ಸುದ್ದಿಗಳು

ಚಿನಾಬ್ ಕಣಿವೆಯಲ್ಲಿ ಪದೇ ಪದೇ ರಸ್ತೆ ಅಪಘಾತ: ಕಾರಣ ಪತ್ತೆಗೆ ಸಮಿತಿ ರಚಿಸುವಂತೆ ಕಾಶ್ಮೀರ ಹೈಕೋರ್ಟ್ ಆದೇಶ

Bar & Bench

ಚಿನಾಬ್‌ ನದಿ ಕಣಿವೆಯ ಬಟೋಟೆ-ದೋಡಾ-ಕಿಶ್ತ್ವಾರ್ ರಸ್ತೆಯಲ್ಲಿ  ಪದೇ ಪದೆ ನಡೆಯುತ್ತಿರುವ ರಸ್ತೆ ಅಪಾಘಾತಗಳಿಗೆ ಕಾರಣ ಪತ್ತೆಹಚ್ಚಲು ತಜ್ಞರ ಸಮಿತಿ ರಚಿಸುವಂತೆ ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್ ಇತ್ತೀಚೆಗೆ  ಕೇಂದ್ರಾಡಳಿತ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. [ಇಂಖಾಬ್‌ ಅಹ್ಮದ್‌ ಖಾಜಿ ಮತ್ತು ರಾಜ್ಯ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ತಿರುವು ಮತ್ತು ಪ್ರಪಾತಗಳಿರುವ ರಸ್ತೆಗಳುದ್ದಕ್ಕೂ ರೋಲಿಂಗ್‌ ತಡೆಗೋಡೆ ಅಥವಾ ಉಕ್ಕಿನ ಕಂಬಗಳನ್ನು ನಿರ್ಮಿಸಲು ಹಂಗಾಮಿ ಮುಖ್ಯ ನ್ಯಾಯಮೂರ್ತಿ ತಾಶಿ ರಬ್ಸ್ತಾನ್ ಮತ್ತು ನ್ಯಾಯಮೂರ್ತಿ ರಾಜೇಶ್ ಸೆಖ್ರಿ ಅವರಿದ್ದ  ವಿಭಾಗೀಯ ಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.

ಅಪಘಾತ ಮುಕ್ತ ರಸ್ತೆಯನ್ನಾಗಿ ಮಾಡುವುದಕ್ಕಾಗಿ ಕೈಗೊಳ್ಳಬೇಕಿರುವ ಕ್ರಮಗಳನ್ನು ಸೂಚಿಸಲು ತಜ್ಞರ ಸಮಿತಿಯೊಂದನ್ನು ರಚಿಸುವಂತೆಯೂ ಅದು ಸೂಚಿಸಿದೆ.

ಚಿನಾಬ್‌ ಕಣಿವೆಯ ಗುಡ್ಡಗಾಡು ಪ್ರದೇಶದಲ್ಲಿ ಹೆಚ್ಚುತ್ತಿರುವ  ರಸ್ತೆ ಅಪಘಾತಗಳ ಕುರಿತು ಸಾಮಾಜಿಕ ಕಾರ್ಯಕರ್ತ ಆಸಿಫ್ ಇಕ್ಬಾಲ್ ಭಟ್ ಅವರು  ಪತ್ರ ಬರೆದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇಂತಹ  ರಸ್ತೆ ಅಪಘಾತ  ತಡೆಗಟ್ಟಲು ಸರ್ಕಾರಿ ಸಂಸ್ಥೆಗಳು ಸಮರ್ಪಕ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿತ್ತು.

ಇತ್ತೀಚೆಗೆ  ನಡೆದ ರಸ್ತೆ ಅಪಘಾತದಲ್ಲಿ ದೋಡಾದ ಗದ್ದೂ ಪ್ರದೇಶದಲ್ಲಿ ಚಿನಾಬ್‌ ನದಿಗೆ ಕಾರೊಂದು ಉರುಳಿ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿರುವ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.

ಈ ಸಂಬಂಧ ಸರ್ಕಾರಕ್ಕೆ ನೋಟಿಸ್‌ ನೀಡಿದ ನ್ಯಾಯಾಲಯ ಪ್ರಕರಣದಲ್ಲಿ ಸಹಾಯ ಮಾಡಲು ವಕೀಲ ಎಸ್‌ ಎಸ್  ಅಹಮದ್ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿತು. ಜಮ್ಮು ಕಾಶ್ಮೀರದ ಮೊಘಲ್‌ ರಸ್ತೆಯಲ್ಲಿ ಇಂಥದ್ದೇ ಸಮಸ್ಯೆಗೆ ಸಂಬಂಧಿಸಿದ ಪಿಐಎಲ್‌ನವಲ್ಲಿ ವಕೀಲ ಅಹ್ಮದ್‌ ಅವರು ನ್ಯಾಯಾಲಯಕ್ಕೆ ಸಹಾಯ ಮಾಡುತ್ತಿದ್ದಾರೆ.

ಕ್ರಮ ಕೈಗೊಂಡ ಕುರಿತಾದ ವರದಿಯನ್ನು ಮುಂದಿನ ವಿಚಾರಣೆ ನಡೆಯಲಿರುವ ಜನವರಿ 02, 2023ರರೊಳಗೆ ಸಲ್ಲಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Intakhab_Ahmed_Qazi_Vs_State.pdf
Preview