ಮಾಂಸಾಹಾರದ ಹೋಟೆಲ್‌
ಮಾಂಸಾಹಾರದ ಹೋಟೆಲ್‌ ಕೇವಲ ಪ್ರಾತಿನಿಧಿಕ ಉದ್ದೇಶಕ್ಕಾಗಿ ಬಳಸಿದ ಚಿತ್ರ
ಸುದ್ದಿಗಳು

ಶವರ್ಮಾ ಸೇವಿಸಿ ಸಾವು ಪ್ರಕರಣ: ಕೇರಳದ ರೆಸ್ಟರಂಟ್ ಮಾಲೀಕನಿಗೆ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್

Bar & Bench

ಅಸುರಕ್ಷಿತ ಶವರ್ಮಾ (ಮಾಂಸದ ಪದರ) ಮಾರಾಟ ಮಾಡಿ ಗ್ರಾಹಕರೊಬ್ಬರ ಸಾವಿಗೆ ಕಾರಣವಾದ ಆರೋಪ ಎದುರಿಸುತ್ತಿದ್ದ ಕೇರಳದ ರೆಸ್ಟರಂಟ್‌ ಒಂದರ ಮಾಲೀಕನನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ [ಶಿಹಾದ್‌ ಎಂ ಪಿ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಅರ್ಜಿದಾರ ಶಿಹಾದ್ ಎಂ ಪಿಗೆ ರಕ್ಷಣೆ ನೀಡಿದ ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಾಸಿಹ್ ಅವರನ್ನೊಳಗೊಂಡ ಪೀಠ ತನಿಖಾ ಸಂಸ್ಥೆಯೊಂದಿಗೆ ಸಹಕರಿಸುವಂತೆ ಆತನಿಗೆ ಸೂಚಿಸಿದೆ.

ಎರ್ನಾಕುಲಂನ ತ್ರಿಕ್ಕಕರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅಜಿದಾರರನ್ನು ಮುಂದಿನ ವಿಚಾರಣೆ ದಿನದವರೆಗೆ ಬಂಧಿಸಬಾರದು ಎಂದು ನ್ಯಾಯಾಲಯದ ಆದೇಶ ತಿಳಿಸಿದೆ.

ಪ್ರಕರಣದ ಸಂಬಂಧ ಕೇರಳ ಸರ್ಕಾರಕ್ಕೆ ನೋಟಿಸ್‌ ನೀಡಿರುವ ಸುಪ್ರೀಂ ಕೋರ್ಟ್‌ ಮೂರು ವಾರಗಳ ಬಳಿಕ ಮತ್ತೆ ಪ್ರಕರಣದ ವಿಚಾರಣೆ ನಡೆಸಲಿದೆ.

ಕೇರಳ ಹೈಕೋರ್ಟ್ ಈ ಹಿಂದೆ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿತ್ತು. ತ್ರಿಕ್ಕಕರದಲ್ಲಿರುವ ಲೆ ಹಯಾತ್ ರೆಸ್ಟೋರೆಂಟ್ ವಿರುದ್ಧದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್‌ ನ್ಯಾಯಮೂರ್ತಿ ಮೊಹಮ್ಮದ್ ನಿಯಾಸ್ ಸಿ ಪಿ ಪರಿಹಾರ ನಿರಾಕರಿಸಿದ್ದರು.

ಕಳೆದ ಅಕ್ಟೋಬರ್‌ನಲ್ಲಿ ಗ್ರಾಹಕರೊಬ್ಬರು ಆಹಾರ ವಿತರಣಾ ಸೇವಾ ಪೂರೈಕೆದಾರ ಜೊಮಾಟೊ ಮೂಲಕ ಶವರ್ಮಾ ಆರ್ಡರ್‌ ಮಾಡಿದ್ದರು. ಅದನ್ನು ಸೇವಿಸಿ ಮೂರು ದಿನಗಳ ಬಳಿಕ ಅವರು ಸಾವನ್ನಪ್ಪಿದ್ದರು.

ಪೊಲೀಸರು ರೆಸ್ಟರಂಟ್‌ ಮಾಲೀಕನ ವಿರುದ್ಧ ಐಪಿಸಿ ಸೆಕ್ಷನ್ 284 (ವಿಷಕಾರಿ ವಸ್ತುಗಳನ್ನು ಬಳಸುವ ನಿರ್ಲಕ್ಷ್ಯದ ನಡೆ) ಮತ್ತು 308ರ (ನಿಜವಾದ ಸಾವಿಗೆ ಕಾರಣವಾಗದೆ ಗಂಭೀರ ಹಾನಿ ಉಂಟುಮಾಡುವ ಉದ್ದೇಶಪೂರ್ವಕವಲ್ಲದ ನರಹತ್ಯೆ) ಅಡಿ ಪ್ರಕರಣ ದಾಖಲಿಸಿದ್ದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

SHIHAD M.P. versus The State of Kerala & Anr.pdf
Preview