ಪ್ರತ್ಯೇಕತಾವಾದಿ ಸಿದ್ಧಾಂತಗಳನ್ನು ಪ್ರಚುರಪಡಿಸಿದ ಆರೋಪದ ಮೇಲೆ ಕಳೆದ ವರ್ಷ ಜುಲೈನಲ್ಲಿ ಜಮ್ಮು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯಿದೆ- 1978ರ ಅಡಿ ಮುಂಜಾಗ್ರತಾ ಕ್ರಮವಾಗಿ ವಕೀಲ ಮಿಯಾನ್ ಮುಜಾಫರ್ ಅವರನ್ನು ಬಂಧಿಸಿದ್ದ ಆದೇಶವನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ [ಮಿಯಾನ್ ಮುಜಾಫರ್ ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ಹಿರಿಯ ವಕೀಲರಾದ ತಮ್ಮ ಚಿಕ್ಕಪ್ಪ ಮಿಯಾನ್ ಅಬ್ದುಲ್ ಖಯೂಮ್ ಅವರ ಪ್ರತ್ಯೇಕತಾವಾದಿ ಸಿದ್ಧಾಂತಗಳಿಂದ ವಕೀಲ ಮಿಯಾನ್ ಪ್ರಭಾವಿತರಾಗಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು. ಬಂಧನ ಆದೇಶ ಅಸ್ಪಷ್ಟವಾಗಿದ್ದು ಕಪೋಲ ಕಲ್ಪಿತ ಎಂಬುದಾಗಿ ಜನವರಿ 3ರಂದು, ನ್ಯಾಯಮೂರ್ತಿ ಮೋಕ್ಷಾ ಖಜುರಿಯಾ ಕಜ್ಮಿ ಅವರಿದ್ದ ಪೀಠ ಹೇಳಿದೆ.
ಸರ್ಕಾರದ ಆರೋಪಗಳು ಅಸ್ಪಷ್ಟ ಎಂದಿರುವ ನ್ಯಾಯಾಲಯ ಪ್ರತ್ಯೇಕತಾವಾದಿ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಮುಜಾಫರ್ ಸೆಮಿನಾರ್ಗಳನ್ನು ಆಯೋಜಿಸಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ಈ ಸೆಮಿನಾರ್ಗಳನ್ನು ಯಾವಾಗ ನಡೆಸಲಾಯಿತು ಎಂಬುದನ್ನು ಉಲ್ಲೇಖಿಸಿಲ್ಲ ಎಂದಿದೆ.
ಮಿಯಾನ್ ಅವರು ವೃತ್ತಿಯಲ್ಲಿ ವಕೀಲ ಮತ್ತು ಖಯಾಮ್ ಅವರ ನಿಕಟ ಸಂಬಂಧಿ ಎಂಬ ಕ್ಷುಲ್ಲಕ ಆಧಾರದ ಮೇಲೆ ಬಂಧನ ಆದೇಶ ನೀಡಿದ್ದಾರೆ. ಬಂಧನ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಲು ಮಿಯಾನ್ ಕುಟುಂಬಕ್ಕೆ ಆರೋಪಗಳ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ ಎಂಬ ಮಿಯಾನ್ ಪರ ವಕೀಲರ ವಾದದಲ್ಲಿ ಹುರುಳಿದೆ ಎಂದು ತೀರ್ಮಾನಿಸಿದ ನ್ಯಾಯಾಲಯ ಬಂಧನ ಆದೇಶ ರದ್ದುಗೊಳಿಸಿತು.
ವಕೀಲ ಬಾಬರ್ ಖಾದ್ರಿ ಅವರನ್ನು 2020ರಲ್ಲಿ ಹತ್ಯೆಗೈದ ಪ್ರಕರಣದಲ್ಲಿ ಶ್ರೀನಗರದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಖಯೂಮ್ ಅವರ ಪಾತ್ರವಿದೆ ಎಂದು ಆರೋಪಿಸಿ ಅವರನ್ನು ಜೂನ್ 2024ರಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಅವರು ಜೈಲಿನಲ್ಲಿದ್ದಾರೆ.
ಅದಾದ ಕೆಲ ವಾರಗಳಲ್ಲಿ ಅಂದರೆ 13 ಜುಲೈ 2024ರ ಮಧ್ಯರಾತ್ರಿ ಅವರ ಸಂಬಂಧಿಯಾದ ಮಿಯಾನ್ ಅವರನ್ನು ಬಂಧಿಸಲಾಗಿತ್ತು. ಬಂಧನದ ಕಾರಣಗಳನ್ನು ಅವರ ಕುಟುಂಬಕ್ಕೆ ಪೊಲೀಸರು ಆಗ ತಿಳಿಸಿರಲಿಲ್ಲ. ನಂತರ ಮುಂಜಾಗ್ರತಾ ಕ್ರಮವಾಗಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿತ್ತು.