ಎನ್‌ಎಲ್‌ಎಸ್‌ಐಯು, ಕರ್ನಾಟಕ ಹೈಕೋರ್ಟ್
ಎನ್‌ಎಲ್‌ಎಸ್‌ಐಯು, ಕರ್ನಾಟಕ ಹೈಕೋರ್ಟ್  
ಸುದ್ದಿಗಳು

ಸ್ಥಳೀಯರಿಗೆ ಶೇ 25 ಮೀಸಲಾತಿ ನೀಡುವ ರಾಷ್ಟ್ರೀಯ ಕಾನೂನು ಶಾಲೆ ತಿದ್ದುಪಡಿ ಕಾಯಿದೆ ರದ್ದುಗೊಳಿಸಿದ ಹೈಕೋರ್ಟ್

Bar & Bench

ರಾಜ್ಯದಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಲ್ಲಿ ಶೇ 25ರಷ್ಟು ಮೀಸಲಾತಿ ಕಲ್ಪಿಸುವ 2020ರ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ತಿದ್ದುಪಡಿ ಕಾಯಿದೆಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ.

ಸ್ಥಳೀಯರಿಗೆ ಶೇ.25 ಮೀಸಲಾತಿ ಕಲ್ಪಿಸುವುದನ್ನು ಪ್ರಶ್ನಿಸಿದ್ದ ಹಲವು ಅರ್ಜಿಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾ. ಬಿ ವಿ ನಾಗರತ್ನ ಮತ್ತು ನ್ಯಾ. ರವಿ ಹೊಸಮನಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಿಶ್ವವಿದ್ಯಾಲಯದ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಪ್ರವೇಶಾವಕಾಶ ಕಲ್ಪಿಸಬೇಕಿದ್ದ ಸಂದರ್ಭದಲ್ಲಿ ನ್ಯಾಯಾಲಯ ಈ ಹಿಂದೆ ಎನ್‌ಎಲ್‌ಎಸ್‌ಐಯು ತಿದ್ದುಪಡಿ ಕಾಯಿದೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಟ್ಟಮೊದಲು ಸಿಎಲ್ಎಟಿ ಆಕಾಂಕ್ಷಿ 17 ವರ್ಷದ ಬಾಲಚಂದರ್ ಕೃಷ್ಣನ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಎನ್‌ಎಲ್‌ಎಸ್‌ಐಯುನಲ್ಲಿ ಸೀಟು ಪಡೆಯುವ ಅವಕಾಶದ ಮೇಲೆ ತಿದ್ದುಪಡಿ ಕಾಯಿದೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಮನವಿಯಲ್ಲಿ ಕೋರಲಾಗಿತ್ತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕೆ ಜಿ ರಾಘವನ್ ಮತ್ತು ವಕೀಲ ಕರಣ್ ಜೋಸೆಫ್ ಹಾಜರಿದ್ದರು.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ (ಪಿಐಎಲ್) ಸ್ವರೂಪದಲ್ಲಿರುವ ಎರಡನೆಯ ಅರ್ಜಿಯನ್ನು ವಕೀಲ ಸಿ ಕೆ ನಂದಕುಮಾರ್ ಅವರು ನ್ಯಾಯಾಲಯದ ಮುಂದಿರಿಸಿದ್ದರು.

ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಅರ್ಜಿ ಸಲ್ಲಿಸಿತ್ತು. ಬಿಸಿಐ ಜೊತೆ ಪೂರ್ವಸಮಾಲೋಚನೆ ಮಾಡದೆ ಕರ್ನಾಟಕ ಸರ್ಕಾರ ತಿದ್ದುಪಡಿ ಕಾಯಿದೆ ಜಾರಿಗೆ ತಂದಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಬಿಸಿಐ ಪರವಾಗಿ ಹಿರಿಯ ವಕೀಲ ವಿಕ್ರಂಜಿತ್ ಬ್ಯಾನರ್ಜಿ ಮತ್ತು ವಕೀಲ ಶ್ರೀಧರ್ ಪ್ರಭು ಹಾಜರಿದ್ದರು.