SC Justices Chelameswar, Gogoi, Lokur and Joseph held a press conference against CJI Dipak Misra
SC Justices Chelameswar, Gogoi, Lokur and Joseph held a press conference against CJI Dipak Misra 
ಸುದ್ದಿಗಳು

ಐದು ವರ್ಷಗಳ ಹಿಂದಿನ ಚಾರಿತ್ರಿಕ ಸುದ್ದಿಗೋಷ್ಠಿ ಬಗ್ಗೆ ನ್ಯಾಯಮೂರ್ತಿಗಳಾದ ಚಲಮೇಶ್ವರ್, ಜೋಸೆಫ್ ಹೇಳಿದ್ದೇನು?

Bar & Bench

ಸುಪ್ರೀಂ ಕೋರ್ಟ್‌ ಐವರು ನ್ಯಾಯಮೂರ್ತಿಗಳ ಚಾರಿತ್ರಿಕ ಸುದ್ಠಿಗೋಷ್ಠಿ ನಡೆದ ಐದು ವರ್ಷಗಳ ಬಳಿಕ ಆ ಸುದ್ದಿಗೋಷ್ಠಿಯ ಭಾಗವಾಗಿದ್ದ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ಅದಕ್ಕೆ ಕಾರಣವಾದ ಸನ್ನಿವೇಶಗಳನ್ನು ಮೆಲುಕು ಹಾಕಿದ್ದಾರೆ.

ಕೇರಳದ ಕೋವಲಂನಲ್ಲಿ ಶುಕ್ರವಾರ ನಡೆದ ಇಂಡಿಯಾ ಟುಡೇ ಕಾನ್‌ಕ್ಲೇವ್‌ ಸೌತ್ 2023  ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ವಿಚಾರ ಹಂಚಿಕೊಂಡಿದ್ದಾರೆ.

“ನನ್ನ ಪಾಲಿಗೆ ಮಹತ್ವದ ನಿರೀಕ್ಷೆಗಳ ಸಂಗತಿಯಾಗಿದ್ದ ಇದು ಕನಿಷ್ಠ ನಿರೀಕ್ಷೆಗಳ ಸಂಗತಿಯಾಗಿ ಅಂತ್ಯಕಂಡಿತು” ಎಂದು ನ್ಯಾ. ಕುರಿಯನ್‌ ಜೋಸೆಫ್‌ ಅಭಿಪ್ರಾಯಪಟ್ಟರು. ಇದೇ ವೇಳೆ ನ್ಯಾ. ಜಸ್ತಿ ಚಲಮೇಶ್ವರ್‌ ಮಾತನಾಡಿ ಸುದ್ಠಿಗೋಷ್ಠಿಯಿಂದ ಏನನ್ನೋ ಸಾಧಿಸುವ ಉದ್ದೇಶ ಇರಲಿಲ್ಲ. ಇದು ಕೆಲವು ಅಕ್ರಮಗಳನ್ನು ಎತ್ತಿ ತೋರಿಸುವ ಉದ್ದೇಶ ಹೊಂದಿತ್ತು ಎಂದರು.

ನ್ಯಾ, ಜೋಸೆಫ್‌ ಅವರ ಅಭಿಪ್ರಾಯದ ಪ್ರಮುಖಾಂಶಗಳು

  • ಮಾಸ್ಟರ್‌ ಆಫ್‌ ರೋಸ್ಟರ್‌ ಎಂದು ಬಿಂಬಿತವಾದ ಸಿಜೆಐ ಯಾವ ಪೀಠದ ಮುಂದೆ ಯಾವ ಪ್ರಕರಣ ಬರಬೇಕು ಎಂಬುದನ್ನು ನಿರ್ಧರಿಸುತ್ತಾರೆ…  ಸುದ್ಠಿಗೋಷ್ಠಿ ಈ ಕುರಿತಾಗಿ ಸಂದೇಶ ರವಾನಿಸಲಿದೆ ಎಂದು ನನ್ನ ನಂಬಿಕೆಯಾಗಿತ್ತು.

  •  ಆರು ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ಮೂರು ಬಾರಿ ಪೂರ್ಣ ನ್ಯಾಯಾಲಯ ಕಲಾಪಗಳನ್ನು ನಡೆಸಿತ್ತು. ಆದರೆ, ಹೈಕೋರ್ಟ್‌ಗಳಲ್ಲಿ ಪೂರ್ಣ ನ್ಯಾಯಾಲಯವನ್ನು ಆರು ತಿಂಗಳಿಗೊಮ್ಮೆ ನಡೆಸಲಾಗುತ್ತದೆ. ಇಲ್ಲವಾದರೆ ಅನಿಯಂತ್ರಿತತೆ ಇದೆ ಎಂದರ್ಥ.

  • ಸುದ್ಠಿಗೋಷ್ಠಿಯ ನಂತರ ಪ್ರಸಕ್ತ ಮುಖ್ಯ ನ್ಯಾಮೂರ್ತಿ ಡಿ ವೈ ಚಂದ್ರಚೂಡ್‌ ಅವರೂ ಸೇರಿದಂತೆ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾದವರು ಮುಂದೆ ಇಂತಹ ಪರಿಸ್ಥಿತಿ ಎದುರಾಗದಂತೆ ಸಭೆಗಳನ್ನು ನಡೆಸಿದರು. ಸುದ್ದಿಗೋಷ್ಠಿಯು ಕಾರ್ಯಭಾರ ಹಂಚಿಕೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ ಎಂದು ನಾವು ಭಾವನೆಯಾಗಿತ್ತು.

  • ಎಂದಿಗೂ ಸಾಂವಿಧಾನಿಕ ಪೀಠದ ಭಾಗವಾಗಿ ವಿಚಾರಣೆ ನಡೆಸದ ನ್ಯಾಯಮೂರ್ತಿಗಳಿದ್ದಾರೆ. ಅಂತೆಯೇ ನಿರಂತರವಾಗಿ ಅಂತಹ ಪೀಠದ ಭಾಗವಾದವರೂ ಇದ್ದಾರೆ. ನಾನು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ಈ ಅಂಶ ಮುಖ್ಯ ಕಾರಣವಾಗಿತ್ತು. ಯಾವುದೇ ಸಮಾಲೋಚನೆಗಳು ನಡೆಯುತ್ತಿರಲಿಲ್ಲ. ಆದರೆ ಆನಂತರವೂ ಯಾವುದೇ ಬದಲಾವಣೆಯ ಲಕ್ಷಣಗಳು ಗೋಚರಿಸಲಿಲ್ಲ.

  • ಆಗ (ಈ ವಿಷಯಗಳ ಕುರಿತಾಗಿ) ಕೆಲವು ವಿಚಾರಗಳನ್ನು ಮಂಡಿಸಿದ್ದ ಇಂದಿನ ಸಿಜೆಐ ಅವರು ಅದನ್ನು ನೆನೆಪಿನಲ್ಲಿರಿಸಿಕೊಂಡಿದ್ದಾರೆ ಎಂದು ಭಾವಿಸುತ್ತೇನೆ ಮತ್ತು ನ್ಯಾಯದಾನದ ಹಿತಾಸಕ್ತಿಯ ನಿಟ್ಟಿನಲ್ಲಿ ಸಂಸ್ಥೆಯನ್ನು ಮುನ್ನಡೆಸುತ್ತಾರೆ ಎಂದು ಆಶಿಸುತ್ತೇನೆ, ವಿನಂತಿಸುತ್ತೇನೆ.

ನ್ಯಾ. ಚಲಮೇಶ್ವರ್‌ ಅವರ ಪ್ರಮುಖ ಅನಿಸಿಕೆಗಳು

  • ಕೆಲವೊಂದು ನೇರ್ಪು ಮಾರ್ಪಾಡುಗಳ ಅಗತ್ಯವಿತ್ತು. ಅದು ಈ ದೇಶದ ಜನರಿಗೆ ತಿಳಿದಿರಬೇಕು ಎಂದು ನಾವು ಭಾವಿಸಿದೆವು. ಏಕೆಂದರೆ ಅಂತಿಮವಾಗಿ ಏನು ಮಾಡಬೇಕು ಎನ್ನುವುದನ್ನು ಜನರು ನಿರ್ಧರಿಸಬೇಕು. ಓರ್ವ ಮುಕ್ತ ನಾಗರಿಕನಾಗಿ ನಾನು ನನ್ನ ದೃಷ್ಟಿಕೋನವನ್ನು ಅಧಿಕೃತವಾಗಿ ಇರಿಸುವ ಅಧಿಕಾರ ಹೊಂದಿದ್ದೇನೆ. ಹೀಗಾಗಿ, ಎಲ್ಲರೂ ಸ್ವಯಂ ಪ್ರೇರಿತರಾಗಿ ಒಗ್ಗೂಡಿದೆವು. ಯಾರನ್ನೂ ಬಲವಂತವಾಗಿ ಕರೆತರಲು ಮುಂದಾಗಲಿಲ್ಲ, ಆದರೆ ನನ್ನ ನಿವಾಸದಲ್ಲಿ ನಡೆದಿದ್ದರಿಂದ ಅಂತಹದೊಂದ ಭಾವನೆ ತರಿಸುವ ಪ್ರಯತ್ನ ನಡೆಸಲಾಯಿತು.

  • ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಎನ್‌ಜೆಎಸಿ ವ್ಯವಸ್ಥೆಯನ್ನು ಎತ್ತಿಹಿಡಿದು ಮಹತ್ವದ ಭಿನ್ನ ತೀರ್ಪು ಬರೆದಿದ್ದ  ನ್ಯಾ. ಚೆಲಮೇಶ್ವರ್ ಆ ತೀರ್ಪು ಬರೆದದ್ದು ಸರಿ ಎಂದರು. ಈ ಬಗ್ಗೆ ವಿವರಿಸುತ್ತಾ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಚುನಾಯಿತ ಸರ್ಕಾರಕ್ಕೆ ತನ್ನ ಅಭಿಪ್ರಾಯ ತಿಳಿಸಲು ಅವಕಾಶ ಇರಬೇಕು ಎಂದರು.

  • (ಕೊಲಿಜಿಯಂ ಸಭೆಗಳಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದನ್ನು ಪ್ರಸ್ತಾಪಿಸುತ್ತಾ) ಕೊಲಿಜಿಯಂ ನಿರ್ಣಯಗಳು ಅಪಾರದರ್ಶಕವಾದುದಾಗಿದೆ.

  • ನ್ಯಾಯಮೂರ್ತಿಗಳ ವರ್ಗಾವಣೆಯಂತಹ ಆಡಳಿತಾತ್ಮಕ ಅಧಿಕಾರ ಚಲಾಯಿಸಲು ಪೂರ್ಣ ನ್ಯಾಯಾಲಯದ ಸಭೆ ನಡೆಯಬೇಕು.

  • ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಲ್ಲೇ ಅಧಿಕಾರ ಕೇಂದ್ರೀಕರಣವಾಗುವುದು ಅಂತಹುದನ್ನು ತಪ್ಪಿಸುವಂತಹ ಕಾಲನ ಪರೀಕ್ಷೆಯಲ್ಲಿ ಗೆದ್ದಿರುವ ಸಾಂವಿಧಾನಿಕ ವ್ಯವಸ್ಥೆಗೆ ವಿರುದ್ಧವಾದದ್ದು ಎಂದರು.