Governor Acharya Devvrat
Governor Acharya Devvrat  
ಸುದ್ದಿಗಳು

ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸಗಣಿ, ಗೋಮೂತ್ರದ ಸದ್ಗುಣ ವಿವರಿಸಿದ ರಾಜ್ಯಪಾಲ ಆಚಾರ್ಯ ದೇವವ್ರತ

Bar & Bench

ದೇಸಿ ಹಸುಗಳ ಸಗಣಿ ಮತ್ತು ಗೋಮೂತ್ರ ಭಾರತೀಯ ರೈತರಿಗೆ ವರವಾಗಿದೆ ಏಕೆಂದರೆ ಪ್ರತಿ 1 ಗ್ರಾಂ ಸಗಣಿಯಲ್ಲಿ 300 ಕೋಟಿ ಬ್ಯಾಕ್ಟೀರಿಯಾಗಳಿದ್ದು ಗೋಮೂತ್ರ ಖನಿಜಗಳ ಆಗರವಾಗಿದೆ ಎಂದು ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ರಾಜ್ಯಪಾಲ ಆಚಾರ್ಯ ದೇವವ್ರತ್ ತಿಳಿಸಿದರು.

ರಾಜ್ಯಾದ್ಯಂತ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ದೇವರು ಉದ್ದೇಶಪೂರ್ವಕವಾಗಿ ಭಾರತೀಯ ಹಸುಗಳ ಕರುಳಿನಲ್ಲಿ ಬ್ಯಾಕ್ಟೀರಿಯಾದ "ಕಾರ್ಖಾನೆ" ಸೃಷ್ಟಿಸಿದ್ದಾನೆ ಎಂದು ಹೇಳಿದರು.

"ನಾನು ಕತ್ತೆ, ಕೋತಿ, ಭಾರತೀಯ ದೇಸಿ ಹಸು ಮುಂತಾದ ವಿವಿಧ ಪ್ರಾಣಿಗಳ ವಿಸರ್ಜನೆಯನ್ನು ಸಂಗ್ರಹಿಸಿ ನಂತರ ಅದನ್ನು ಸಂಶೋಧನೆಗೆ ಕಳುಹಿಸಿದ್ದೆ. ದೇಸಿ ಹಸುಗಳ ಒಂದು ಗ್ರಾಂ ಸಗಣಿಯಲ್ಲಿ 300 ಕೋಟಿ ಬ್ಯಾಕ್ಟೀರಿಯಾಗಳಿವೆ ಎಂದರೆ ನೀವು ಆಶ್ಚರ್ಯ ಪಡುತ್ತೀರಿ. ಇದು ಕೃಷಿಗೆ ಉಪಯುಕ್ತವಾಗಿದೆ. ಭೂಗ್ರಹದಲ್ಲಿ ಹಲವಾರು ಪ್ರಾಣಿಗಳಿವೆ, ಆದರೆ ದೇವರು ದೇಸಿ ಹಸುಗಳ ಕರುಳಿನಲ್ಲಿ ಮಾತ್ರ ಬ್ಯಾಕ್ಟೀರಿಯಾದ ಕಾರ್ಖಾನೆಯನ್ನೇ ನಿರ್ಮಿಸಿ ಕಳುಹಿಸಿದ್ದಾನೆ, ಇದು ರೈತರಿಗೆ ವರದಾನ” ಎಂದು ಅವರು ತಿಳಿಸಿದರು.

"ಗೋಮೂತ್ರವು ಖನಿಜಗಳ ನಿಧಿಯಾಗಿದ್ದು ಹಸುವಿನ ಸಗಣಿಯಲ್ಲಿ ಪರಿಣಾಮಕಾರಿ ಬ್ಯಾಕ್ಟೀರಿಯಾ ಇವೆ, ನೀವು ಆಶ್ಚರ್ಯಪಟ್ಟರೂ, ನಮ್ಮಲ್ಲಿ ಅನೇಕರು ಬೀದಿಗೆ ಬಿಟ್ಟಿರುವ ಹಸುಗಳಲ್ಲಿ ಒಂದನ್ನು ಹಿಡಿದು ಅದರ ಗೊಬ್ಬರ ಪರೀಕ್ಷಿಸಿದೆ. ಹಾಲು ನೀಡದ ಆ ಹಸುಗಳ  ಒಂದು ಗ್ರಾಂ ಸಗಣಿಯಲ್ಲಿ 500 ಕೋಟಿ ಬ್ಯಾಕ್ಟೀರಿಯಾಗಳಿರುತ್ತವೆ. ಆದ್ದರಿಂದ ಯೋಚಿಸಿ, ನಾವು ತೊರೆದಿರುವ ಹಸುಗಳು ರೈತರಿಗೆ ಸಹಾಯಕವಾಗಿವೆ” ಎಂದರು.

ರಾಜ್ಯಪಾಲರು ‘ನೈಸರ್ಗಿಕ ಕೃಷಿಯ ಮುಖಗಳುʼ ಎಂಬ ವಿಷಯದ ಕುರಿತು ರಾಜ್ಯ ನ್ಯಾಯಾಂಗವನ್ನು ಉದ್ದೇಶಿಸಿ ಮಾತನಾಡಿದರು.

ಕ್ರಿಮಿನಾಶಕಗಳು, ಕೀಟನಾಶಕಗಳು ಹಾಗೂ ಯೂರಿಯಾವನ್ನು ಬಳಸುವ ಈಗಿನ ಕೃಷಿ ಪದ್ದತಿಗಳನ್ನು ಟೀಕಿಸಿದ ಅವರು ನೈಸರ್ಗಿಕ ಕೃಷಿ ಯನ್ನು ಪ್ರತಿಪಾದಿಸಿದರು. ವಿಶಿಷ್ಟ ಜೀವಾಮೃತ ಸೂತ್ರವನ್ನು ಬಳಸಿದ್ದ ಆ ವಿಧಾನವನ್ನು ತಾವು ಅಳವಡಿಸಿಕೊಂಡಿರುವುದಾಗಿ ತಿಳಿಸಿದರು.