Justice Surya Kant in Ankara  By Special Arrangement
ಸುದ್ದಿಗಳು

ಭಾರತ ಮತ್ತು ಟರ್ಕಿ ಮಧ್ಯಸ್ಥಿಕೆ ಕೇಂದ್ರವಾಗಬೇಕು: ನ್ಯಾಯಮೂರ್ತಿ ಸೂರ್ಯಕಾಂತ್

Bar & Bench

ಪರ್ಯಾಯ ವ್ಯಾಜ್ಯ ಪರಿಹಾರ (ಎಡಿಆರ್‌) ಕ್ಷೇತ್ರದ ಹೊಸ ಜಾಗತಿಕ ಕೇಂದ್ರಗಳಾಗಿ ಭಾರತ ಮತ್ತು ಟರ್ಕಿ ವಿಕಸನಗೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಕರೆ ನೀಡಿದ್ದಾರೆ.

ಮಧ್ಯಸ್ಥಿಕೆ ಮತ್ತು ರಾಜಿ ಸಂಧಾನ ಆನ್ವಯಿಕತೆ ಕುರಿತು ಉಭಯ ದೇಶಗಳು ಜೂನ್ 1ರಂದು ಟರ್ಕಿಯ ಅಂಕಾರದಲ್ಲಿ ಆಯೋಜಿಸಿದ್ದ ಒಂದು ದಿನದ ಸಮ್ಮೇಳನದಲ್ಲಿ ನ್ಯಾಯಮೂರ್ತಿ ಕಾಂತ್ ಮಾತನಾಡಿದರು.

ಗಂಡ ಹೆಂಡಿರ ನಡುವಿನ ಜಗಳದ ವಿಚಾರದಲ್ಲಿ ಟರ್ಕಿಯ ಜಾನಪದ ಪಾತ್ರ ನಸ್ರಿದ್ದೀನ್‌ ಹೊಡ್ಜಾ ತೋರಿದ್ದ ವಿವೇಕಯುತ ಜಾಣ್ಮೆಯನ್ನು ಪ್ರಸ್ತಾಪಿಸಿದ ಅವರು ವ್ಯಾಜ್ಯದಲ್ಲಿ ಎಲ್ಲಾ ಪಕ್ಷಗಳಿಗೆ ಸಹಾನುಭೂತಿ ತೋರುವುದು ಮಹತ್ವದ್ದು ಎಂದರು.

ಭಾರತ ಮತ್ತು ಟರ್ಕಿಗಳು ವಿದೇಶಿ ಮಧ್ಯಸ್ಥಿಕೆ ತೀರ್ಪುಗಳನ್ನು ಜಾರಿಗೊಳಿಸುವ ಬದ್ಧತೆ ಹೊಂದಿದ್ದು, ಉತ್ತಮವಾದ ವಾಣಿಜ್ಯ ವಾತಾವರಣ ಹಾಗೂ ಮಿತವ್ಯಯದ ಪರ್ಯಾಯ ಪರಿಹಾರ ವಿಧಾನ ಹೊಂದಿವೆ ಎಂದ ನ್ಯಾ. ಸೂರ್ಯಕಾಂತ್‌.

ಎರಡೂ ದೇಶಗಳ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಬಂಧಗಳನ್ನು ನೆನೆದ ಅವರು ಒಟ್ಟೋಮನ್ ಸುಲ್ತಾನರು ಮತ್ತು ಭಾರತೀಯ ಆಡಳಿತಗಾರರ ನಡುವಿನ ಆರಂಭಿಕ ರಾಜತಾಂತ್ರಿಕ ಕಾರ್ಯಗಳಿಂದ ಹಿಡಿದು ಭಾಷೆ, ಪಾಕಪದ್ಧತಿ ಮತ್ತು ಸೂಫಿವಾದದಂತಹ ತಾತ್ವಿಕ ಸಂಪ್ರದಾಯಗಳಲ್ಲಿ ಪ್ರತಿಫಲಿಸುವ ಸಾಂಸ್ಕೃತಿಕ ವಿನಿಮಯದವರೆಗೆ ಗಮನಾರ್ಹ ಪರಂಪರೆಯ ಕುರಿತು ಎರಡೂ ದೇಶಗಳು ಹೆಮ್ಮೆಪಡುತ್ತವೆ. ಭಾಷಾ ಸಂಬಂಧ ಈ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ಹಿಂದಿ ಮತ್ತು ಟರ್ಕಿ ಭಾಷೆ ನಡುವೆ 9,000 ಕ್ಕೂ ಹೆಚ್ಚು ಸಾಮಾನ್ಯ ಬಳಕೆಯ ಪದಗಳಿವೆ. ಇದು ಎರಡೂ ದೇಶಗಳು ಸಾಂಸ್ಕೃತಿಕವಾಗಿ ಆಳದಲ್ಲಿ ಬೆಸೆದುಕೊಂಡಿರುವುದರ ದ್ಯೋತಕ” ಎಂದು ಅವರು ನುಡಿದರು.

ಭಾರತ ಮತ್ತು ಟರ್ಕಿ ಎಡಿಆರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ. ಎರಡೂ ದೇಶಗಳು ದೊಡ್ಡ ಬದಲಾವಣೆಗೆ ಸಿದ್ಧವಾಗಿವೆ. ಭಾರತ ಮತ್ತು ಟರ್ಕಿ ನಡುವೆ ಇರುವ ಸಾಮರ್ಥ್ಯ ಬರುವ ದಶಕಗಳಲ್ಲಿ ಜಾಗತಿಕ ಎಡಿಆರ್ ರಂಗವನ್ನು ಮರುರೂಪಿಸುವ ಭರವಸೆ ನೀಡುವುದಲ್ಲದೆ ವಿಶ್ವಾದ್ಯಂತ ಅಂತಾರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆ ಮತ್ತು ಮಧ್ಯಸ್ಥಿಕೆಯ ಪರಿಕಲ್ಪನೆಯನ್ನು ಮರು ವ್ಯಾಖ್ಯಾನಿಸುತ್ತವೆ  ಎಂದು ಅವರು ಹೇಳಿದರು.