Justices S Vaidyanathan and Mohammed Shaffiq 
ಸುದ್ದಿಗಳು

ಗಂಡನ ಕುಟಂಬದ ಒಳಿತಿಗಾಗಿ ಪ್ರಾಣ ಬಿಡುವ ಮಹಿಳೆಯರನ್ನು ದೇವರಿಗೆ ಸಮ ಎನ್ನುತ್ತವೆ ಹಿಂದೂ ಪುರಾಣಗಳು: ಮದ್ರಾಸ್ ಹೈಕೋರ್ಟ್

Bar & Bench

ತಾಂತ್ರಿಕ ಕಾರಣಗಳಿಗಾಗಿ ಕಲ್ಯಾಣ ಆಡಳಿತದ ಸೌಲಭ್ಯ ದೊರೆಯದಂತೆ ಮಾಡಲಾಗದು ಎಂದಿರುವ ಮದ್ರಾಸ್‌ ಹೈಕೋರ್ಟ್‌ ತಾತ್ಕಾಲಿಕ ಮಹಿಳಾ ಉದ್ಯೋಗಿಯೊಬ್ಬರಿಗೆ ಹೆರಿಗೆ ರಜೆ ಸೌಲಭ್ಯ ನೀಡುವಂತೆ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಗೆ ಸೂಚಿಸಿದೆ. [ಟಿಎನ್‌ಎಸ್‌ಟಿಸಿ ಮತ್ತು ಬಿ ರಾಜೇಶ್ವರಿ ನಡುವಣ ಪ್ರಕರಣ].

ಆ ಮೂಲಕ ಹೈಕೋರ್ಟ್‌ನ ಏಕಸದಸ್ಯ ಪೀಠ ಈ ಹಿಂದೆ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಎಸ್ ವೈದ್ಯನಾಥನ್ ಮತ್ತು ಮೊಹಮ್ಮದ್ ಶಫೀಕ್ ಅವರಿದ್ದ ಪೀಠ ಜನವರಿ 12ರಂದು ನೀಡಲಾದ ತೀರ್ಪಿನಲ್ಲಿ  ಎತ್ತಿ ಹಿಡಿಯಿತು. ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಮಹಿಳೆ ಕೆಲಸಕ್ಕೆ ಗೈರುಹಾಜರಾಗಿರುವುದನ್ನು ಹೆರಿಗೆ ರಜೆ ಎಂದು ಪರಿಗಣಿಸಬೇಕು. ಜೊತೆಗೆ ತಮಿಳುನಾಡು ಮಾತೃತ್ವ ಪ್ರಯೋಜನಗಳ ನಿಯಮಾವಳಿ- 1967.  ಮತ್ತು ಹೆರಿಗೆ ಪ್ರಯೋಜನಗಳ ಕಾಯಿದೆ- 1961ರ ಅಡಿಯಲ್ಲಿ ಒದಗಿಸಲಾದ ಎಲ್ಲಾ ಸೌಲಭ್ಯಗಳನ್ನು ಅವರಿಗೆ ಒದಗಿಸುವಂತೆ ಸೂಚಿಸಿತು.  

ಹೀಗೆ ತೀರ್ಪು ನೀಡುವ ವೇಳೆ ನ್ಯಾಯಾಲಯ ಹಿಂದೂ ಪುರಾಣವನ್ನು ಉಲ್ಲೇಖಿಸಿತು.  "ಹಿಂದೂ ಪುರಾಣಗಳಲ್ಲಿ, ಹಿರಿಯರನ್ನು ಗೌರವಿಸುವ ಮತ್ತು ಗಂಡನ ಕುಟುಂಬದ ಕಲ್ಯಾಣಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡುವ ಮಹಿಳೆಯರನ್ನು ಪುರುಷರಿಗೆ ಸಮಾನರು ಇಲ್ಲವೇ ಅವರಿಗಿಂತಲೂ ಮಿಗಿಲಾದವರು ಎಂದು ಚಿತ್ರಿಸಲಾಗಿದ್ದು ಅವರನ್ನು ದೇವರಿಗೆ ಸಮಾನಾಗಿ ಪರಿಗಣಿಸಲಾಗಿದೆ" ಎಂದು ನ್ಯಾಯಾಲಯ ಹೇಳಿತು. ಅಲ್ಲದೆ ಕಲ್ಯಾಣ ಆಡಳಿತದ ಸೌಲಭ್ಯಗಳನ್ನು ನೀಡುವುದಕ್ಕೆ ವಿರುದ್ಧವಾದ ನಿಲುವನ್ನು ಸರ್ಕಾರಿ ಸಂಸ್ಥೆಗಳು ತಳೆಯಬಾರದು ಎಂದೂ ಅದು ಬುದ್ಧಿವಾದ ಹೇಳಿತು.  

ಮಗುವಿನ ಜನನದೊಂದಿಗೆ ತಾಯಿ ಕೂಡ  ʼಮರುಹುಟ್ಟುʼ ಪಡೆಯುವುದರಿಂದ ಹೆರಿಗೆಯ ಸಮಯದಲ್ಲಿ ಮಹಿಳೆ ಅನುಭವಿಸುವ ನೋವು ಪುರುಷರಾದವರಿಗೆ ಸಹಿಸಲು ಅಸಾಧ್ಯ. ಹೀಗಾಗಿ ಹೆರಿಗೆ ನಂತರ ಅವರ ಜೀವನ ಸುಗಮಗೊಳಿಸುವಂತಹ ಎಲ್ಲಾ ಪ್ರಯೋಜನಗಳನ್ನು ಮಹಿಳೆಯರಿಗೆ ನೀಡಬೇಕು ಎಂದು ನ್ಯಾಯಾಲಯ ವಿವರಿಸಿತು.

ಮಹಿಳೆ 2014ರ ಮಾರ್ಚ್‌ನಲ್ಲಿ ಆರು ತಿಂಗಳ ಕಾಲ ಹೆರಿಗೆಗೆಂದು ರಜೆ ಪಡೆದಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಸರ್ಕಾರಿ ವಲಯದ ಮಹಿಳಾ ಉದ್ಯೋಗಿಗಳಿಗೆ ಆರು ತಿಂಗಳ ಹೆರಿಗೆ ರಜೆ  ಒದಗಿಸಲಾಗುತ್ತದೆ. ಆದರೆ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಮಹಿಳಾ ಉದ್ಯೋಗಿ ಕೇವಲ 145 ದಿನ   ಕೆಲಸ ಮಾಡಿದ್ದರು ಎಂದು ಟಿಎನ್‌ಎಸ್‌ಟಿಸಿ ಹೈಕೋರ್ಟ್‌ ಮೆಟ್ಟಿಲೇರಿತ್ತು.