ಸುದ್ದಿಗಳು

ಅಪಘಾತದಲ್ಲಿ ಜಾರ್ಖಂಡ್ ನ್ಯಾಯಾಧೀಶರ ಅನುಮಾನಾಸ್ಪದ ಸಾವು: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ರಾಜ್ಯ ಹೈಕೋರ್ಟ್

Bar & Bench

ಅನೇಕ ಮಹತ್ವದ ಪ್ರಕರಣಗಳ ವಿಚಾರಣೆಯಲ್ಲಿ ತೊಡಗಿದ್ದ ಜಾರ್ಖಂಡ್‌ನ ಧನಾಬಾದ್‌ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉತ್ತಮ್‌ ಚಂದ್‌ ಅವರಿಗೆ ಬುಧವಾರ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ.

ಮೊದಲು ಇದನ್ನು ಅಪಘಾತ ಎಂದೇ ನಂಬಲಾಗಿತ್ತಾದರೂ ರಸ್ತೆಯ ಅಂಚಿನಲ್ಲಿ ಬೆಳಗಿನ ವಾಯುವಿಹಾರದಲ್ಲಿ ತೊಡಗಿದ್ದ ಅವರನ್ನು ಉದ್ದೇಶಪೂರ್ವಕವಾಗಿ ವಾಹನವೊಂದು ಡಿಕ್ಕಿ ಹೊಡೆದು ಬೀಳಿಸಿರುವುದು ಸಿಸಿಟಿವಿ ದೃಶ್ಯದಿಂದ ತಿಳಿದುಬಂದಿದ್ದು ತನಿಖೆ ನಡೆಸಲಾಗುತ್ತಿದೆ.

ಹೀರಾಪುರದಲ್ಲಿ ವಾಸವಿದ್ದ ಅವರ ಕಾಲೋನಿಯಿಂದ 500 ಮೀಟರ್‌ ದೂರದಲ್ಲಿ ಘಟನೆ ನಡೆದಿದೆ. ಧನಾಬಾದ್‌ನ ಸಿವಿಲ್‌ ನ್ಯಾಯಾಲಯದ ರಿಜಿಸ್ಟ್ರಾರ್‌ ಅರ್ಪಿತ್‌ ಶ್ರೀವಾಸ್ತವ ಅವರು ಈ ಸಂಬಂಧ ದೂರು ದಾಖಲಿಸಿದ್ದು ಧನಾಬಾದ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಜರಿಯಾ ಕ್ಷೇತ್ರದ ಶಾಸಕ ಸಂಜೀವ್ ಸಿಂಗ್ ಅವರ ಆಪ್ತ ಸಹಾಯಕ ರಂಜಯ್ ಸಿಂಗ್ ಕೊಲೆ ಪ್ರಕರಣವನ್ನು ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದರು ಎಂದು ʼಟೆಲಿಗ್ರಾಫ್ʼ ವರದಿ ಮಾಡಿದೆ. ಅಲ್ಲದೆ ಇತ್ತೀಚೆಗೆ ಅವರು ಉತ್ತರ ಪ್ರದೇಶದ ಪಾತಕಿ ಅಮನ್ ಸಿಂಗ್ ಅವರ ಗುಂಪಿಗೆ ಸೇರಿದ ಇಬ್ಬರು ಸದಸ್ಯರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ್ದರು.

ಅಪಘಾತದ ದೃಶ್ಯಾವಳಿ...

ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಜಾರ್ಖಂಡ್‌ ಹೈಕೋರ್ಟ್‌

ಇತ್ತ ಹತ್ಯೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿರುವ ಜಾರ್ಖಂಡ್‌ ಹೈಕೋರ್ಟ್‌ ಧನಾಬಾದ್‌ನ ವಿಶೇಷ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅವರು ಗುರುವಾರ ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಿರುವಂತೆ ಸೂಚಿಸಿದೆ.

ಮತ್ತೊಂದೆಡೆ ಜಾರ್ಖಂಡ್‌ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಸುಪ್ರೀಂಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ವಿಕಾಸ್‌ ಸಿಂಗ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ "ನಾನು ಜಾರ್ಖಂಡ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರೊಂದಿಗೆ ಮಾತನಾಡಿದ್ದೇನೆ. ಅವರು ಈ ಪ್ರಕರಣ ಕೈಗೆತ್ತಿಕೊಂಡಿದ್ದಾರೆ ಮತ್ತು ತನಿಖೆಗೆ ಸಂಬಂಧಿಸಿದಂತೆ ಎಲ್ಲಾ ಅಧಿಕಾರಿಗಳು ಹಾಜರಾಗುವಂತೆ ಸೂಚಿಸಿದ್ದಾರೆ. ಈ ಹಂತದಲ್ಲಿ ನಾವು ಭಾಗಿಯಾದರೆ ತನಿಖೆಗೆ ಅಡ್ಡಿಯಾಗುತ್ತದೆ" ಎಂದು ಹೇಳಿದರು.