Chief Justice Abhay Shreeniwas Oka and Justice Vishwajith Shetty
Chief Justice Abhay Shreeniwas Oka and Justice Vishwajith Shetty 
ಸುದ್ದಿಗಳು

ರಾಜಕಾರಣಿಗಳ ವಿರುದ್ಧದ 61 ಕ್ರಿಮಿನಲ್‌ ಪ್ರಕರಣಗಳ ಕೈಬಿಡುವ ಕರ್ನಾಟಕ ಸರ್ಕಾರದ ಅಧಿಸೂಚನೆಗೆ ತಡೆ ನೀಡಿದ ಹೈಕೋರ್ಟ್‌

Bar & Bench

ಮಹತ್ವದ ಆದೇಶವೊಂದರಲ್ಲಿ ಕರ್ನಾಟಕ ಹೈಕೋರ್ಟ್‌, ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ 61 ಕ್ರಿಮಿನಲ್‌ ಪ್ರಕರಣಗಳನ್ನು ಕೈಬಿಡುವ ಸಂಬಂಧ ಆಗಸ್ಟ್‌ 31ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಸೋಮವಾರ ತಡೆ ನೀಡಿದೆ.

ಈ ಮೂಲಕ ಶಾಸಕರು/ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆ ವೇಳೆ ನಡೆಯುವ ರಾಜಕೀಯ ಹಸ್ತಕ್ಷೇಪ ಕುರಿತಂತೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾ. ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಪ್ರಬಲ ಸಂದೇಶ ರವಾನಿಸಿದೆ.

“ ಆಗಸ್ಟ್‌ 31, 2020ರ (ಸರ್ಕಾರದ) ಆದೇಶ ಆಧರಿಸಿ ಯಾವುದೇ ಕ್ರಮಕೈಗೊಳ್ಳದಂತೆ ನಿರ್ದೇಶಿಸುತ್ತಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ. ಈ ಸಂಬಂಧ ಆಕ್ಷೇಪಣೆಗಳಿದ್ದರೆ 2021ರ ಜನವರಿ 22ರ ಒಳಗೆ ಆಕ್ಷೇಪಣೆ ಸಲ್ಲಿಬಹುದು ಎಂದು ಕೂಡ ರಾಜ್ಯ ಸರ್ಕಾರಕ್ಕೆ ಪೀಠ ಸೂಚಿಸಿದೆ.

ಸಿಆರ್‌ಪಿಸಿ ಸೆಕ್ಷನ್‌ 321ರ ಅಡಿ ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ 61 ಕ್ರಿಮಿನಲ್‌ ಪ್ರಕರಣಗಳನ್ನು ಕೈಬಿಡುವ ಸಂಬಂಧ ಆಗಸ್ಟ್‌ 31ರಂದು ರಾಜ್ಯ ಸರ್ಕಾರ ಕೈಗೊಂಡಿದ್ದ ನಿರ್ಧಾರ ಪ್ರಶ್ನಿಸಿ ಸರ್ಕಾರೇತರ ಸಂಸ್ಥೆ ʼಪೀಪಲ್ಸ್‌ ಯೂನಿಯನ್‌ ಆಫ್‌ ಸಿವಿಲ್‌ ಲಿಬರ್ಟೀಸ್‌ (ಪಿಯುಸಿಎಲ್‌) ಸಲ್ಲಿಸಿರುವ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಜನವರಿ 29ಕ್ಕೆ ವಿಚಾರಣೆ ಮುಂದೂಡಲಾಗಿದೆ.