ಸುದ್ದಿಗಳು

ವಕೀಲರು ಸಂವಿಧಾನ ಎತ್ತಿ ಹಿಡಿಯಬೇಕು, ಅವರ ಇಂದಿನ ಕಾರ್ಯದಿಂದ ನಾಳಿನ ಸಮಾಜದ ಮೇಲೆ ಪರಿಣಾಮ: ನ್ಯಾ. ಸಂಜಯ್ ಕಿಶನ್ ಕೌಲ್

Bar & Bench

ವರ್ತಮಾನದಲ್ಲಿ ವಕೀಲರು ಮಾಡುವ ಕಾರ್ಯಗಳು ಭವಿಷ್ಯದಲ್ಲಿ ಸಮಾಜದ ಮೇಲೆ ಶಾಶ್ವತ ಪರಿಣಾಮ ಬೀರುತ್ತವೆ ಎಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್  ಅವರು ಸಂವಿಧಾನ ಎತ್ತಿ ಹಿಡಿಯುವಂತೆ ವಕೀಲರಿಗೆ ಕರೆ ನೀಡಿದರು.

ಇಟಾನಗರದ ಡಬ್ಲ್ಯೂಎಐಐ ಇಂಟರ್‌ನ್ಯಾಶನಲ್‌ ಭವನದಲ್ಲಿ ವಕೀಲರ ಸಂಸ್ಥೆ ತಿವಾರಿ ಅಂಡ್‌ ಅಸೋಸಿಯೇಟ್ಸ್‌ ಸಹಯೋಗದೊಂದಿಗೆ ಗುವಾಹಟಿ ಹೈಕೋರ್ಟ್ ಇಟಾನಗರ ಖಾಯಂ ಪೀಠದ ವಕೀಲರ ಸಂಘ​​(GHCIPBBA) ಶುಕ್ರವಾರ ಆಯೋಜಿಸಿದ್ದ ಪ್ರಥಮ ವಾರ್ಷಿಕ ಉಪನ್ಯಾಸ ಸರಣಿಯಲ್ಲಿ ನ್ಯಾ. ಕೌಲ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ವಹಿಸಿದ್ದರು.

ವಕೀಲ ವೃತ್ತಿ ಎಂಬುದು ಸ್ವಯಂ ಅಥವಾ ವೈಯಕ್ತಿಕ ಸೇವೆಯಲ್ಲ, ಅದು ಜನರ ಅಗತ್ಯಗಳನ್ನು ಪೂರೈಸುವ ಸಾರ್ವಜನಿಕ ಸೇವೆಯಾಗಿದ್ದು ವಕೀಲರು ಸಮಾಜದೊಂದಿಗೆ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಪರಿವರ್ತನೆಯ ಪಾತ್ರ ವಹಿಸಬೇಕು ಎಂದರು.

ಸಮಾಜಕ್ಕೆ ಉಪಕಾರಿಯಾಗಲು, ಅಗತ್ಯವಿರುವವರಿಗೆ ಸಹಾಯ ಮಾಡಲು, ತಮ್ಮ ಕಕ್ಷಿದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಹಾಗೂ ಮುಖ್ಯವಾಗಿ ಭಾರತದ ಸಂವಿಧಾನವನ್ನು ಎತ್ತಿಹಿಡಿಯಲು ಎಲ್ಲಾ ವಕೀಲರು ತಮ್ಮ ಸ್ಥಾನಗಳನ್ನು ಬಳಸಿಕೊಳ್ಳುತ್ತಾರೆ ಎಂದು ನಾನು ನಂಬುವೆ.  ಏಕೆಂದರೆ ಪ್ರಸ್ತುತದಲ್ಲಿ ವಕೀಲರು ಕೈಗೊಳ್ಳುವ ಕ್ರಮಗಳು ನಮ್ಮ ಸಮಾಜದ ಮೇಲೆ ಪರಿಣಾಮ ಬೀರುತ್ತವೆ ಎಂದು ನಾನು ಭಾವಿಸುವೆ ಎಂಬುದಾಗಿ ಅವರು ಹೇಳಿದರು.

ವಿವಿಧ ರಾಜ್ಯಗಳಲ್ಲಿನ ವೈವಿಧ್ಯಮಯ ಸಮಸ್ಯೆಗಳು, ವೈಯಕ್ತಿಕ ಹಕ್ಕುಗಳು ಹಾಗೂ ಕಾನೂನು ನೆರವಿನ ಬಗ್ಗೆ ಸಾಮಾನ್ಯವಾದ ಅರಿವಿನ ಕೊರತೆಯಿಂದಾಗಿ ಭಾರತದಲ್ಲಿ ವಕೀಲ ವೃತ್ತಿಯ ಸ್ವರೂಪ ತುಂಬಾ ವಿಸ್ತಾರವಾದುದಾಗಿದೆ ಎಂದು ವಿವರಿಸಿದರು.

ಸಂಬಂಧಗಳನ್ನು ರಕ್ಷಿಸಲು ಮಧ್ಯಸ್ಥಿಕೆ ಸಹಾಯ ಮಾಡುತ್ತದೆ. ದಾವೆ ಹೂಡುವುದು, ಸಮಯ ಹಿಡಿಯುವ ಮತ್ತು ದುಬಾರಿ ವ್ಯವಹಾರವಾಗಿರುವುದರಿಂದ ಮಧ್ಯಸ್ಥಿಕೆ, ಮಾತುಕತೆ ಹಾಗೂ ರಾಜಿ ಸಂಧಾನದಂತಹ ಪರ್ಯಾಯ ವ್ಯಾಜ್ಯ ಪರಿಹಾರ ವಿಧಾನ ಅಳವಡಿಸಿಕೊಳ್ಳಲು ವಕೀಲರು ಕಕ್ಷೀದಾರರಿಗೆ ಸಲಹೆ ನೀಡಬೇಕು ಎಂದು ಅವರು ಸಲಹೆ ನೀಡಿದರು.