Justice Shantanagoudar and Supreme Court
Justice Shantanagoudar and Supreme Court  
ಸುದ್ದಿಗಳು

ಸೇವೆಯಲ್ಲಿದ್ದಾಗಲೇ ನಿಧನರಾದ ಸುಪ್ರೀಂಕೋರ್ಟ್‌ನ 13ನೇ ನ್ಯಾಯಮೂರ್ತಿ ಶಾಂತನಗೌಡರ್

Bar & Bench

ಇದೇ ಏಪ್ರಿಲ್‌ 24ರಂದು ನಿಧನರಾದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ, ಕನ್ನಡಿಗ ಮೋಹನ್‌ ಎಂ ಶಾಂತನಗೌಡರ್‌ ಅವರು ಸೇವೆಯಲ್ಲಿದ್ದಾಗಲೇ ಇಹಲೋಕ ತ್ಯಜಿಸಿದ ಸುಪ್ರೀಂ ಕೋರ್ಟ್‌ನ ಹದಿಮೂರನೇ ನ್ಯಾಯಮೂರ್ತಿಯಾಗಿದ್ದಾರೆ. 2000ನೇ ಇಸವಿಯಲ್ಲಿ ನ್ಯಾ. ಎಂ ಶ್ರೀನಿವಾಸನ್‌ ಅಧಿಕಾರದಲ್ಲಿದ್ದಾಗಲೇ ಮೃತಪಟ್ಟಿದ್ದರು. ಅದಾದ 21 ವರ್ಷಗಳ ಬಳಿಕ ನ್ಯಾ. ಶಾಂತನಗೌಡರ್‌ ಅವರ ಸಾವು ಸಂಭವಿಸಿದೆ.

ಸೇವೆಯಲ್ಲಿದ್ದಾಗಲೇ ಮೃತಪಟ್ಟ ಸುಪ್ರೀಂಕೋರ್ಟ್‌ನ ಮೊದಲ ಮುಖ್ಯ ನ್ಯಾಯಮೂರ್ತಿ ಹೆಚ್‌ ಜೆ ಕನಿಯಾ. 1890 ರಲ್ಲಿ ಜನಿಸಿದ ನ್ಯಾ, ಕನಿಯಾ ನಿವೃತ್ತರಾಗುವ ನಾಲ್ಕು ವರ್ಷಗಳ ಮೊದಲೇ 1951ರಲ್ಲಿ ನಿಧನರಾದರು. ನ್ಯಾಯಮೂರ್ತಿ ಎಂ ಪತಂಜಲಿ ಶಾಸ್ತ್ರಿ ಅವರ ನಂತರ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದರು.

ಅಧಿಕಾರದಲ್ಲಿದ್ದಾಗ ಸಾವನ್ನೊಪ್ಪಿದ ಎರಡನೇ ನ್ಯಾಯಮೂರ್ತಿ ಗುಲಾಮ್ ಹಸನ್. 1952 ರಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ಅವರು 1954 ರಲ್ಲಿ ಮರಣ ಹೊಂದಿದರು. ಮೂರನೇ ನ್ಯಾಯಮೂರ್ತಿ ಪಿ ಗೋವಿಂದ ಮೆನನ್‌. 1956 ರಲ್ಲಿ ಸುಪ್ರೀಂಕೋರ್ಟ್‌ಗೆ ನೇಮಕವಾದ ಅವರು ಕೇವಲ ಒಂದು ವರ್ಷದ ಅವಧಿಯಲ್ಲೇ ನಿವೃತ್ತರಾಗಲು ಇನ್ನೂ ನಾಲ್ಕು ವರ್ಷಗಳ ಸಮಯ ಇದ್ದಂತೆಯೇ ಅಸುನೀಗಿದರು.

ಸೇವೆಯಲ್ಲಿದ್ದಾಗ ಇನ್ನಿಲ್ಲವಾದ ನಾಲ್ಕನೇ ನ್ಯಾಯಮೂರ್ತಿ ಪಿ ಸತ್ಯನಾರಾಯಣ. ಅವರು ಕೂಡ ನ್ಯಾ. ಮೆನನ್‌ ಅವರಂತೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ಒಂದು ವರ್ಷದ ಅವಧಿಯಲ್ಲಿಯೇ ಮೃತಪಟ್ಟರು. ಆಗ ಅವರ ಸೇವಾವಧಿ ಇನ್ನೂ ಏಳು ವರ್ಷ ಬಾಕಿ ಇತ್ತು.

ಇನ್ನು ಅಧಿಕಾರ ವಹಿಸಿಕೊಂಡ ನಾಲ್ಕು ತಿಂಗಳಿನಲ್ಲಿಯೇ ಸಾವನ್ನಪ್ಪಿದವರು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಸುಬೀಮಲ್ ಚಂದ್ರ ರಾಯ್. 1971ರ ಜುಲೈನಲ್ಲಿ ಅಧಿಕಾರ ವಹಿಸಿಕೊಂಡ ಅವರು ಅದೇ ವರ್ಷ ನವೆಂಬರ್‌ನಲ್ಲಿ ಕೊನೆಯುಸಿರೆಳೆದರು. ಅವರಿಗೆ ಇನ್ನೂ ಆರು ವರ್ಷಗಳ ಕಾಲ ಸೇವೆ ಸಲ್ಲಿಸುವ ಅವಕಾಶ ಇತ್ತು.

ನ್ಯಾಯಮೂರ್ತಿಗಳಾದ ಎ ಕೆ ಮುಖರ್ಜಿಯಾ, ಎಸ್‌ ಎನ್‌ ದ್ವಿವೇದಿ, ಎಸ್‌ ಮುರ್ತಜಾ ಫಜಲ್‌ ಅಲಿ, ಸವ್ಯಚಾಚಿ ಮುಖರ್ಜಿ, ಆರ್‌ ಸಿ ಪಟ್ನಾಯಕ್‌, ಯೋಗೇಶ್ವರ್‌ ದಯಾಳ್‌, ಎಂ ಶ್ರೀನಿವಾಸ್‌ ಅವರುಗಳು ಕೂಡ ಸುಪ್ರೀಂಕೋರ್ಟ್‌ನಲ್ಲಿ ಸೇವಾ ನಿರತರಾಗಿದ್ದರಾಗಲೇ ದಿವಂಗತರಾದರು.