ಒ೦ದು ಪ್ರಕರಣದಲ್ಲಿ ನೀವು ನಾಲ್ಕು ದಿನಗಳವರೆಗೆ ವಾದಿಸುವುದಾದರೆ ಅದನ್ನು ನ್ಯಾಯಾಧೀಶರು ಕ್ಷಣಾರ್ಧದಲ್ಲಿ ತೀರ್ಮಾನಿಸಬಹುದು ಎಂದು ನೀವು ಭಾವಿಸುತ್ತೀರಾ? ನ್ಯಾಯಾಧೀಶರು ಕೆಲಸದಿಂದ ಹಿಂತಿರುಗಿದ ಬಳಿಕ ಅವರ ಕೋಣೆಯಲ್ಲಿ ನೈಜ ಕೆಲಸ ಆರಂಭವಾಗುತ್ತದೆ” ಎಂದರು.

ಹಾಗಾದರೆ ನ್ಯಾಯಾಧೀಶರ ಹುದ್ದೆ ಒಪ್ಪಿಕೊಂಡದ್ದು ಏಕೆ ಎಂಬ ಬಗ್ಗೆ ಪ್ರತಿಕ್ರಿಯಿಸುತ್ತಾ “ಒಬ್ಬ ವಕೀಲರಾಗಿ ನೀವು ಬಹುಶಃ ಒಂದೆರಡು ಪ್ರಕರಣಗಳಲ್ಲಿ ಪರಿಣಾಮ ಬೀರಬಹುದು. ಆದರೆ ನ್ಯಾಯಾಧೀಶರಾಗಿ ಆ ಕೆಲಸವನ್ನು ಆರೇಳು ಪ್ರಕರಣಗಳಲ್ಲಿ ಮಾಡಬಹುದು” ಎಂದು ಪ್ರತಿಪಾದಿಸಿದರು.