ಸುದ್ದಿಗಳು

ಗೆಲುವು ಪ್ರಶ್ನಿಸಿದ ಬಿಜೆಪಿ ಅಭ್ಯರ್ಥಿ: ಸಂಸದೆ ಪ್ರಿಯಾಂಕಾ ಗಾಂಧಿಗೆ ಕೇರಳ ಹೈಕೋರ್ಟ್ ಸಮನ್ಸ್

ವಯನಾಡ್‌ನಿಂದ ಸ್ಪರ್ಧಿಸಿದ್ದ ಪ್ರಿಯಾಂಕಾ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದರು ಮತ್ತು ಆಸ್ತಿ ವಿವರ ಮುಚ್ಚಿಟ್ಟಿದ್ದರು ಎಂದು ಆರೋಪಿಸಲಾಗಿದೆ.

Bar & Bench

ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ 2024ರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜಯಶಾಲಿಯಾಗಿದ್ದನ್ನು ಪ್ರಶ್ನಿಸಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನವ್ಯಾ ಹರಿದಾಸ್ ಸಲ್ಲಿಸಿದ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಮಂಗಳವಾರ ಪ್ರಿಯಾಂಕಾ ಅವರಿಗೆ ಸಮನ್ಸ್ ಜಾರಿ ಮಾಡಿದೆ [ನವ್ಯಾ ಹರಿದಾಸ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ನಡುವಣ ಪ್ರಕರಣ].

ನವ್ಯಾ ಪರ ವಕೀಲ ಹರಿ ಕುಮಾರ್ ಜಿ ನಾಯರ್  ವಾದ ಆಲಿಸಿದ ನ್ಯಾಯಮೂರ್ತಿ ಕೆ ಬಾಬು ಅವರು ಪ್ರಿಯಾಂಕಾ ಅವರಿಗೆ ಸಮನ್ಸ್ ಜಾರಿ ಮಾಡುವಂತೆ ನಿರ್ದೇಶಿಸಿದರು. ಪ್ರಕರಣದ ವಿಚಾರಣೆ ಆಗಸ್ಟ್‌ನಲ್ಲಿ ನಡೆಯಲಿದೆ.

ನವ್ಯಾ ಅವರು ನವೆಂಬರ್ 13ರಂದು ವಯನಾಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಪ್ರಿಯಾಂಕಾ 5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು. ಸಿಪಿಎಂ ಪಕ್ಷದ ಸತ್ಯನ್ ಮೊಕೇರಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ ನವ್ಯಾ ಮೂರನೇ ಸ್ಥಾನ ಗಳಿಸಿದ್ದರು.

ಪ್ರಿಯಾಂಕಾ ಅವರ ತಮ್ಮ ಪತಿ ರಾಬರ್ಟ್‌ ವಾದ್ರಾ ಒಡೆತನದ ಹಲವು ಸ್ಥಿರಾಸ್ತಿ, ವಿವಿಧ ಹೂಡಿಕೆ, ಚರಾಸ್ತಿಗಳ ವಿವರ ಬಹಿರಂಗಪಡಿಸಿಲ್ಲ. ಈ ಲೋಪವು ಜನಪ್ರತಿನಿಧಿ ಕಾಯಿದೆಯಲ್ಲಿ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು ಎಂಬ ನಿಯಮದ ಉಲ್ಲಂಘನೆಯಾಗಿದೆ.

ಅಲ್ಲದೆ ಭ್ರಷ್ಟಾಚಾರದ ಮೂಲಕವೂ ಪ್ರಿಯಾಂಕಾ ಅವರು ಮತದಾರರ ದಾರಿ ತಪ್ಪಿಸಿ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿದ್ದಾರೆ ಎಂದು ನವ್ಯಾ ದೂರಿದ್ದಾರೆ. ಹೀಗಾಗಿ ಅವರ ಚುನಾವಣೆಯನ್ನು ಅನೂರ್ಜಿತಗೊಳಿಸುವಂತೆ ನವ್ಯಾ ಕೋರಿದ್ದಾರೆ.