Javed Akhtar, Kangana Ranaut
Javed Akhtar, Kangana Ranaut 
ಸುದ್ದಿಗಳು

ಕಂಗನಾ ವಿರುದ್ಧ ಜಾವೇದ್ ಮಾನನಷ್ಟ ಮೊಕದ್ದಮೆ: ನಾಳೆ ಆದೇಶ ಪ್ರಕಟಿಸಲಿರುವ ಮುಂಬೈ ಸೆಷನ್ಸ್ ನ್ಯಾಯಾಲಯ

Bar & Bench

ತಮ್ಮ ವಿರುದ್ಧ ಬಾಲಿವುಡ್‌ನ ಖ್ಯಾತ ಗೀತರಚನೆಕಾರ ಜಾವೇದ್‌ ಅಖ್ತರ್‌ ಅವರು ಅಂಧೇರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಶ್ನಿಸಿ ನಟಿ ಕಂಗನಾ ರನೌತ್‌ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದಿಂಡೋಶಿಯ ಸೆಷನ್ಸ್‌ ನ್ಯಾಯಾಲಯ ಸೋಮವಾರ (ಏ. 5)ರಂದು ಆದೇಶ ನೀಡಲಿದೆ.

ತನ್ನ ಕ್ರಿಮಿನಲ್‌ ಪರಿಶೀಲನಾ ಅರ್ಜಿಯಲ್ಲಿ ಕಂಗನಾ ಅವರು ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಧೀಶ ಆರ್‌ ಆರ್‌ ಖಾನ್‌ ನೀಡಿದ್ದ ಜಾಮೀನು ಸಹಿತ ವಾರೆಂಟ್‌ ಆದೇಶದ ಕಾನೂನುಬದ್ಧತೆ ಮತ್ತು ಸಿಂಧುತ್ವವನ್ನು ಪ್ರಶ್ನಿಸಿದ್ದರು.

ಕಂಗನಾ ಪರ ಹಾಜರಾದ ವಕೀಲ ರಿಜ್ವಾನ್ ಸಿದ್ದಿಕಿ ಅವರು ಸೆಕ್ಷನ್ 200 ಅನ್ನು ಅವಲಂಬಿಸಿದ್ದಾರೆ. ದೂರುದಾರ ಮತ್ತು ಸಾಕ್ಷಿ ಇಬ್ಬರನ್ನೂ ಪ್ರಮಾಣವಚನದ ಮೂಲಕ ಮ್ಯಾಜಿಸ್ಟ್ರೇಟ್ ಪರೀಕ್ಷಿಸಬೇಕಿದ್ದು ಹೇಳಿಕೆಗೆ ಮ್ಯಾಜಿಸ್ಟೇಟ್‌ ಸಹಿ ಹಾಕಬೇಕು ಎಂದು ಸೆಕ್ಷನ್ 200 ಹೇಳುತ್ತದೆ. ಆದರೆ ಮ್ಯಾಜಿಸ್ಟ್ರೇಟ್‌ ಅವರು ಪ್ರಮಾಣವಚನದ ಮೂಲಕ ಸಾಕ್ಷಿಗಳ ಹೇಳಿಕೆ ದಾಖಲಿಸದ ಕಾರಣ ಫೆಬ್ರವರಿ 1ರಂದು ಹೊರಡಿಸಿದ್ದ ಸಮನ್ಸ್ ಆದೇಶವನ್ನು ಬದಿಗಿರಿಸಬೇಕು. ಜೊತೆಗೆ ಕಂಗನಾ ವಿರುದ್ಧದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಬೇಕೆಂದು ಅವರು ಕೋರಿದರು.

ಇದನ್ನು ವಿರೋಧಿಸಿದ ಅಖ್ತರ್ ಪರ ವಕೀಲ ಜಯ್‌ ಕೆ ಭಾರದ್ವಾಜ್ ಅವರು ದೂರುದಾರರನ್ನು ಮತ್ತು ಸಾಕ್ಷಿಯನ್ನು ಹಾಜರುಪಡಿಸಿದಾಗ ಮಾತ್ರ ಪ್ರಮಾಣವಚನದ ಮೂಲಕ ಪರೀಕ್ಷಿಸಲು ಅವಕಾಶವಿದೆ ಎಂದು ವಾದಿಸಿದರು. ಈ ಸಂಬಂಧ ವಿಜಯ್‌ ಧನುಕಾ ಮತ್ತು ನಜೀಮಾ ಮಮ್ತಾಜ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದರು.

ಕಂಗನಾ ಅವರಿಗೆ ಸಮನ್ಸ್‌ ನೀಡುವ ಮೂಲಕ ದೂರಿಗೆ ಸ್ಪಂದಿಸಲು ನ್ಯಾಯಯುತ ಅವಕಾಶ ನೀಡಲಾಗಿದೆ. ಅವಕಾಶವನ್ನು ಬಳಸಿಕೊಳ್ಳುವ ಬದಲು ಕಂಗನಾ ಅವರು ಸಮನ್ಸ್‌ ಬಗ್ಗೆ ಉತ್ತಮ ಅಭಿರುಚಿಯಿಲ್ಲದ ಟ್ವೀಟ್‌ ಮಾಡಿದರು. ಅಲ್ಲದೆ ಸಮನ್ಸ್‌ ಆದೇಶ ಜಾರಿಗೊಳಿಸುವ ಮೊದಲು ಮ್ಯಾಜಿಸ್ಟ್ರೇಟ್‌ ಎಲ್ಲಾ ದಾಖಲೆ ಪರಿಗಣಿಸಿದ್ದರು ಎಂದು ವಾದಿಸಿದರು.

ಪ್ರಕರಣದ ಸಂಬಂಧ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಎಸ್‌ ಯು ಬಘೇಲೆ ಅವರು ನಾಳೆ ಆದೇಶ ಪ್ರಕಟಿಸಲಿದ್ದಾರೆ.