Karnataka HC
Karnataka HC 
ಸುದ್ದಿಗಳು

ಬಿಪಿಎಲ್‌ ಕುಟುಂಬಕ್ಕೆ ಸೀಮಿತವಾಗದೆ ಎಲ್ಲ ಮನೆಗೆಲಸದವರಿಗೆ ₹2,000 ಪರಿಹಾರ ನೀಡಲು ಸರ್ಕಾರಕ್ಕೆ ಹೈಕೋರ್ಟ್‌ ಸಲಹೆ

Bar & Bench

ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್‌) ಮಾತ್ರವಲ್ಲದೇ ಎಲ್ಲ ಮನೆಗೆಲಸದವರಿಗೆ ರೂ. 2,000 ಪರಿಹಾರ ನೀಡುವಂತೆ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಉದ್ಭವಿಸಿರುವ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೆ ರೂ. 2,000 ಪಾವತಿಸುವ ಸಂಬಂಧ ಮೇ 20ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಅದರೆ, ಬಡತನ ರೇಖೆಯಡಿ ಬರುವ ಕಾರ್ಮಿಕರಿಗೆ ಮಾತ್ರ ರೂ. 2,000 ಪಾವತಿಸಲಾಗುವುದು ಎಂದು ರಾಜ್ಯ ಸರ್ಕಾರವು ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿತು. ಇದನ್ನು ಎಲ್ಲ ಮನೆಗೆಲಸದವರಿಗೂ ವಿಸ್ತರಿಸುವುದನ್ನು ಸರ್ಕಾರ ಪರಿಗಣಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರಿದ್ದ ವಿಭಾಗೀಯ ಪೀಠವು ಹೇಳಿದೆ.

“ಸಾಂಕ್ರಾಮಿಕತೆಯಿಂದ ತೊಂದರೆಗೆ ಸಿಲುಕಿರುವ ಅಸಂಘಟಿತ ವಲಯದವರಿಗಾಗಿ ಯೋಜನೆ ಜಾರಿಗೊಳಿಸಲಾಗಿದೆ. ಮೇಲೆ ಹೇಳಲಾದ ಸರ್ಕಾರಿ ಆದೇಶದ ಸೆಕ್ಷನ್‌ 8ರಲ್ಲಿ ಪರಿಷ್ಕರಣೆ ಮಾಡುವುದು ಒಳಿತು. ಈ ಕುರಿತು ಅಡ್ವೊಕೇಟ್‌ ಜನರಲ್‌ ಮಾಹಿತಿ ಪಡೆಯಬಹುದು ಎಂದಿರುವ ಪೀಠವು ವಿಚಾರಣೆಯನ್ನು ಆಗಸ್ಟ್‌ 6ಕ್ಕೆ ನಿಗದಿಗೊಳಿಸಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮನೆಗೆಲಸದವರನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯಿದೆ ಮತ್ತು ಸಂಬಂಧಿತ ನಿಯಮಗಳು 2009ರ ಅಡಿ ನೋಂದಣಿ ಮಾಡಲು ಆದೇಶಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.

ಬಿಪಿಎಲ್‌ ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗುವುದು ಎಂದು ಹೇಳಿದ್ದ ಸರ್ಕಾರದ ನಿಲುವಿಗೆ ವಕೀಲ ಕ್ಲಿಫ್ಟನ್‌ ಡಿ ರೊಜಾರಿಯೊ ವಿರೋಧ ವ್ಯಕ್ತಪಡಿಸಿದರು. ತಮ್ಮ ನಿಲುವನ್ನು ಸಮರ್ಥಿಸಲು ಅವರು ಜೂನ್‌ 30ರ ತೀರ್ಪನ್ನು ಆಧರಿಸಿದ್ದರು.

ವಾದ ಆಲಿಸಿದ ಪೀಠವು “ನಿರ್ದಿಷ್ಟ ಕಾಯಿದೆ ಅಡಿ ನೋಂದಾಯಿಸಿಕೊಳ್ಳುವುದರಿಂದ ಅವರಿಗೆ ಅಗತ್ಯ ಪ್ರಾತಿನಿಧ್ಯ ದೊರೆಯುವುದಿಲ್ಲ. ಈ ಕಾರಣಕ್ಕಾಗಿಯೇ ಸರ್ಕಾರ ಈ ಯೋಜನೆ ಜಾರಿ ಮಾಡಿದೆ. ಕೋವಿಡ್‌ ಸಂದರ್ಭದಲ್ಲಿ ನಾವು ಜನರ ಹಕ್ಕುಗಳು ಮತ್ತು ಕಲ್ಯಾಣ ರಾಜ್ಯದ ಕರ್ತವ್ಯದ ಬಗ್ಗೆ ನೋಡಬೇಕು” ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು.

“ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯಿಂದ ಈ ವಿಭಾಗದ ಕೆಲಸಗಾರರು ಸಾಕಷ್ಟು ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಸಾಂಕ್ರಾಮಿಕತೆಯಿಂದಾಗಿ ಬಡತನ ರೇಖೆಯಡಿ ಇಲ್ಲದವರೂ ಬಿಪಿಎಲ್‌ ಅಡಿ ಸೇರುವಂತಾಗಿದೆ ಎಂಬುದಕ್ಕೆ ಉದಾಹರಣೆಗಳಿವೆ” ಎಂದು ಪೀಠ ಆದೇಶದಲ್ಲಿ ದಾಖಲಿಸಿತು.

ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿರುವ ರೂ. 2,000 ಪಡೆಯುವ ಸಂಬಂಧ ಅಸಂಘಟಿತ ವಲಯದ ಜನರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಲು ಇರುವ ಪ್ರಾಯೋಗಿಕ ಸಾಧ್ಯತೆಗಳ ಬಗ್ಗೆ ಸರ್ಕಾರವನ್ನು ಹೈಕೋರ್ಟ್‌ ಪ್ರಶ್ನಿಸಿತ್ತು.