Godhra, Supreme Court
Godhra, Supreme Court 
ಸುದ್ದಿಗಳು

ಗೋಧ್ರಾ ರೈಲು ದಹನ: 8 ಅಪರಾಧಿಗಳಿಗೆ ಸುಪ್ರೀಂನಿಂದ ಜಾಮೀನು; ಮರಣ ದಂಡನೆಗೆ ಗುರಿಯಾಗಿರುವ ನಾಲ್ವರಿಗೆ ಪರಿಹಾರಕ್ಕೆ ನಕಾರ

Bar & Bench

ಗೋಧ್ರಾ ಹತ್ಯಾಕಾಂಡದಲ್ಲಿ ಅಪರಾಧಿಗಳು ಎಂದು ಘೋಷಿತರಾಗಿರುವ ಎಂಟು ಮಂದಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದ್ದು, ಮರಣ ದಂಡನೆಗೆ ಗುರಿಯಾಗಿರುವ ನಾಲ್ಕು ಮಂದಿಗೆ ಪರಿಹಾರ ನೀಡಲು ನಿರಾಕರಿಸಿದೆ.

ಸತ್ರ ನ್ಯಾಯಾಲಯ ವಿಧಿಸುವ ಷರತ್ತಿಗೆ ಒಳಪಟ್ಟು ಎಂಟು ಅಪರಾಧಿಗಳಿಗೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ ಎಸ್‌ ನರಸಿಂಹ ಅವರ ನೇತೃತ್ವದ ವಿಭಾಗೀಯ ಪೀಠವು ಜಾಮೀನು ಮಂಜೂರು ಮಾಡಿದೆ.

ಫೆಬ್ರವರಿ 20ರಂದು ಅಪರಾಧಿಗಳ ವಯಸ್ಸು, ಜೈಲಿನಲ್ಲಿ ಅವರು ಕಳೆದಿರುವ ಸಮಯದ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು.

ಗುಜರಾತ್‌ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಗುಜರಾತ್ ಹೈಕೋರ್ಟ್‌ 2017ರ ಆದೇಶದಲ್ಲಿ 11 ಅಪರಾಧಿಗಳಿಗೆ ನೀಡಲಾದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದ್ದರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿಚಾರಣಾಧೀನ ನ್ಯಾಯಾಲಯವು 20 ಮಂದಿಗೆ ಜೀವಾವಧಿ ಶಿಕ್ಷೆ, 11 ಮಂದಿಗೆ ಮರಣ ದಂಡನೆ ವಿಧಿಸಿದೆ. ಆದರೆ, ಬಳಿಕ ಹೈಕೋರ್ಟ್‌ 11 ಮಂದಿಗೆ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದೆ ಎಂದರು.

ಹಿರಿಯ ವಕೀಲ ಸಂಜಯ್‌ ಹೆಗ್ಡೆ ಅವರು ಕೆಲವು ಅಪರಾಧಿಗಳು 60ನೇ ವಯಸ್ಸಿನಲ್ಲಿದ್ದಾರೆ. 11 ಮಂದಿಗೆ ವಿಧಿಸಿರುವ ಗಲ್ಲು ಶಿಕ್ಷೆಯ ಬಗ್ಗೆಯೂ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್‌ಗೆ ಕೋರಿದರು.

ಹಿರಿಯ ವಕೀಲ ಕೆ ಟಿ ಎಸ್‌ ತುಳಸಿ ಅವರು ಆರೋಪಿಗಳ ಪೈಕಿ ಬಿಲಾಲ್‌ ಇಸ್ಮಾಯಿಲ್‌ ಅವರಿಗೆ ದಾಖಲೆಗೆ ಸಹಿ ಮಾಡುವಾಗ ಗುಜರಾತಿ ಗೊತ್ತಿರಲಿಲ್ಲ. ದಾಖಲೆಯಲ್ಲಿನ ಮಾಹಿತಿ ತಿಳಿಯದೇ ಅವರು ಸಹಿ ಮಾಡಿದ್ದಾರೆ ಎಂದರು.

ಗೋಧ್ರಾ ಹತ್ಯಾಕಾಂಡ ಪ್ರಕರದಲ್ಲಿನ 31 ಮಂದಿಗೆ ಕಳೆದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಗೋಧ್ರಾ ರೈಲು ದಹನ ಪ್ರಕರಣವು ಗುಜರಾತ್‌ನಲ್ಲಿ ಕೋಮು ದಂಗೆಗೆ ನಾಂದಿ ಹಾಡಿ, ಸುಮಾರು 2,000 ಮಂದಿ ಹತ್ಯೆಯಾಗಿತ್ತು.