Justice Rohinton Nariman
Justice Rohinton Nariman  
ಸುದ್ದಿಗಳು

ದೇಶದ್ರೋಹ ಕಾನೂನು ಹಾಗೂ ಯುಎಪಿಎ ಅಹಿತಕರ ಭಾಗ ರದ್ದುಗೊಳಿಸುವಂತೆ ಸುಪ್ರೀಂಗೆ ಸಲಹೆ: ನಿವೃತ್ತ ನ್ಯಾಯಮೂರ್ತಿ ನಾರಿಮನ್

Bar & Bench

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ- 1967ರ ಆಕ್ಷೇಪಾರ್ಹ ಭಾಗಗಳು ಹಾಗೂ ದೇಶದ್ರೋಹವನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್‌ 124 ಎಯನ್ನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್‌ ನಾರಿಮನ್‌ ಅವರು ಸರ್ವೋಚ್ಚ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

ವಿಶ್ವನಾಥ ಪಸಾಯತ್ ಅವರ ಶತಮಾನೋತ್ಸವದ ಅಂಗವಾಗಿ ವಿ ಪಿ ಸ್ಮಾರಕ ಸಮಿತಿ ಇಂದು ಆಯೋಜಿಸಿದ್ದ ವೀಡಿಯೊ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ದೋಷಯುಕ್ತ ಕಾನೂನುಗಳನ್ನು ರದ್ದುಗೊಳಿಸುವ ವಿಚಾರವನ್ನು ಸರ್ಕಾರಕ್ಕೆ ಬಿಡದೆ ಸುಪ್ರೀಂಕೋರ್ಟ್‌ ತನ್ನ ನ್ಯಾಯಾಂಗ ಪರಾಮರ್ಶನಾ ಅಧಿಕಾರವನ್ನು ಬಳಸಿ ಅವುಗಳನ್ನು ತೊಡೆದುಹಾಕಬೇಕು. ಇದರಿಂದ ಪ್ರಜೆಗಳು ಹೆಚ್ಚು ಮುಕ್ತವಾಗಿ ಉಸಿರಾಡಬಹುದು ಎಂದು ಹೇಳಿದರು.

“ದೇಶದ್ರೋಹಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಕೇಂದ್ರಕ್ಕೆ ಕಳುಹಿಸದಂತೆ ಸುಪ್ರೀಂಕೋರ್ಟ್‌ಗೆ ಸಲಹೆ ನೀಡುತ್ತೇನೆ. ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ (ಆದರೆ) ನ್ಯಾಯಾಲಯ ತನ್ನ ಅಧಿಕಾರ ಬಳಸಿ ಸೆಕ್ಷನ್ 124 ಎ ಮತ್ತು ಯುಎಪಿಎಯ ಆಕ್ರಮಣಕಾರಿ ಭಾಗವನ್ನು ರದ್ದುಗೊಳಿಸುವುದು ಮುಖ್ಯವಾಗಿದೆ. ಆಗ ಇಲ್ಲಿನ ನಾಗರಿಕರು ಹೆಚ್ಚು ಮುಕ್ತವಾಗಿ ಉಸಿರಾಡುತ್ತಾರೆ” ಎಂದು ಹೇಳಿದರು.

ದೇಶದ್ರೋಹ ಸೆಕ್ಷನ್‌ ಬಗೆಗೆ ನ್ಯಾ. ನಾರಿಮನ್‌...

  • ಲಾರ್ಡ್ ಥಾಮಸ್ ಬಾಬಿಂಗ್ಟನ್ ಮೆಕಾಲೆ ರಚಿಸಿದ ಮೂಲ ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ದೇಶದ್ರೋಹದ ಸೆಕ್ಷನ್‌ ಉಲ್ಲೇಖಿಸಿಲ್ಲ.

  • ದೇಶದ್ರೋಹ ನಿಯಮ ಕರಡು ರೂಪದಲ್ಲಿತ್ತು. ಆದರೆ ಅಂತಿಮ ಗ್ರಂಥದಲ್ಲಿ ಇರಲಿಲ್ಲ. ನಂತರ ಅದನ್ನು ಪತ್ತೆಹಚ್ಚಿ ಮತ್ತೆ ಕರಡಾಗಿ ರೂಪಿಸಲಾಯಿತು. ಈ ಸೆಕ್ಷನ್‌ ಪ್ರಮಾದವಶಾತ್‌ ಉಳಿದುಕೊಂಡಿದೆ ಎನ್ನಲಾಗಿದೆ. ಪದಗಳು ಸಹ ಅಸ್ಪಷ್ಟವಾಗಿವೆ. 124 ಎ ಅಡಿಯಲ್ಲಿ ಶಿಕ್ಷೆ ಭಾರಿ ಪ್ರಮಾಣದ್ದಾಗಿದ್ದು ಗಡಿಪಾರು ಇಲ್ಲವೇ ಮೂರು ವರ್ಷಗಳ ಜೈಲುಶಿಕ್ಷೆಯಾಗುತ್ತಿತ್ತು.

  • ಬಂಗೋಬಾಸಿ ಎಂಬ ಪ್ರಕರಣ ಇತ್ತು. ಅದರಲ್ಲಿ, ಬಂಗೋಬಾಸಿ ಪತ್ರಿಕೆಯ ಸಂಪಾದಕರ ಮೇಲೆ ಬಾಲ್ಯ ವಿವಾಹಗಳಿಗೆ ಸಂಬಂಧಿಸಿದ ಕಾನೂನನ್ನು ಪ್ರಶ್ನಿಸಿದ್ದಕ್ಕಾಗಿ ಬಂಗೋಬಾಸಿ ಪತ್ರಿಕೆಯ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಾಲ್ಯ ವಿವಾಹವು ಭಾರತೀಯ ಸಂಸ್ಖೃತಿಯಲ್ಲಿ ಅಂತರ್ಗತವಾಗಿದೆ ಎಂದು ಲೇಖಕರು ತಿಳಿಸಿದ್ದರು. ಬ್ರಿಟಿಷ್‌ ನ್ಯಾಯಾಧೀಶರಿಗೆ ಇದು ಇಷ್ಟವಾಗದೆ ಸೆಕ್ಷನ್ 124 ಎ ಅಡಿಯಲ್ಲಿ ಸಂಪಾದಕರು ತಪ್ಪಿತಸ್ಥರು ಎಂದು ಘೋಷಿಸಿದರು.

  • ಬಾಲಗಂಗಾಧರ ತಿಲಕ್, ಮಹಾತ್ಮಾ ಗಾಂಧಿ ಮತ್ತು ಜವಾಹರ ಲಾಲ್‌ ನೆಹರೂ ಅವರಂತಹ ಸ್ವಾತಂತ್ರ್ಯ ಹೋರಾಟಗಾರರು ವಸಾಹತುಶಾಹಿ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕಾಗಿ ದೇಶದ್ರೋಹದ ಶಿಕ್ಷೆಗೊಳಗಾದರು.

ಯುಎಪಿಎ ಕುರಿತಂತೆ ನ್ಯಾ. ನಾರಿಮನ್‌

  • ನಾವು ಚೀನಾ, ಪಾಕಿಸ್ತಾನ ಯುದ್ಧ ನೋಡಿದ್ದೇವೆ. ಅದಾದ ಬಳಿಕ ಯುಎಪಿಎ ಕಾಯಿದೆಯನ್ನು ಪರಿಚಯಿಸಲಾಯಿತು. ನಿರೀಕ್ಷಣಾ ಜಾಮೀನು ಇಲ್ಲದಿರುವುದು ಮತ್ತು 5 ವರ್ಷಗಳ ಕಠಿಣ ಶಿಕ್ಷೆ ವಿಧಿಸುವುದರಿಂದ ಯುಎಪಿಎ ಒಂದು ಕರಾಳ ಕಾಯಿದೆಯಾಗಿದೆ. ಈ ಕಾಯಿದೆ ಇನ್ನೂ ಪರಾಮರ್ಶೆಗೆ ಒಳಪಟ್ಟಿಲ್ಲ. ಇದನ್ನು ದೇಶದ್ರೋಹದ ಕಾನೂನಿನೊಟ್ಟಿಗೆ ನೋಡಬೇಕು.

  • 1950ರಲ್ಲಿ ನೆಹರೂ ಆಡಳಿವಿದ್ದಾಗ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕಾಗಿ ಆರ್‌ಎಸ್‌ಎಸ್ ಬೆಂಬಲಿತ ಆರ್ಗನೈಸರ್ ನಿಯತಕಾಲಿಕ ಪ್ರಕಟಣಾ ಪೂರ್ವ ಸೆನ್ಸಾರ್‌ಶಿಪ್‌ಗೆ ಒಳಗಾಗಬೇಕಾಯಿತು.

  • ದೇಶದ್ರೋಹದ ಮತ್ತು ಯುಎಪಿಎ ನಿಬಂಧನೆಗಳು ಪತ್ರಕರ್ತರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಇವುಗಳನ್ನು ಸುಪ್ರೀಂಕೋರ್ಟ್‌ ಪರೀಕ್ಷಿಸಿ ರದ್ದುಗೊಳಿಸಬೇಕು.