Chief Justice of India DY Chandrachud
Chief Justice of India DY Chandrachud  
ಸುದ್ದಿಗಳು

ನ್ಯಾಯಾಧೀಶರು ಸಾಂವಿಧಾನಿಕ ನೈತಿಕತೆ ಅನುಸರಿಸುತ್ತಾರೆಯೇ ಹೊರತು ಜನಪ್ರಿಯ ನೈತಿಕತೆಯನ್ನಲ್ಲ: ಸಿಜೆಐ

Bar & Bench

ನ್ಯಾಯಾಧೀಶರು ಜನರಿಂದ ಆಯ್ಕೆಯಾಗದಿರುವುದು ನ್ಯಾಯಾಂಗದ ನ್ಯೂನತೆಯಲ್ಲ ಬದಲಾಗಿ ಅದು ಅದರ ಶಕ್ತಿ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಶನಿವಾರ ಹೇಳಿದ್ದಾರೆ.

ಶಾಸಕಾಂಗ ಅಥವಾ ಕಾರ್ಯಾಂಗವು ಜನತೆಗೆ ಉತ್ತರದಾಯಿಯಾಗಿರುವಂತೆ ನ್ಯಾಯಾಂಗವು ಪ್ರಕರಣಗಳನ್ನು ನಿರ್ಧರಿಸುವಾಗ ಜನತೆಗೆ ಉತ್ತರದಾಯಿಯಲ್ಲ ಎಂದು ಅವರು ತಿಳಿಸಿದರು.

ಹಿಂದೂಸ್ತಾನ್ ಟೈಮ್ಸ್ ನವದೆಹಲಿಯಲ್ಲಿ ಶನಿವಾರ ಆಯೋಜಿಸಿದ್ದ ನಾಯಕತ್ವ ಶೃಂಗಸಭೆ 2023 ರಲ್ಲಿ ಸಿಜೆಐ ಮಾತನಾಡಿದರು.

"ನಾವು ಸಕಾರಣವಾಗಿ ರಾಜ್ಯದ ಚುನಾಯಿತ ಅಂಗವಲ್ಲ. ಚುನಾಯಿತ ಅಂಗ (ಶಾಸಕಾಂಗ) ಮತ್ತು ಕಾರ್ಯಾಂಗವು ಜನಗರಿಗೆ ಉತ್ತರದಾಯಿಗಳಾಗಿವೆ. ಶಾಸಕಾಂಗವು ಸಂಸತ್ತಿಗೆ ಉತ್ತರದಾಯಿಯಾಗಿದ್ದು ಸಿಜೆಐ ಆಗಿ ನಾನು ಅದನ್ನು ಗೌರವಿಸುತ್ತೇನೆ. ಆದರೆ, ಇದೇ ವೇಳೆ ನ್ಯಾಯಾಧೀಶರ ಪಾತ್ರವನ್ನು ಗುರುತಿಸುವುದು ಅಷ್ಟೇ ಮುಖ್ಯ. ನಾವು ಚುನಾಯಿತರಾಗದಿರುವುದು ನಮ್ಮ  ನ್ಯೂನತೆಯಲ್ಲ ಆದರೆ ಅದುವೇ ನಮ್ಮ ಶಕ್ತಿಯಾಗಿದೆ" ಎಂದು ಸಿಜೆಐ ಹೇಳಿದರು.

ಪರಿಣಾಮ, ನ್ಯಾಯಾಧೀಶರು ಪ್ರಕರಣಗಳನ್ನು ನಿರ್ಧರಿಸುವಾಗ ಸಮಾಜ ತಮ್ಮ ತೀರ್ಪುಗಳನ್ನು ಹೇಗೆ ಗ್ರಹಿಸಬೇಕು ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ನ್ಯಾಯಾಧೀಶರು ಜನಪ್ರಿಯ ನೈತಿಕತೆಯ ಬದಲು ಸಾಂವಿಧಾನಿಕ ನೈತಿಕತೆಯನ್ನು ಅನುಸರಿಸುತ್ತಾರೆ ಎಂದು ಅವರು ಹೇಳಿದರು.

"ನ್ಯಾಯಾಲಯಗಳು ಭ್ರಾತೃತ್ವ, ಸ್ವಾತಂತ್ರ್ಯ, ಸಮಾನತೆಯಂತಹ ವಿಶಾಲ ಮೌಲ್ಯಗಳನ್ನು ಪ್ರತಿಪಾದಿಸಬೇಕು - ನಾವು ಕಾನೂನು ವ್ಯವಸ್ಥೆಯ ಮೇಲೆ ಸ್ಥಿರಗೊಳ್ಳುವಂತಹ ಪ್ರಭಾವ ಬೀರುತ್ತೇವೆ. ಕೆಲವು ಸಮಾಜಗಳಲ್ಲಿ ಬಂದೂಕಿನ ಅಧಿಕಾರ ಚಾಲ್ತಿಯಲ್ಲಿದೆ. ಹೊಸ ಸಂಯೋಜನೆ ಮತ್ತು ಬದಲಾವಣೆ ತರುವಂತಹ ದೃಷ್ಟಿಕೋನ ಆಲೋಚನೆಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿ ನ್ಯಾಯಾಲಯಗಳು ಇವೆ ಎಂದು ಜನ ಭಾವಿಸುತ್ತಾರೆ. ನ್ಯಾಯಾಧೀಶರು ಸಾಂವಿಧಾನಿಕ ನೈತಿಕತೆಯನ್ನು ಅನುಸರಿಸುತ್ತಾರೆಯೇ ವಿನಾ ಜನಪ್ರಿಯ ನೈತಿಕತೆಯನ್ನಲ್ಲ" ಎಂದು ಅವರು ಹೇಳಿದರು.

ತಮಗೆ ಸರಿದೋರಲಿಲ್ಲ ಎಂಬ ಕಾರಣಕ್ಕೆ ಶಾಸಕಾಂಗ ಸುಪ್ರೀಂ ಕೋರ್ಟ್‌ ತೀರ್ಪನ್ನು ತೆಗೆದು ಹಾಕಲು ಬರುವುದಿಲ್ಲ. ಬದಲಿಗೆ, ಕಾನೂನು ರೂಪಿಸುವ ಮೂಲಕ ಮಾತ್ರ ದೋಷವನ್ನು ಗುಣಪಡಿಸಬಹುದು ಎಂದರು.  

ನ್ಯಾಯಮೂರ್ತಿಗಳ ನಿವೃತ್ತಿಯ ವಯಸ್ಸನ್ನು ಪ್ರಸ್ತಾಪಿಸಿದ ಅವರು ಹಿಂದಿನ ತಪ್ಪುಗಳನ್ನು ಎತ್ತಿ ತೋರಿಸುವುದಕ್ಕಾಗಿ ಮತ್ತು ಸಾಮಾಜಿಕ, ಕಾನೂನಾತ್ಮಕ ಚೌಕಟ್ಟನ್ನು ವಿಸ್ತರಿಸಲು ಮುಂದಿನ ಪೀಳಿಗೆಗೆ ಅಧಿಕಾರ ಹಸ್ತಾಂತರಿಸುವುದು ಬಹುಮುಖ್ಯ ಎಂದು ಅಭಿಪ್ರಾಯಪಟ್ಟರು.