Justices UU Lalit and KM Joseph
Justices UU Lalit and KM Joseph 
ಸುದ್ದಿಗಳು

ನ್ಯಾಯಾಲಯಗಳು ಸೂಕ್ತ ಪ್ರಕರಣದಲ್ಲಿ ಗೃಹ ಬಂಧನ ವಿಧಿಸಬಹುದು; ನ್ಯಾಯಾಂಗ ಬಂಧನವೆಂದರೆ ಕಾರಾಗೃಹ ಬಂಧನವೇ ಅಲ್ಲ: ಸುಪ್ರೀಂ

Bar & Bench

ಸೂಕ್ತ ಪ್ರಕರಣಗಳಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 167ರ ಅಡಿ ಆರೋಪಿಗೆ ಗೃಹ ಬಂಧನ ವಿಧಿಸುವುದು ನ್ಯಾಯಾಲಯಗಳ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ತೀರ್ಪು ನೀಡಿದೆ (ಗೌತಮ್‌ ನವಲಾಖ ವರ್ಸಸ್‌ ರಾಷ್ಟ್ರೀಯ ತನಿಖಾ ದಳ).

ಸೆಕ್ಷನ್‌ 167ರ ಪ್ರಕಾರ ಕಸ್ಟಡಿಯನ್ನು ಪೊಲೀಸ್‌ ಕಸ್ಟಡಿ ಮತ್ತು ನ್ಯಾಯಾಂಗ ಬಂಧನ ಎಂದು ಇಲ್ಲಿಯವರೆಗೆ ಅರ್ಥೈಸಲಾಗಿದೆ. ನ್ಯಾಯಾಂಗ ಬಂಧನವನ್ನು ಕಾರಾಗೃಹ (ಜೈಲು) ಬಂಧನವೆಂದೇ ಪರಿಭಾವಿಸಿರುವುದನ್ನು ನ್ಯಾಯಾಲಯವು ಗಮನಿಸಿತು.

“ಸೆಕ್ಷನ್ 167ರ ಅಡಿಯಲ್ಲಿ ಕಸ್ಟಡಿಯ ಭಾಗವಾಗಿ ಗೃಹಬಂಧನದ ಪರಿಕಲ್ಪನೆಯನ್ನು ಈ ನ್ಯಾಯಾಲಯ ಸೇರಿದಂತೆ ಇತರ ನ್ಯಾಯಾಲಯಗಳನ್ನು ಬಳಸಿಲ್ಲ. ಅದಾಗ್ಯೂ, ಈ ವಿಷಯವು ಗಮನಕ್ಕೆ ಬಂದಾಗ, ಮತ್ತು ಅದರ ಅಂಶಗಳನ್ನು ಗಮನಿಸಿದಾಗ ಅದು ಸೆಕ್ಷನ್ 167ರ ಅಡಿಯಲ್ಲಿ ಬರುವ ಪಾಲನೆಯನ್ನು ಒಳಗೊಂಡಿರುತ್ತದೆ ಎಂಬ ಅಭಿಪ್ರಾಯವನ್ನು ನಾವು ಹೊಂದಿದ್ದೇವೆ” ಎಂದು ಪೀಠ ಹೇಳಿದೆ.

ಸೆಕ್ಷನ್‌ 167ರ ಅಡಿಯಲ್ಲಿ ಸೂಕ್ತ ಪ್ರಕರಣಗಳಲ್ಲಿ ಗೃಹ ಬಂಧನ ವಿಧಿಸುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ ಎಂದೂ ನ್ಯಾಯಾಲಯ ಹೇಳಿದೆ.

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಮಾಜಿಕ ಹೋರಾಟಗಾರ ಗೌತಮ್‌ ನವಲಾಖ ಡಿಫಾಲ್ಟ್‌ ಜಾಮೀನು ಕೋರಿ ಸಲ್ಲಿಸಿದ್ದ ಮನವಿಯ ತೀರ್ಪಿನ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಯು ಯು ಲಲಿತ್‌ ಮತ್ತು ಕೆ ಎಂ ಜೋಸೆಫ್‌ ಅವರಿದ್ದ ವಿಭಾಗೀಯ ಪೀಠವು ಮೇಲಿನ ವಿಚಾರಗಳನ್ನು ಪರಿಗಣಿಸಿದೆ.

ದೆಹಲಿಯಲ್ಲಿ ತಾವು ಗೃಹ ಬಂಧನದಲ್ಲಿದ್ದ ಅವಧಿಯನ್ನೂ ನ್ಯಾಯಾಂಗ ಬಂಧನದ ಅವಧಿ ಎಂದು ಪರಿಗಣಿಸಬೇಕು. ಸೆಕ್ಷನ್‌ 167(2)ರ ಅಡಿ ಕಸ್ಟಡಿ ಅವಧಿಯನ್ನು ನಿರ್ಧಿರಿಸುವಾಗ ಅದನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ನವಲಾಖ ವಾದಿಸಿದ್ದರು.

ಆರೋಪಿಯ ವಯಸ್ಸು, ಆರೋಗ್ಯ ಸ್ಥಿತಿ ಮತ್ತು ಆತನ ಪೂರ್ವಪರ ಹಾಗೂ ಅಪರಾಧದ ಸ್ವಭಾವ, ಇತರೆ ವಿಧಾನದ ಕಸ್ಟಡಿ ಮತ್ತು ಗೃಹ ಬಂಧನ ಷರತ್ತು ವಿಧಿಸುವ ಸಾಧ್ಯತೆ ಇತ್ಯಾದಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ಗೃಹ ಬಂಧನ ವಿಧಿಸಬಹುದು ಎಂದು ತನ್ನ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.

“ಸೆಕ್ಷನ್ 309ರ ಅಡಿಯಲ್ಲಿ ನ್ಯಾಯಾಂಗ ಬಂಧನ ಪಾಲನೆಯಡಿ, ಸೂಕ್ತ ಮಾನದಂಡಗಳ ಅನ್ವಯ, 205 ನ್ಯಾಯಾಲಯಗಳು ಗೃಹಬಂಧನವನ್ನು ಅರ್ಹ ಮತ್ತು ಸೂಕ್ತವಾದ ಪ್ರಕರಣಗಳಲ್ಲಿ ಬಳಸಿಕೊಳ್ಳಲು ಮುಕ್ತವಾಗಿರುತ್ತವೆ” ಎಂದು ನ್ಯಾಯಾಲಯ ಹೇಳಿದೆ.

ಶಿಕ್ಷೆಯ ನಂತರದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಕಾರಾಗೃಹಗಳಲ್ಲಿನ ಜನದಟ್ಟಣೆ ಮತ್ತು ಕಾರಾಗೃಹಗಳನ್ನು ನಿರ್ವಹಿಸುವಲ್ಲಿ ರಾಜ್ಯಕ್ಕೆ ಆಗುವ ವೆಚ್ಚದ ದೃಷ್ಟಿಯಿಂದ ಅದರ ನಿರ್ವಹಣೆಯ ಬಗ್ಗೆ ಆಲೋಚಿಸಲು ನಾವು ಅದನ್ನು ಶಾಸಕಾಂಗಕ್ಕೆ ಮುಕ್ತವಾಗಿಡುತ್ತೇವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.