<div class="paragraphs"><p>Haridwar Dharam Sansad, Supreme Court</p></div>

Haridwar Dharam Sansad, Supreme Court

 
ಸುದ್ದಿಗಳು

ಧರ್ಮ ಸಂಸದ್ ದ್ವೇಷ ಭಾಷಣ: ಎಸ್ಐಟಿ ತನಿಖೆ ಕೋರಿ ಸುಪ್ರೀಂ ಮೊರೆ ಹೋದ ಭಾರತ ಪಾಕ್ ಸಮರದಲ್ಲಿ ಪಾಲ್ಗೊಂಡಿದ್ದ ಸೇನಾನಿಗಳು

Bar & Bench

ಹರಿದ್ವಾರ ಮತ್ತು ದೆಹಲಿ ಧರ್ಮ ಸಂಸದ್‌ನಲ್ಲಿ ಮಾಡಿದ್ದಾರೆನ್ನಲಾದ ದ್ವೇಷ ಭಾಷಣಗಳ ತನಿಖೆಗೆ ನೂತನ ವಿಶೇಷ ತನಿಖಾ ತಂಡ (ಎಸ್ ಐಟಿ) ನೇಮಿಸಲು ನಿರ್ದೇಶಿಸಬೇಕು ಎಂದು ಕೋರಿ ಭಾರತೀಯ ಸೇನೆಯ ಮೂವರು ನಿವೃತ್ತ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ [ಮೇಜರ್ ಜನರಲ್ ಎಸ್ ಜಿ ಒಂಬತ್ಕೆರೆ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಕಳೆದ ವರ್ಷ ಡಿಸೆಂಬರ್ 17 ಮತ್ತು 19 ರ ನಡುವೆ ಹರಿದ್ವಾರ ಮತ್ತು ದೆಹಲಿಯಲ್ಲಿ ಆಯೋಜಿಸಲಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾಡಿದ ದ್ವೇಷ ಭಾಷಣಗಳ ವಿರುದ್ಧ ತನಿಖೆ ನಡೆಸುವಂತೆ ಸಂವಿಧಾನದ 32 ರ ಅಡಿಯಲ್ಲಿ ಅರ್ಜಿದಾರರಾದ ಮೇಜರ್ ಜನರಲ್ ಎಸ್ ಜಿ ವೊಂಬಟ್ಕೆರೆ, ಕರ್ನಲ್ ಪಿ ಕೆ ನಾಯರ್ ಮತ್ತು ಮೇಜರ್ ಪ್ರಿಯದರ್ಶಿ ಚೌಧರಿ ಅವರು ಕೋರಿದ್ದಾರೆ.

ಈ ಮೂವರೂ ಯೋಧರು ಪಾಕಿಸ್ತಾನ- ಭಾರತ, ಬಾಂಗ್ಲಾ- ಭಾರತದ ನಡುವಿನ ಸಮರ ಹಾಗೂ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅನುಭವ ಹೊಂದಿದವರು. ಅದರಲ್ಲಿಯೂ ಮೇಜರ್‌ ಜನರಲ್‌ ಒಂಬತ್ಕೆರೆ ಅವರು ಕರ್ನಾಟಕ ಮೂಲದವರು.

ಅಲ್ಪಸಂಖ್ಯಾತರ ವಿರುದ್ಧ ಶಸ್ತ್ರಾಸ್ತ್ರ ಪ್ರಯೋಗಿಸುವಂತೆ ಪೊಲೀಸರು ಮತ್ತು ಸೇನೆಗೆ ಧರ್ಮ ಸಂಸದ್‌ನ ಭಾಷಣವೊಂದು ಕರೆ ನೀಡುತ್ತದೆ. ಇಂತಹ ಘಟನೆಗಳು ಅವ್ಯಾಹತವಾಗಿ ನಡೆದರೆ ವಿವಿಧ ಧರ್ಮಗಳಿಂದ ಬಂದಿರುವ ಸೈನಿಕರ ನೈತಿಕ ಸ್ಥೈರ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ಇದು ಅವರ ಸಮರ ದಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದು ಸಂವಿಧಾನದ 19ನೇ ವಿಧಿಯ ಉಲ್ಲಂಘನೆ ಕೂಡ. ಈ ಭಾಷಣಗಳು ದೇಶದ ಜಾತ್ಯತೀತ ವ್ಯವಸ್ಥೆಗೆ ಧಕ್ಕೆ ತರಲಿದ್ದು ಕಾನೂನು ಸುವ್ಯವಸ್ಥೆ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತವೆ. ಇಂತಹ ದ್ವೇಷದ ಭಾಷಣಗಳು ನಮ್ಮ ಸಶಸ್ತ್ರ ಪಡೆಗಳ ಯುದ್ಧದ ದಕ್ಷತೆಯ ಮೇಲೆ ಪರಿಣಾಮ ಬೀರಿ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಬಹುದು ಎಂದು ವಕೀಲ ಸೆಂಥಿಲ್ ಜಗದೀಶನ್‌ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ತಿಳಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ದ್ವೇಷ ಭಾಷಣದ ಘಟನೆಯ ಬಗ್ಗೆ ಸ್ವತಂತ್ರ ತನಿಖೆಗೆ ಕೋರಿ ಪಾಟ್ನಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಅವರು ಸಲ್ಲಿಸಿದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಈಗಾಗಲೇ ಕೇಂದ್ರ ಮತ್ತು ಉತ್ತರಾಖಂಡ ಸರ್ಕಾರಗಳಿಗೆ ನೋಟಿಸ್ ನೀಡಿತ್ತು.