Justice M Nagaprasanna 
ಸುದ್ದಿಗಳು

180 ಅರ್ಜಿಗಳ ಸಂಬಂಧ ಮಧ್ಯಂತರ ಆದೇಶ, 87 ಅರ್ಜಿ ಇತ್ಯರ್ಥ ಸೇರಿ 600 ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ

Bar & Bench

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಮಂಗಳವಾರ ಒಂದೇ ದಿನದ ಕಲಾಪದಲ್ಲಿ ಬರೋಬ್ಬರಿ 600 ಪ್ರಕರಣ ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು ಪ್ರಧಾನ ಪೀಠದಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಕೋರ್ಟ್‌ಹಾಲ್‌ನ ಕಾಸ್‌ಲಿಸ್ಟ್‌ನಲ್ಲಿ (ವ್ಯಾಜ್ಯಗಳ ಪಟ್ಟಿ) 600 ಅರ್ಜಿಗಳನ್ನು ವಿಚಾರಣೆಗೆ ನಿಗದಿಪಪಡಿಸಲಾಗಿತ್ತು. ಅಷ್ಟೂ ಅರ್ಜಿಗಳ ವಿಚಾರಣೆಯನ್ನು ಸಂಜೆ 4 ಗಂಟೆಗೆ ಪೂರ್ಣಗೊಳಿಸಿ, ಕಲಾಪ ಮುಗಿಸಿದರು.

ನಿಗದಿಯಾಗಿದ್ದ 600 ಅರ್ಜಿಗಳ ಪೈಕಿ 180 ಅರ್ಜಿಗಳ ಸಂಬಂಧ ಮಧ್ಯಂತರ ಆದೇಶ ಮಾಡಿದ್ದಾರೆ. 87 ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ, ವಿಲೇವಾರಿ ಮಾಡಿದ್ದಾರೆ.

ನ್ಯಾ.ನಾಗಪ್ರಸನ್ನ ಅವರು ಇದೇ 2024ರ ಮಾರ್ಚ್‌ 22ರಂದು ಒಂದೇ ದಿನದ ಕಲಾಪದದಲ್ಲಿ 801 ಅರ್ಜಿಗಳನ್ನು ವಿಚಾರಣೆ ನಡೆಸಿದ್ದರು. ಅವುಗಳ ಪೈಕಿ 36 ಅರ್ಜಿಗಳ ಸಂಬಂಧ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ್ದರು. ಉಳಿದಂತೆ ಸುಮಾರು 572 ಅರ್ಜಿಗಳನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸಿದ್ದರು. ಇತ್ಯರ್ಥವಾದ ಪ್ರಕರಣಗಳಲ್ಲಿ 544 ಅರ್ಜಿಗಳು ಬೆಂಗಳೂರು ಜಲಮಂಡಳಿಗೆ ಸಂಬಂಧಿಸಿದ್ದಾಗಿದ್ದವು.

ಈ ಹಿಂದೆ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರು, ಒಂದೇ ದಿನದ ಕಲಾಪದಲ್ಲಿ ಸುಮಾರು 750 ಅರ್ಜಿಗಳನ್ನು ವಿಲೇವಾರಿ ಮಾಡಿದ ಉದಾಹರಣೆಯಿದೆ. ಹೀಗೆ ನೂರಾರು ಅರ್ಜಿಗಳನ್ನು ಒಂದೇ ದಿನದ ಕಲಾಪದಲ್ಲಿ ವಿಲೇವಾರಿ ಮಾಡುವುದು ಅತ್ಯಂತ ಅಪರೂಪದ ಸಂಗತಿಯಾಗಿದೆ.