Supreme Court
Supreme Court  
ಸುದ್ದಿಗಳು

ಎಲ್ಲಾ ಪಿಐಎಲ್‌ಗಳನ್ನು ನಾವೇ ತೆಗೆದುಕೊಳ್ಳುವುದಾದರೆ ಸರ್ಕಾರವನ್ನು ಆರಿಸಿದ್ದೇಕೆ? ಕುಟುಕಿದ ಸುಪ್ರೀಂ ಕೋರ್ಟ್

Bar & Bench

ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಾರ್ವಜನಿಕ ಹಿತಾಸಕ್ತಿ ದಾವೆಗಳ (ಪಿಐಎಲ್) ಅರ್ಜಿಗಳನ್ನು ಪುರಸ್ಕರಿಸುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.

ಚುನಾಯಿತ ಸರ್ಕಾರಕ್ಕೆ ಇಂತಹ ಹಲವು ವಿಷಯಗಳನ್ನು ಪರಿಶೀಲಿಸಲು ಸೂಕ್ತ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ನೇತೃತ್ವದ ಪೀಠ ಹೇಳಿದೆ. ಪಶ್ಚಿಮ ಬಂಗಾಳದಿಂದ ಅಕ್ರಮವಾಗಿ ನುಸುಳಿದ ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗರನ್ನು ವರ್ಷದೊಳಗೆ ಪತ್ತೆ ಹಚ್ಚಿ, ಬಂಧಿಸಿ ಹಾಗೂ ಗಡಿಪಾರು ಮಾಡುವ ಕುರಿತಾದ ಪ್ರಕರಣವನ್ನು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಪ್ರಸ್ತಾಪಿಸಿದರು. ನಂತರ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಅಕ್ರಮ ವಲಸಿಗರು ಕೋಟಿಗಟ್ಟಲೆ ಉದ್ಯೋಗಗಳನ್ನು ಕಸಿದುಕೊಂಡಿದ್ದು ಇದರಿಂದ ಜೀವನೋಪಾಯದ ಹಕ್ಕಿಗೆ ಅಡ್ಡಿ ಉಂಟಾಗುತ್ತಿದೆ ಎಂದು ಅಶ್ವಿನಿ ಕುಮಾರ್‌ ತಿಳಿಸಿದಾಗ ನ್ಯಾ. ರಮಣ "ಇವು ರಾಜಕೀಯ ವಿಷಯಗಳು. ದಯವಿಟ್ಟು ಈ ಕುರಿತು ಸರ್ಕಾರದೊಂದಿಗೆ ಚರ್ಚಿಸಿ. ನಿಮ್ಮ ಎಲ್ಲಾ ಪಿಐಎಲ್‌ಗಳನ್ನು ನಾವು ತೆಗೆದುಕೊಳ್ಳುವುದಾದರೆ, ಸರ್ಕಾರವನ್ನು ಏಕೆ ಆರಿಸಿಲಾಗಿದೆ? ರಾಜ್ಯಸಭೆ ಮತ್ತು ಲೋಕಸಭೆಯಂತಹ ಸದನಗಳು ಇರುವುದು ಏಕೆ?" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶೀಯರು ಪಶ್ಚಿಮ ಬಂಗಾಳಕ್ಕೆ ನುಸುಳಲು ಸಹಾಯ ಮಾಡುವ ಸರ್ಕಾರಿ ನೌಕರರು, ಪೊಲೀಸ್ ಸಿಬ್ಬಂದಿ ಮತ್ತು ಭದ್ರತಾ ಪಡೆಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿದಾರರು, ವಕೀಲ ಅಶ್ವಿನಿಕುಮಾರ್‌ ಉಪಾಧ್ಯಾಯ ಮತ್ತು ಅಶ್ವಿನಿ ಕುಮಾರ್‌ ದುಬೆ ಅವರ ಮೂಲಕ ಅರ್ಜಿ ಸಲ್ಲಿಸಿದ್ದರು.